ADVERTISEMENT

ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ: ತಮ್ಮಣ್ಣ ಶೆಟ್ಟಿ ಅಭಿಪ್ರಾಯ

‘ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರು’ ಕುರಿತು ಉಪನ್ಯಾಸ: ತಮ್ಮಣ್ಣ ಶೆಟ್ಟಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 15:34 IST
Last Updated 22 ಸೆಪ್ಟೆಂಬರ್ 2022, 15:34 IST
ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ೯೪ ನೇ ಪುಣ್ಯ ತಿಥಿಯಂದು ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರು ಎಂಬ ವಿಷಯದ ಬಗ್ಗೆ ಬುಧವಾರ ನಡೆದ ಉಪನ್ಯಾಸವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉದ್ಘಾಟಿಸಿದರು.
ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ೯೪ ನೇ ಪುಣ್ಯ ತಿಥಿಯಂದು ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರು ಎಂಬ ವಿಷಯದ ಬಗ್ಗೆ ಬುಧವಾರ ನಡೆದ ಉಪನ್ಯಾಸವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಉದ್ಘಾಟಿಸಿದರು.   

ಪಡುಬಿದ್ರಿ: ‘ದೈವಾರಾಧನೆ, ಸಂಧಿ, ಪಾಡ್ದನ, ನಾಥಪಂಥದಲ್ಲಿ ಬಿಲ್ಲವರ ಇತಿಹಾಸವಿದೆ. ತುಳುನಾಡಿನ ದೈವಾರಾಧನೆಯಲ್ಲಿ ಪ್ರಮುಖ ಪಾತ್ರ ಬಿಲ್ಲವರದ್ದು. ದೈವಾರಾಧನೆಯಲ್ಲಿ ವೈದಿಕ ಪದ್ಧತಿ ಇಲ್ಲ’ ಎಂದು ನಟ, ನಿರ್ಮಾಪಕ ತಮ್ಮಣ್ಣ ಶೆಟ್ಟಿ ಪ್ರತಿಪಾದಿಸಿದರು.

ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಯುವವಾಹಿನಿ ಘಟಕದ ಆಶ್ರಯದಲ್ಲಿ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆದ ನಾರಾಯಣಗುರುಗಳ ಸ್ಮರಣೆ ಕಾರ್ಯಕ್ರಮದಲ್ಲಿ ‘ತುಳುನಾಡಿನ ದೈವಾರಾಧನೆಯಲ್ಲಿ ಬಿಲ್ಲವರು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಅತಿಯಾಗಿದ್ದ ಕೇರಳವನ್ನು ಬದಲಿಸಿದ ಬ್ರಹ್ಮಶ್ರೀ ನಾರಾಯಣಗುರುಗಳು ಪ್ರಯೋಗ, ಪ್ರತಿಷ್ಠೆ ಹಾಗೂ ಪ್ರವೇಶ ತತ್ವವನ್ನು ಪ್ರತಿಪಾದಿಸಿದವರು’ ಎಂದರು.

ADVERTISEMENT

ಹಿಂದುವಿನ ಜ್ಞಾನ, ಬುದ್ಧನ ಕರುಣೆ, ಯೇಸುಕ್ರಿಸ್ತನ ಪ್ರೀತಿ, ಮಹಮ್ಮದರ ಸಹೋದರತೆ ವಿಶ್ವಧರ್ಮ ಎಂದು ಗುರುಗಳು ಹೇಳಿದ್ದರು. ನಾರಾಯಣಗುರು ಮತ್ತು ಭೂಮಿ ಹಕ್ಕಿನ ಕಾಯ್ದೆ ಇರದಿದ್ದರೆ ನಾವೆಲ್ಲ ಪ್ರಾಣಿಗಿಂತ ಕಡೆಯಾಗಿರುತ್ತಿದ್ದೆವು. ಈಗ ಬಿಲ್ಲವ ಸಮಾಜ ರಾಜಕೀಯ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತಿದೆ. ಗುರುಗಳ ಹೆಸರು ವೃತ್ತವೊಂದಕ್ಕೆ ಸೀಮಿತವಾಗಬಾರದು ಎಂದರು.

ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಉದಯ ಅಮೀನ್ ಮಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ ಸುಧೀರ್ ಕುಮಾರ್ ಮಾತನಾಡಿದರು. ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅರ್ಚಕ ಚಂದ್ರಶೇಖರ ಶಾಂತಿ, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಲಕ್ಷ್ಮಣ್ ಡಿ. ಪೂಜಾರಿ, ಯುವವಾಹಿನಿ ಘಟಕದ ಕಾರ್ಯದರ್ಶಿ ಐಶ್ವರ್ಯಾ ಇದ್ದರು.

ನಾರಾಯಣಗುರು ಮಹಿಳಾ ಮಂಡಳಿಯ ಸದಸ್ಯೆಯರು ಪ್ರಾರ್ಥಿಸಿದರು. ಯುವವಾಹಿನಿ ಪಡುಬಿದ್ರಿ ಘಟಕದ ಅಧ್ಯಕ್ಷ ಶಾಶ್ವತ್ ಪೂಜಾರಿ ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷೆ ಯಶೋದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿರಾಜ್ ಎನ್. ಕೋಟ್ಯಾನ್ ಮತ್ತು ಪೂರ್ಣಿಮ ವಿಧಿತ್ ನಿರೂಪಿಸಿದರು. ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕ ಸಂತೋಷ್ ಕರ್ನಿರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.