ಉಡುಪಿ: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲಿ ಪ್ರಭೇದದ ಕಡಾಲಾಮೆ ಮೊಟ್ಟೆಗಳಿಗೆ ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಬೈಂದೂರು ವಲಯವು ಇದೇ ಮೊದಲ ಬಾರಿಗೆ ಗೂಡುಗಳನ್ನಿಟ್ಟು ಸಂರಕ್ಷಿಸುವ ಮೂಲಕ 300ಕ್ಕೂ ಹೆಚ್ಚು ಕಡಲಾಮೆ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಿದೆ.
ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಅಧೀನದಲ್ಲಿ ಬರುವ ಉಡುಪಿ ಹಾಗೂ ಕುಂದಾಪುರ ವಲಯದಲ್ಲಿ ಈ ಹಿಂದೆಯೂ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸುವ ಕೆಲಸ ನಡೆದಿತ್ತು. ಆದರೆ ಬೈಂದೂರು ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿ ಕಡಲಾಮೆ ಮೊಟ್ಟೆಗಳನ್ನು ಸರಂಕ್ಷಿಸುವ ಕೆಲಸ ನಡೆದಿದೆ.
ಬೈಂದೂರು ವ್ಯಾಪ್ತಿಯಲ್ಲಿ ಸಾರ್ವಜನಿಕರು ಮತ್ತು ಸಂಘಟನೆಗಳ ವತಿಯಿಂದ ಸುಮುದ್ರ ತೀರದ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಈ ಕಾರಣದಿಂದ ಕಡಲಾಮೆಗಳು ಮೊಟ್ಟೆ ಇರಿಸಲು ಬೈಂದೂರು ವ್ಯಾಪ್ತಿಗೂ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯ ಮೂಲಗಳು ಹೇಳಿವೆ.
ಬೈಂದೂರು ವಲಯದಲ್ಲಿ ಮರವಂತೆ ಕಡಲ ಕಿನಾರೆಯಲ್ಲಿ ಒಂದು ಕಡೆ ಮತ್ತು ತಾರಾಪತಿ ಕಡಲ ಕಿನಾರೆಯಲ್ಲಿ ಎರಡು ಕಡೆ ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಲಾಗಿತ್ತು. ಈ ಮೊಟ್ಟೆಗಳಿಂದ ಮರಿಗಳು ಹೊರಬಂದು ಕಡಲು ಸೇರಿವೆ.
ಮೊದಲಿಗೆ ಅರಣ್ಯ ಇಲಾಖೆಯ ವತಿಯಿಂದ ಕಡಲಾಮೆಯ ಬಗ್ಗೆ ಸ್ಥಳೀಯ ಮೀನುಗಾರರಲ್ಲಿ ಜಾಗೃತಿ ಮೂಡಿಸಲಾಗಿತ್ತು ಮತ್ತು ಸಮುದ್ರ ತೀರದಲ್ಲಿ ಮಾಹಿತಿ ಫಲಕಗಳನ್ನೂ ಸ್ಥಾಪಿಸಲಾಗಿತ್ತು. ಕಡಲಾಮೆಗಳು ಮೊಟ್ಟೆ ಇಟ್ಟಿರುವ ಸ್ಥಳಗಳನ್ನು ಗುರುತಿಸುವ ಕಾರ್ಯದಲ್ಲಿ ಸ್ಥಳೀಯರ ಸಹಕಾರ ಮಹತ್ವದ್ದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಡಲಾಮೆ ಮೊಟ್ಟೆ ಇಟ್ಟಿರುವ ಜಾಗವನ್ನು ಗುರುತಿಸಿ, ಗೂಡನ್ನು ಅಳವಡಿಸದಿದ್ದರೆ ನಾಯಿಗಳು ಆ ಮೊಟ್ಟೆಗಳಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಅಲ್ಲದೆ ಮನುಷ್ಯರು ನಡೆದಾಡುವಾಗಲೂ ಮೊಟ್ಟೆಗಳು ಒಡೆದು ಹೋಗುವ ಸಾಧ್ಯತೆಗಳೂ ಇರುತ್ತವೆ. ಮರಿಗಳು ಮೊಟ್ಟಯಿಂದ ಹೊರಬಂದು ಸಮುದ್ರ ಸೇರುವ ಹೊತ್ತಿನಲ್ಲೂ ನಾಯಿ, ಹದ್ದುಗಳ ದಾಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು.
ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಸಂರಕ್ಷಿಸಲ್ಪಟ್ಟಿದ್ದು, ಅದರ ಆವಾಸ ಸ್ಥಾನಗಳಿಗೆ ಹಾನಿ ಉಂಟುಮಾಡುವುದು, ಮೊಟ್ಟೆಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬ ವಿಚಾರವನ್ನು ಅರಣ್ಯ ಇಲಾಖೆಯು ಸಮುದ್ರ ತೀರದ ನಿವಾಸಿಗಳಿಗೆ, ಮೀನುಗಾರರಿಗೆ ತಿಳಿಸಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಿದೆ.
‘ಬೈಂದೂರು ವ್ಯಾಪ್ತಿಯ ಮರವಂತೆ ಮತ್ತು ತಾರಾಪತಿ ಸಮುದ್ರ ತೀರದಲ್ಲಿ ಕಡಲಾಮೆ ಮೊಟ್ಟೆ ಇಟ್ಟಿರುವ ಜಾಗವನ್ನು ಗುರುತಿಸಿದ ಬಳಿಕ ನಾವು ಆ ಜಾಗಕ್ಕೆ ಗೂಡನ್ನು ಅಳವಡಿಸಿದೆವು. ಪ್ರತಿದಿನ ನಮ್ಮ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಕೊನೆಯ ಹದಿನೈದು ದಿವಸಗಳ ಕಾಲ ಗೂಡಿನ ಬಳಿ ಸಿಬ್ಬಂದಿಯನ್ನು ರಾತ್ರಿ ಪಾಳಿಯಲ್ಲಿ ನೇಮಕ ಮಾಡಿದ್ದೆವು. 50ರಿಂದ 60 ದಿನ ದಾಟಿದ ಮೇಲೆ ಮೊಟ್ಟೆಯಿಂದ ಕಡಲಾಮೆ ಮರಿಗಳು ಹೊರಬರುತ್ತವೆ’ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ತಿಳಿಸಿದರು.
‘ಸಮುದ್ರದಲ್ಲಿ ಜೆಲ್ಲಿ ಫಿಶ್ಗಳ ಸಂಖ್ಯೆ ಹೆಚ್ಚಾದಾಗ ಕೆಲವು ಬಗೆಯ ಮೀನುಗಳ ಸಂತತಿ ಕ್ಷೀಣಿಸುತ್ತದೆ. ಕಡಲಾಮೆಗಳು ಜೆಲ್ಲಿ ಫಿಶ್ಗಳನ್ನು ತಿನ್ನುವುದರಿಂದ ಅದರ ಸಂತತಿ ಹೆಚ್ಚಾದಂತೆ ಮೀನುಗಾರರಿಗೆ ಅನುಕೂಲ ಹೆಚ್ಚು. ಈ ಕುರಿತು ಮೀನುಗಾರರಲ್ಲಿ ಜಾಗೃತಿ ಮೂಡಿಸಿದ್ದೇವೆ’ ಎನ್ನುತ್ತಾರೆ ಅವರು.
ಉಡುಪಿ ಕುಂದಾಪುರ ಬೈಂದೂರು ವ್ಯಾಪ್ತಿಯಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಲಾಗಿದೆ. ಕಡಲಾಮೆಗಳ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದುಗಣಪತಿ ಕೆ ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.