ಶಿರ್ವ: ಬಂಟಕಲ್ನ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಸ್ವಾಯತ್ತತೆ ಹಾಗೂ ಅರ್ಹ ಬಿ.ಇ ಕೋರ್ಸ್ಗಳಿಗೆ ರಾಷ್ಟ್ರೀಯ ಮೌಲ್ಯಾಂಕನ ಮಂಡಳಿ ಮಾನ್ಯತೆ ಪಡೆದಿದೆ ಎಂದು ಆಡಳಿತ ಮಂಡಳಿ ಕಾರ್ಯದರ್ಶಿ ರತ್ನಕುಮಾರ್ ತಿಳಿಸಿದರು.
ಇನ್ನಂಜೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದ ಮಹಾವಿದ್ಯಾಲಯವು, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದೆ ಎಂದು ಅವರು ಹೇಳಿದರು.
ನವದೆಹಲಿಯ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನ ನಡೆಸಿ, ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಶಿಫಾರಸ್ಸಿನ ಮೇರೆಗೆ 2025–26ನೇ ಶೈಕ್ಷಣಿಕ ವರ್ಷದಿಂದ ಮುಂದಿನ 10 ವರ್ಷಗಳ ತನಕ ಶೈಕ್ಷಣಿಕ ಸ್ವಾಯತ್ತತೆ ಮಂಜೂರು ಮಾಡಿದೆ ಎಂದರು.
ರಾಷ್ಟ್ರೀಯ ಮೌಲ್ಯಾಕನ ಮಂಡಳಿ ಈಚೆಗೆ ವಿದ್ಯಾಸಂಸ್ಥೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಕೋರ್ಸ್ಗೆ ಮಾನ್ಯತೆ ನೀಡಿದೆ. ಇದರಿಂದ ಎಲ್ಲಾ ಅರ್ಹ ಪದವಿ ಕೋರ್ಸ್ಗಳು ರಾಷ್ಟ್ರೀಯ ಮೌಲ್ಯಾಂಕನ ಮಂಡಳಿಯಿಂದ ಮಾನ್ಯತೆ ಪಡೆದಂತಾಗಿದೆ. ಆವಿಷ್ಕಾರ ಘಟಕ, ಉದ್ಯಮಶೀಲತೆ ವಿಭಾಗದಲ್ಲಿ 151– 300ರಲ್ಲಿ ಸಂಸ್ಥೆಯ ಉದ್ಯಮಶೀಲ ಘಟಕ ಗುರುತಿಸಲ್ಪಟ್ಟಿದೆ. ನ್ಯಾಕ್ನಿಂದ 2ನೇ ಬಾರಿ ‘ಎ’ ಶ್ರೇಣಿಯ ಮೌಲ್ಯಂಕನ ಪಡೆದಿರುವುದು ವಿದ್ಯಾಸಂಸ್ಥೆಯ ಶೈಕ್ಷಣಿಕ ಪ್ರಗತಿಯನ್ನು ಸೂಚಿಸುತ್ತದೆ. ರಾಜ್ಯದಲ್ಲಿರುವ 250ಕ್ಕೂ ಮಿಕ್ಕಿ ತಾಂತ್ರಿಕ ಶಿಕ್ಷಣ ವಿದ್ಯಾಸಂಸ್ಥೆಗಳಲ್ಲಿ 15 ವರ್ಷಗಳ ಸೇವಾವಧಿಯಲ್ಲಿ ಶೈಕ್ಷಣಿಕ ಸ್ವಾಯತ್ತತೆ ಪಡೆದ ಬೆರಳೆಣಿಕೆಯ ವಿದ್ಯಾಸಂಸ್ಥೆಗಳಲ್ಲಿ ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯವೂ ಒಂದು ಎಂಬ ಹೆಗ್ಗೆಳಿಕೆಯೊಂದಿಗೆ ತಾಂತ್ರಿಕ ಶಿಕ್ಷಣದಲ್ಲಿ ಇನ್ನಷ್ಟು ಸಾಧನೆ ಮಾಡುವ ಯೋಜನೆಗಳೊಂದಿಗೆ ಸಂಸ್ಥೆ ದಾಪುಗಾಲು ಇಡುತ್ತಿದೆ ಎಂದು ವಿವರಿಸಿದರು.
ಶೈಕ್ಷಣಿಕ ಸ್ವಾಯತ್ತೆಯಿಂದ ವಿದ್ಯಾಸಂಸ್ಥೆಯು ಕಾಲಕಾಲಕ್ಕೆ ಪಠ್ಯ ವಿಷಯಗಳಲ್ಲಿ ಬದಲಾವಣೆ ತರುವುದು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಉತ್ತಮವಾಗಿ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು, ನೂತನ ಆವಿಷ್ಕಾರ, ಕಲಿಯುವಿಕೆ ಮೌಲ್ಯಮಾಪನ ಮಾಡುವುದು ಸುಲಭವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತುಂಬಾ ಅಗತ್ಯ ಆಗಿದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ, ಹೊಸ ಆವಿಷ್ಕಾರ ಅಳವಡಿಸಲು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸೋದೆ ವಾದಿರಾಜ ಫೌಂಡೇಷನ್ ಎಂಬ ಸೆಕ್ಷನ್ 8 ಕಂಪನಿ ಹುಟ್ಟು ಹಾಕಿದ್ದು, ಅದರ ಮೂಲಕ ಮಧ್ವ ಇನ್ಕ್ಯುಬೇಟರ್ ಫಾರ್ ಟೆಕ್ನಾಲಜಿ, ಇನೋವೇಷನ್ ಆ್ಯಂಡ್ ಎಂಟ್ರಪ್ರೆನ್ಯೂರ್ಷಿಪ್ ಎಂಬ ಇನ್ಕ್ಯುಬೇಷನ್ ಕೇಂದ್ರ ಪ್ರಾರಂಭಿಸಲಾಗಿದೆ. ಕೇಂದ್ರ ಸರ್ಕಾರದ ಎಂ.ಎಸ್.ಎಂ.ಇ ಸಚಿವಾಲಯವು ಸಂಸ್ಥೆಯ ಉದ್ಯಮಶೀಲತಾ ಘಟಕವನ್ನು ಬಿಸಿನೆಸ್ ಇನ್ಕ್ಯುಬೇಟರ್ ಆಗಿ ಗುರುತಿಸಿದೆ ಎಂದು ಮಾಹಿತಿ ನೀಡಿದರು.
ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ರಾಧಾಕೃಷ್ಣ ಎಸ್. ಐತಾಳ್, ಆಡಳಿತ ಮಂಡಳಿ ಸದಸ್ಯರಾದ ಹರೀಶ್ ಬೆಳ್ಮಣ್, ಪ್ರಾಂಶುಪಾಲ ತಿರುಮಲೇಶ್ವರ ಭಟ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.