ಉಡುಪಿ: ಪ್ರಧಾನಮಂತ್ರಿಗಳ ‘ಪರೀಕ್ಷಾ ಪೇ ಚರ್ಚಾ’ ವರ್ಚುವಲ್ ಆವೃತ್ತಿಯ ಸಂವಾದ ಕಾರ್ಯಕ್ರಮ ಏ.7ರಂದು ರಾತ್ರಿ 7ಕ್ಕೆ ಕುಂದಾಪುರ ತಾಲ್ಲೂಕಿನ ಅಲ್ಬಾಡಿ ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಶಾಲೆಯ ವಿದ್ಯಾರ್ಥಿನಿ ಅನುಷಾ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಟಿವಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ. http//education.gov.in ವೆಬ್ಸೈಟ್ನಲ್ಲಿಯೂ ವೀಕ್ಷಣೆ ಮಾಡಲು ಅವಕಾಶವಿದ್ದು, ಜಿಲ್ಲೆಯ 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಪ್ರೋತ್ಸಾಹಿಸುವಂತೆ ಡಿಡಿಪಿಐ ಎನ್.ಎಚ್.ನಾಗೂರ ಎಲ್ಲ ತಾಲ್ಲೂಕುಗಳ ಬಿಇಒಗಳಿಗೆ ಸೂಚನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ನೀಡುವ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನವನ್ನು ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಂಗಳವಾರ ಅಲ್ಬಾಡಿ ಆರ್ಡಿಯ ಶಾಲೆಗೆ ಭೇಟಿನೀಡಿದ ಡಿಡಿಪಿಐ ನಾಗೂರ, ವಿದ್ಯಾರ್ಥಿನಿ ಅನುಷಾ ಜತೆ ಚರ್ಚಿಸಿದರು. ಇದೇವೇಳೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಧ್ಯಯನ ಕ್ರಮ ಹಾಗೂ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ 2 ಶಾಲೆಗಳ ವಿದ್ಯಾರ್ಥಿಗಳು ಮಾತ್ರ ಅವಕಾಶ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.