ಉಡುಪಿ: ಸಂಸತ್ನಲ್ಲಿ ಚರ್ಚೆ ನಡೆಸದೆ ಕೋವಿಡ್ ಸಂದರ್ಭದಲ್ಲಿ ತರಾತುರಿಯಲ್ಲಿ ಅನುಷ್ಠಾನಗೊಳಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕೀರ್ತಿ ಗಣೇಶ್ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ಇಷ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎನ್ಇಪಿಯಲ್ಲಿ ಇಲ್ಲ. ಪದವಿ ಪಡೆಯಲು ನಾಲ್ಕು ವರ್ಷ ಓದಬೇಕಾದ ಅನಿವಾರ್ಯತೆ ಇದ್ದು, ಕಾಲೇಜು ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎನ್ಇಪಿ ಜಾರಿಗೂ ಮುನ್ನ ಶಿಕ್ಷಕರು, ವಿದ್ಯಾರ್ಥಿಗಳ ಜತೆ ಏಕೆ ಚರ್ಚೆ ನಡೆಸಿಲ್ಲ, ಶಿಕ್ಷಣ ವ್ಯವಸ್ಥೆಯನ್ನು ವಾಣಿಜ್ಯೀಕರಣಗೊಳಿಸುತ್ತಿರುವುದು ಏಕೆ, ಮೂಲಸೌಕರ್ಯಗಳನ್ನು ಒದಗಿಸದೆ ತರಾತರಿಯಲ್ಲಿ ಎನ್ಇಪಿ ಜಾರಿ ಅಗತ್ಯವೇನಿದೆ, ಮೂರು ಭಾಷೆಗಳನ್ನು ಕಲಿಯಲೇಬೇಕು ಎಂಬ ಒತ್ತಡ ಹಾಕುತ್ತಿರುವುದು ಸರಿಯೇ ಎಂದು ಕೀರ್ತಿ ಗಣೇಶ್ ಪ್ರಶ್ನಿಸಿದರು.
2020ರ ಎನ್ಇಪಿಗಿಂತ 1986ರ ಶಿಕ್ಷಣ ನೀತಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮವಾಗಿದ್ದು, ಅದನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಫೀಕ್ ಅಲಿ, ಭರತ್ ರಾವ್, ಸೌರಭ್ ಬಲ್ಲಾಳ್, ಮಹಮ್ಮದ್ ಜಮೀರ್, ಸಾಯಿ ಕಿರಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.