ಉಡುಪಿ: ಕೆಎಸ್ಐಸಿ ಸಂಸ್ಥೆಯ ಪಾರಂಪರಿಕ ಉತ್ಪನ್ನವಾದ ಮೈಸೂರು ರೇಷ್ಮೆಸೀರೆಗಳು ಇಂದಿಗೂ ಗುಣಮಟ್ಟವನ್ನು ಕಾಯ್ದುಕೊಂಡು ಮಹಿಳೆಯರ ಮನಗೆದ್ದಿವೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.
ನಗರದ ಡಯಾನ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ಹಮ್ಮಿಕೊಂಡಿದ್ದ ಮೈಸೂರು ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರೇಷ್ಮೆ ಸೀರೆ ಸಂಸ್ಕೃತಿ ಹಾಗೂ ಪರಂಪರೆಯ ಸಂಕೇತವಾಗಿದ್ದು, ರೇಷ್ಮೆ ಸೀರೆಗಳ ಖರೀದಿ ಮಾಡುವುದರ ಮೂಲಕ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡಬೇಕಿದೆ. ದೇಶದಲ್ಲಿ ದೊರೆಯುವ ಇತರ ರೇಷ್ಮೆ ವಸ್ತ್ರಗಳಿಗಿಂತ ಮೈಸೂರು ಸಿಲ್ಕ್ ವಿಭಿನ್ನವಾಗಿದೆ. ಇದರ ಜರಿ ಪರಿಶುದ್ಧವಾಗಿರುತ್ತದೆ. ಸೀರೆಗಳ ವಿನ್ಯಾಸ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯಿಂದ ಕೂಡಿರುತ್ತವೆ ಎಂದರು.
ಕೆಎಸ್ಐಸಿ ಮಾರುಕಟ್ಟೆ ಅಧಿಕಾರಿ ಎಸ್.ಭಾನುಪ್ರಕಾಶ್ ಮಾತನಾಡಿ, ಮೈಸೂರ್ ಸಿಲ್ಕ್ ಉತ್ಪನ್ನಗಳಿಗೆ ಭೌಗೋಳಿಕ ಗುರುತು (ಜಿಐ ಟ್ಯಾಗ್) ನೀಡಲಾಗಿದೆ. ಗುಣಮಟ್ಟ, ವಿನ್ಯಾಸ, ಆಧುನಿಕ ಮಾದರಿಗಳಿಗೆ ಈ ಮಾನ್ಯತೆ ದೊರೆತಿದೆ. ಭಾರತದಲ್ಲಿ ಸಿಗುವ ಇತರ ರೇಷ್ಮೆ ವಸ್ತ್ರಗಳಿಗಿಂತ ಮೈಸೂರು ಸಿಲ್ಕ್ ಭಿನ್ನವಾಗಿದ್ದು, ಪ್ರಾಕೃತಿಕ ರೇಷ್ಮೆ ಗೂಡಿನಿಂದ ತಯಾರಿಸಲಾಗುತ್ತದೆ. ಸೀರೆಗಳ ಉತ್ಪಾದನೆಗೆ ಉಪಯೋಗಿಸುವ ಜರಿ ಪರಿಶುದ್ಧ ಚಿನ್ನದಿಂದ ಕೂಡಿರುತ್ತದೆ. ಶೇ 0.65 ಚಿನ್ನ ಮತ್ತು ಶೇ 60ರಷ್ಟು ಬೆಳ್ಳಿಯಿಂದ ತಯಾರಿಸಲಾಗಿದೆ ಎಂದು ಹೇಳಿದರು.
ಕೆ.ಎಸ್.ಐ.ಸಿ.ಗೆ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ’ ಸಿಕ್ಕಿದೆ. ಕಳೆದ ವರ್ಷ ಕೆ.ಎಸ್.ಐ.ಸಿ ₹ 175 ಕೋಟಿ ವಹಿವಾಟು ಮಾಡಿತ್ತು. ಈ ವರ್ಷ ₹ 180 ಕೋಟಿ ವಹಿವಾಟು ಗುರಿ ಹೊಂದಲಾಗಿದೆ ಎಂದರು.
ಪ್ರದರ್ಶನ ಮತ್ತು ಮಾರಾಟ ಮೇಳ ಡಿ.22ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ನಡೆಯಲಿದೆ. ಪ್ರತಿ ಉತ್ಪನ್ನಗಳ ಮೇಲೆ ಶೇ 15 ರಿಂದ 25ವರೆಗೆ ವಿಶೇಷ ರಿಯಾಯಿತಿ ಇದೆ. ಮೇಳದಲ್ಲಿ 1000 ಸೀರೆಗಳು ಮಾರಾಟಕ್ಕೆ ಲಭ್ಯವಿವೆ. ₹ 5,000 ಆರಂಭವಾಗುವ ಬೆಲೆ ₹ 1.50ಲಕ್ಷದವರೆಗೂ ಇದೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.