ADVERTISEMENT

ಮೋದಿ ಅಲೆಯಲಿ ‘ತೇಲಿದ ಉಡುಪಿ’!

ರೋಡ್‌ ಶೋ, ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ

ನವೀನ್ ಕುಮಾರ್ ಜಿ.
Published 28 ನವೆಂಬರ್ 2025, 19:42 IST
Last Updated 28 ನವೆಂಬರ್ 2025, 19:42 IST
ಪ್ರಧಾನಿ ನರೇಂದ್ರ ಮೋದಿ ಕನಕನ ಕಿಂಡಿಗೆ ಅಳವಡಿಸಿದ್ದ ಸುವರ್ಣ ಕವಚ ಅನಾವರಣ
ಪ್ರಧಾನಿ ನರೇಂದ್ರ ಮೋದಿ ಕನಕನ ಕಿಂಡಿಗೆ ಅಳವಡಿಸಿದ್ದ ಸುವರ್ಣ ಕವಚ ಅನಾವರಣ   

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಗಳಿಂದ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ಶುಕ್ರವಾರ ಪಡೆದರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಹಮ್ಮಿಕೊಂಡಿದ್ದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಭಗವದ್ಗೀತೆಯ 15ನೇ ಅಧ್ಯಾಯದ ಪುರುಷೋತ್ತಮ ಯೋಗದ 20 ಶ್ಲೋಕಗಳನ್ನು ಸಭಿಕರ ಜೊತೆಗೂಡಿ ಪಠಿಸಿದರು. 

ಪ್ರಧಾನಿ ರೋಡ್‌ ಶೋ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದರೂ ಜಿಲ್ಲೆಯ ವಿವಿಧೆಡೆಯಿಂದ ಬಂದ ಜನರು 9 ಗಂಟೆಯಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. 11 ಗಂಟೆಗೆ ಆದಿ ಉಡುಪಿಯ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಮೋದಿ, ಬನ್ನಂಜೆಯ ನಾರಾಯಣಗುರು ವೃತ್ತದ ಬಳಿಯಿಂದ ಕಲ್ಸಂಕ ವೃತ್ತದ ವರೆಗೆ 1.8 ಕಿ.ಮೀ ರೋಡ್‌ ಶೋ ನಡೆಸಿದರು. 

ADVERTISEMENT

ರೋಡ್‌ ಶೋ ಉದ್ದಕ್ಕೂ ಕರಾವಳಿಯ ಕಲಾರೂಪಗಳನ್ನು ಬಿಂಬಿಸುವ ವೇಷಗಳ ಕುಣಿತ ಇತ್ತು. ಜನರು ಹೂವಿನ ಮಳೆಗರೆಯುತ್ತ ತಮ್ಮ ನೆಚ್ಚಿನ ನಾಯಕನಿಗೆ ಜೈಕಾರ ಹಾಕಿದರು. ಮೊಬೈಲ್‌ ಹಿಡಿದು ಫೊಟೊ ಕ್ಲಿಕ್ಕಿಸಿದರು. ತಮ್ಮ ಮೇಲೆ ಹೂಮಳೆ ಸುರಿಸಿದ ಜನರತ್ತ, ಪ್ರಧಾನಿಯೂ ಹೂವು ಎರಚಿದರು. 

ಬಳಿಕ ಪೂರ್ಣಕುಂಭ ಸ್ವಾಗತ ದೊಂದಿಗೆ ಅವರನ್ನು ಶ್ರೀಕೃಷ್ಣ ಮಠಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಕನಕದಾಸರ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿದರು. ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪ ಅನಾವರಣಗೊಳಿಸಿದರು. ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ದರ್ಶನ ಪಡೆದರು. 

ಮಠದ ಚಂದ್ರಶಾಲೆಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ, ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ, ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿ ಹಾಗೂ ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಗೀತಾ ಮಂದಿರಕ್ಕೂ ಭೇಟಿ ನೀಡಿದರು. ‘ಅಷ್ಟಮಠಾಧೀಶರೆಲ್ಲರಿಗೂ ಆಹ್ವಾನ ನೀಡಿದ್ದೇವೆ’ ಎಂದು ಪುತ್ತಿಗೆ ಶ್ರೀ ತಿಳಿಸಿದ್ದರು. ಆದರೆ, ಉಳಿದವರು ಗೈರಾಗಿದ್ದರು.

ಪರ್ಯಾಯ ಪುತ್ತಿಗೆ ಮಠಾಧೀಶರು ಮೋದಿ ಅವರಿಗೆ ‘ಭಾರತ ಭಾಗ್ಯ ವಿಧಾತ’ ಎಂಬ ಬಿರುದು ನೀಡಿ ಗೌರವಿಸಿದರು. ನವಿಲು ಗರಿ ಅಳವಡಿಸಿದ್ದ ಮುತ್ತಿನ ಪೇಟ, ತುಳಸಿ ಮಣಿ ಮಾಲೆ, ತುಳಸಿ ಮಣಿ ಸಹಿತ ಬ್ರಾಸ್ಲೆಟ್‌, ಬೆಳ್ಳಿಯ ಕಡೆಗೋಲು ನೀಡಿ ಸನ್ಮಾನಿಸಿದರು. ಕಾಶಿ ಕಾರಿಡಾರ್‌ ಮಾದರಿಯಲ್ಲಿ ಉಡುಪಿ ಅಭಿವೃದ್ಧಿಗೂ ಯೋಜನೆ ರೂಪಿಸಬೇಕು ಎಂದು ಕೋರಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಯಶ್‌ಪಾಲ್‌ ಸುವರ್ಣ, ಸುನಿಲ್‌ ಕುಮಾರ್‌, ಗುರ್ಮೆ ಸುರೇಶ್‌ ಶೆಟ್ಟಿ, ಗುರುರಾಜ್‌ ಗಂಟಿಹೊಳೆ, ಕಿರಣ್‌ಕುಮಾರ್‌ ಕೊಡ್ಗಿ ಉಪಸ್ಥಿತರಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು.

ಮಧ್ಯಾಹ್ನ 1.30ಕ್ಕೆ ಉಡುಪಿಯಿಂದ ನಿರ್ಗಮಿಸಿ, ಮಂಗಳೂರು ಮೂಲಕ ಗೋವಾಕ್ಕೆ ತೆರಳಿದರು.

‘ನವ ಭಾರತ ಯಾರಿಗೂ ತಲೆತಗ್ಗಿಸದು’

‘ದೇಶದಲ್ಲಿ ಹಿಂದೆ ಭಯೋತ್ಪಾದಕರ ದಾಳಿ ಆದಾಗ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುತ್ತಿತ್ತು. ಆದರೆ ಇದು ಹೊಸ ಭಾರತ. ಯಾರ ಮುಂದೆಯೂ ತಲೆ ತಗ್ಗಿಸಲ್ಲ. ನಾಗರಿಕರ ರಕ್ಷಣೆಯ ಜವಾಬ್ದಾರಿಯಿಂದ ಹಿಂದೆ ಸರಿಯುವುದೂ ಇಲ್ಲ. ನಮಗೆ ಶಾಂತಿ ಸ್ಥಾಪನೆಯೂ ಗೊತ್ತು ಶಾಂತಿಯ ರಕ್ಷಣೆಯೂ ಗೊತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಶ್ರೀಕೃಷ್ಣನು ಗೀತಾ ಸಂದೇಶವನ್ನು ಯುದ್ಧಭೂಮಿಯಲ್ಲಿ ನೀಡಿದ್ದಾನೆ. ಶಾಂತಿ ಸತ್ಯ ಸ್ಥಾಪನೆಗಾಗಿ ದುಷ್ಟರ ಅಂತ್ಯ ಅಗತ್ಯ ಎಂಬುದನ್ನು ಗೀತೆ ನಮಗೆ ಹೇಳಿದೆ. ರಾಷ್ಟ್ರದ ಸುರಕ್ಷತಾ ನೀತಿಗೆ ಮೂಲವೂ ಭಗವದ್ಗೀತೆಯೇ ಆಗಿದೆ’ ಎಂದರು.

‘ನಾವು ವಸುಧೈವ ಕುಟುಂಬಕಂ ಧರ್ಮೋ ರಕ್ಷತಿ ರಕ್ಷಿತಃ ಮಂತ್ರವನ್ನೂ ಪಠಿಸುತ್ತೇವೆ. ಕೆಂಪು ಕೋಟೆಯಲ್ಲಿ ಶ್ರೀಕೃಷ್ಣನ ಕರುಣಾ ಸಂದೇಶವನ್ನು ನೀಡುತ್ತೇವೆ. ಅಲ್ಲಿಯೇ ಮಿಷನ್‌ ಸುದರ್ಶನ್‌ ಚಕ್ರದ ಘೋಷಣೆಯನ್ನೂ ಮಾಡುತ್ತೇವೆ’ ಎಂದು ಹೇಳಿದರು.

‘ಸುದರ್ಶನ ಚಕ್ರವು ನಮ್ಮ ದೇಶದ ಔದ್ಯೋಗಿಕ ಸಾರ್ವಜನಿಕ ಕ್ಷೇತ್ರದ ಸುರಕ್ಷತೆಯ ಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ಅದನ್ನು ಭೇದಿಸಲು ಶತ್ರುಗಳಿಗೆ ಸಾಧ್ಯವಿಲ್ಲ. ಅಂತಹ ದುಸ್ಸಾಹಸ ಮಾಡಿದರೆ ಅವರನ್ನು ಸಂಹಾರ ಮಾಡುತ್ತದೆ’ ಎಂದರು.

‘ಕೃಷ್ಣನ ಉಪದೇಶ ಎಲ್ಲಾ ಯುಗಗಳಿಗೂ ಪ್ರಸ್ತುತ. ಗೀತೆಯಲ್ಲಿ ನೀಡಿರುವ ಸಂದೇಶ ವ್ಯಕ್ತಿಗೆ ಮಾತ್ರವಲ್ಲ ರಾಷ್ಟ್ರದ ನೀತಿಗೂ ದಾರಿ ತೋರಿಸುತ್ತದೆ. ಕೇಂದ್ರ ಸರ್ಕಾರದ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ‘ಸರ್ವ ಜನ ಹಿತಾಯ ಸರ್ವ ಜನ ಸುಖಾಯ’ ನೀತಿಗಳಿಗೆ ಶ್ರೀಕೃಷ್ಣ ಹೇಳಿರುವ ಶ್ಲೋಕಗಳ ಪ್ರೇರಣೆ ಇದೆ’ ಎಂದರು. ‘ಭಗವದ್ಗೀತೆಯಲ್ಲಿ ಕೃಷ್ಣನು ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡು ಎಂದು ಹೇಳಿದ್ದಾನೆ. ಅದೇ ಆಶಯದಿಂದ ಮಧ್ವಾಚಾರ್ಯರು ದೇಶದ ಏಕತೆಯನ್ನು ಸಶಕ್ತಗೊಳಿಸುವಲ್ಲಿ ಶ್ರಮಿಸಿದ್ದರು’ ಎಂದು ಹೇಳಿ ದಾಸ ಪರಂಪರೆಯನ್ನೂ ಉಲ್ಲೇಖಿಸದರು.

ಉಡುಪಿಯು ಜನಸಂಘ ಮತ್ತು ಬಿಜೆಪಿಯ ಉತ್ತಮ ಆಡಳಿತದ ಮಾದರಿಯನ್ನು ನೀಡಿದೆ ಎಂದು ಹೇಳಿ  ದಿ.ವಿ.ಎಸ್‌. ಆಚಾರ್ಯ ಅವರನ್ನು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.