ADVERTISEMENT

ನಂದಿಕೂರಿನ ಘಟಕ ಮುಚ್ಚಲು ನಿರ್ಣಯ

ಉತ್ಪಾದನಾ ಘಟಕದಿಂದ ಮಾಲಿನ್ಯ: ಪಲಿಮಾರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:12 IST
Last Updated 24 ಜನವರಿ 2026, 7:12 IST
ಪಲಿಮಾರು ಗ್ರಾಮಸಭೆಯಲ್ಲಿ ಶುಕ್ರವಾರ ನಡೆಯಿತು. ತಹಸೀಲ್ದಾರ್ ಅನಂತಶAಕರ ಬಿ, ಸೌಮ್ಯಲತಾ ಶೆಟ್ಟಿ, ರಾಯೇಶ್ವರ ಪೈ, ಯಲ್ಲಮ್ಮ, ರಮಣಿ, ಸತೀಶ್ ಆರ್.ಜಿ. ಮತ್ತಿತರರಿದ್ದರು
ಪಲಿಮಾರು ಗ್ರಾಮಸಭೆಯಲ್ಲಿ ಶುಕ್ರವಾರ ನಡೆಯಿತು. ತಹಸೀಲ್ದಾರ್ ಅನಂತಶAಕರ ಬಿ, ಸೌಮ್ಯಲತಾ ಶೆಟ್ಟಿ, ರಾಯೇಶ್ವರ ಪೈ, ಯಲ್ಲಮ್ಮ, ರಮಣಿ, ಸತೀಶ್ ಆರ್.ಜಿ. ಮತ್ತಿತರರಿದ್ದರು   

ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೊ ಡೀಸೆಲ್, ಪಾಮ್ ಆಯಿಲ್, ಗ್ಲಿಸರಿನ್ ಉತ್ಪಾದನಾ ಘಟಕದಿಂದ ಸುತ್ತಮುತ್ತ ವಾಯುಮಾಲಿನ್ಯ ಉಂಟಾಗುತ್ತಿದ್ದು, ಘಟಕವನ್ನು ಮುಚ್ಚುವಂತೆ ಶುಕ್ರವಾರ ಪಲಿಮಾರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಘಟಕದ ದುರ್ವಾಸನೆಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ನಡಾವಳಿಯಂತೆ 2024ರಲ್ಲಿ ಅಂದಿನ ಜಿಲ್ಲಾಧಿಕಾರಿ ಸಂಸ್ಕರಣಾಗಾರವನ್ನು ಸ್ಥಗಿತಗೊಳಿಸಿ ಕ್ರಮ ಕೈಗೊಂಡು ತಜ್ಞರ ಶಿಪಾರಸಿನಂತೆ ಪುನರಾರಂಭಕ್ಕೆ ನಿರ್ದೇಶಿಸಿದ್ದರು. ಆದರೆ ತಜ್ಞರ ಸಮಿತಿ ವರದಿ ಬರುವ ಮೊದಲೇ ಘಟಕ ಪುನರಾರಂಭಿಸಿ ಜಿಲ್ಲಾಧಿಕಾರಿ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರಾದ ದಿನೇಶ್ ಪಲಿಮಾರು, ಲಕ್ಷ್ಮಣ ಎಲ್. ಶೆಟ್ಟಿವಾಲ್, ಸಂದೀಪ್ ಪಲಿಮಾರು ಮತ್ತಿತರರು ದೂರಿದರು.

ಘಟಕದಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಗ್ರಾಮಸ್ಥರು ಘಟಕದ ವಿರುದ್ಧ ತುರ್ತು ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಬರುವಂತೆ ಒತ್ತಾಯಿಸಿದರು. ಸಭೆಗೆ ಬಂದ ತಹಶೀಲ್ದಾರ್ ಅನಂತಶಂಕರ ಬಿ. ಅವರು ಗ್ರಾಮ ಪಂಚಾಯಿತಿ  ನಿರ್ಣಯ ಕೈಗೊಂಡು ವರದಿ ನೀಡುವಂತೆ ಪಿಡಿಒಗೆ ಸೂಚಿಸಿದರು. ಆ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ಬಳಿಕ ಘಟಕವನ್ನು ಮುಚ್ಚಲು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ತೀರ್ಮಾನಿಸಲಾಯಿತು. ‌

ಪಲಿಮಾರಿನ ಸರ್ಕಾರಿ ಶಾಲೆಯೊಂದು ಘಟಕದ ಸಿಎಸ್‌ಆರ್ ಪಡೆದುಕೊಂಡಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಅವರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು,  ಮುಂದಿನ ದಿನಗಳಲ್ಲಿ ಶಾಲೆಗೆ ಯಾವುದೇ ರೀತಿಯ ಸಹಕಾರ ನೀಡುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಾಲೆಯಿಂದ ವರದಿ ಪಡೆದುಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಯವರು ಎಸ್‌ಡಿಎಂಸಿ ಬೇಡಿಕೆಯಂತೆ ಕಂಪನಿ ಸಿಎಸ್‌ಆರ್ ಪಡೆದುಕೊಂಡಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅವ್ಯಾಹತವಾಗಿ ಕಟ್ಟಿಗೆ ಸಾಗಾಟವಾಗುತ್ತಿದ್ದು, ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಕ್ರಮ ಕಟ್ಟಿಗೆ ಸಾಗಾಟ ತಪಾಸಣೆಗಾಗಿ ಚೆಕ್‌ಪೋಸ್ಟ್ ನಿರ್ಮಾಣ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು. ಅರಣ್ಯ ಇಲಾಖೆಯಿಂದ ಗಸ್ತು ತಪಾಸಣೆ ನಡೆಸಲಾಗುತ್ತಿದ್ದು, ಜನರ ದೂರಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.

ಪಡುಬಿದ್ರಿ ಚಿಕ್ಕಲ್‌ಗುಡ್ಡ ರಾಜ್ಯ ಹೆದ್ದಾರಿ ಸಂಪರ್ಕಿಸುವ ಅಡ್ವೆ ಹಾಗೂ ಅವರಾಲು ಮಟ್ಟು ರಸ್ತೆ ತೀರಾ ನಾದುರಸ್ತಿಯಲ್ಲಿದ್ದು, ಹಲವು ದಶಕಗಳಿಂದ ಮನವಿ ನೀಡಿದ್ದರೂ, ಅಭಿವೃದ್ಧಿ ಕಾಣದಿರುವ ಬಗ್ಗೆ ಆ ಭಾಗದ ಗ್ರಾಮಸ್ಥರು ಗ್ರಾಮಾಡಳಿತವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ದೊಡ್ಡ ಮೊತ್ತದ ಅನುದಾನ ಅಗತ್ಯವಿರುವ ಕಾರಣ ಶಾಸಕರು ಇಲ್ಲವೇ ಸಂಸದರ ಅನುದಾನ ಪಡೆಯಲು ಮನವಿ ಮಾಡಲಾಗಿದೆ. ಅನುದಾನ ಲಭ್ಯತೆ ನೋಡಿಕೊಂಡು ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರು ನೀಡಿದ ಅರ್ಜಿಯನ್ನು ಶಾಸಕರ ಗಮನಕ್ಕೂ ತರುವುದಾಗಿ ನೋಡೆಲ್ ಅಧಿಕಾರಿ ಯಲ್ಲಮ್ಮ ತಿಳಿಸಿದರು.

ನರ ವಿರೋಧದ ನಡುವೆಯೂ ಅವರಾಲು  ಮಟ್ಟುವಿನಲ್ಲಿ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಪರವಾನಿಗೆ ನೀಡಿರುವ, ಪಲಿಮಾರು ಟೊಟೋ ನಿಲ್ದಾಣ ಬಳಿ ಇಂಟರ್‌ಲಾಕ್ ಅಳವಡಿಕೆಯಲ್ಲಿ ಆಗಿರುವ ದುಂದುವೆಚ್ಚ ಬಗ್ಗೆ ಸಂದೀಪ್ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಪಿಡಿಒ ಸತೀಶ್ ಆರ್. ಜಿ. ಸಮಜಾಯಿಷಿ ನೀಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳಾದ ಎಂ. ಹುಸೇನ್, ಫಿಲೋಮಿನಾ, ರೀನಾ, ಅಮೃತಾ, ಸುಧಾಕರ ಶೆಟ್ಟಿ, ಪುಷ್ಪಲತಾ, ಶಿವಪುತ್ರ ಮಾಹಿತಿ ನೀಡಿದರು. ಪಂಚಾಯಿತಿ ಉಪಾಧ್ಯಕ್ಷ ರಾಯೇಶ್ವರ ಪೈ, ಶಿಕ್ಷಣ ಇಲಾಖೆಯ ರಮಣಿ ಭಾಗವಹಿಸಿದ್ದರು. ಗಿರೀಶ್ ವರದಿ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.