ಕುಂದಾಪುರ: ಕೊಲ್ಲೂರಿನ ನದಿಗಳ ಮಾಲಿನ್ಯ, ಪರಿಸರ ನಾಶ ಹಾಗೂ ಭೂ ಅತಿಕ್ರಮಣಗಳ ವಿರುದ್ಧ ದಾಖಲಾಗಿರುವ ದೂರಿನ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ಜಿಟಿ) ಚೆನ್ನೈನ ದಕ್ಷಿಣ ವಲಯದ ನ್ಯಾಯಪೀಠವು ಕೊಲ್ಲೂರು ಪರಿಸರದ ಮಾಲಿನ್ಯ ನಿಯಂತ್ರಣಕ್ಕಾಗಿ ಉಡುಪಿ ಜಿಲ್ಲಾಧಿಕಾರಿಗೆ ಮಹತ್ತರವಾದ ನಿರ್ದೇಶನ ನೀಡಿದೆ ಎಂದು ಅರ್ಜಿದಾರ ಹರೀಶ್ ತೋಳಾರ್ ಕೊಲ್ಲೂರು ತಿಳಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಜೆ.ಎಂ. ಹಾಗೂ ಸತ್ಯಗೋಪಾಲ್ ಕೊರ್ಲಪತಿ ಇ.ಎಂ. ಅವರು ಜು 9 ರಂದು ನೀಡಿರುವ ನಿರ್ದೇಶನದಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ಹೆಸರಿಸಲಾದವರು ಮತ್ತು ನಂತರ ಕಂಡು ಬಂದ ಇತರರನ್ನು ಒಳಗೊಂಡಂತೆ ಎಲ್ಲಾ ನಿಯಮ ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಎಸ್ಪಿಸಿಬಿ (ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ಕಾನೂನು ಕ್ರಮ ಜರುಗಿಸಬೇಕು. ಎಸ್ಟಿಪಿ ಗಳನ್ನು ತಕ್ಷಣದ ಪುನಃ ಸ್ಥಾಪನೆಯಾಗಬೇಕು ಹಾಗೂ ಆದ್ಯತೆಯಲ್ಲಿ ಎಸ್ಟಿಪಿಗಳನ್ನು ಕಾರ್ಯಗತಗೊಳಿಸಬೇಕು ಎಂದು ನಿರ್ದೇಶಿಸಿರುವುದಾಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಗ್ರಾಮೀಣ ನೀರು ಸರಬರಾಜು ಮಂಡಳಿ ಹಾಗೂ ಎಲ್ಲಾ ವಾಣಿಜ್ಯ ಘಟಕಗಳೊಂದಿಗೆ
ಸಮನ್ವಯ ಸಾಧಿಸಬೇಕು. ಗೃಹ ಮತ್ತು ವಾಣಿಜ್ಯ ಯುಜಿಡಿ ಸಂಪರ್ಕಗಳು ಪೂರ್ಣಗೊಂಡಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಹಸಿರು ನ್ಯಾಯಮಂಡಳಿ ನೀಡಿರುವ ನಿರ್ದೇಶನ ಹಾಗೂ ಸೂಚನೆಗಳನ್ನು ಪಾಲಿಸಲು 4 ವಾರಗಳ ಸಮಯವನ್ನು ನಿಗದಿ ಮಾಡಲಾಗಿದ್ದು, ನಿರ್ದೇಶನದ ಕಾರ್ಯಪಾಲನೆಗೆ ಜಿಲ್ಲಾಧಿಕಾರಿ ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ ಎಂದು ತೋಳಾರ್ ತಿಳಿಸಿದ್ದಾರೆ.
ಹಸಿರು ನ್ಯಾಯಮಂಡಳಿಗೆ ಅರ್ಜಿ : ಕೊಲ್ಲೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ತಲೆ ಎತ್ತುತ್ತಿರುವ ವಸತಿ ಗೃಹಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಆಗುತ್ತಿರುವ ಜಲ ಹಾಗೂ ಪರಿಸರದ ಮಾಲಿನ್ಯದಿಂದಾಗಿ ಭಕ್ತರಿಗೆ, ನದಿಯಲ್ಲಿ ಆಶ್ರಯ ಪಡೆದುಕೊಂಡಿರುವ ಅಮೂಲ್ಯ ಜಲಚರಗಳು, ನೀರಿನಾಶ್ರಯಕ್ಕೆ ಅವಲಂಬಿತವಾಗಿರುವ ಪ್ರಾಣಿ ಸಂಕುಲಕ್ಕೆ ಆಗುತ್ತಿರುವ ತೊಂದರೆಗಳನ್ನು ಪರಿಹರಿಸಲು, ಕೊಲ್ಲೂರು ಹಾಗೂ ಆಸುಪಾಸಿನ ಗ್ರಾಮಗಳ ಜನರ ಆರೋಗ್ಯ ರಕ್ಷಣೆ ಮತ್ತು ಸರ್ಕಾರಿ ಹಾಗೂ ದೇವಸ್ಥಾನದ ಭೂಮಿಗಳ ಅತಿಕ್ರಮಣಗಳನ್ನು ತಡೆಯುವ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು, ಮಂಗಳೂರಿನ ಎನ್ಇಸಿಎಫ್ ಹಾಗೂ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಸೊಸೈಟಿ ಸಹಯೋಗದಲ್ಲಿ 2022 ರಲ್ಲಿ ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸುತ್ತಿದೆ.
ವಿಚಾರಣೆಯ ಹಂತದಲ್ಲಿ ಪುಣ್ಯ ನದಿಗಳ ಮಾಲಿನ್ಯ, ಪರಿಸರ ನಾಶ, ನದಿ ಮುಖಜ ಭೂಮಿಗಳ ಆಕ್ರಮ ಒತ್ತುವರಿ, ಸರ್ಕಾರಿ, ದೇವಸ್ಥಾನ ಹಾಗೂ ಸಾರ್ವಜನಿಕ ಭೂಮಿಗಳ ಅನಧಿಕೃತ ಅತಿಕ್ರಮಣ ಹಾಗೂ ಕಾನೂನು ಉಲ್ಲಂಘನೆಗಳ ಕುರಿತು ನ್ಯಾಯಾಲಯಕ್ಕೆ ದಾಖಲೆಗಳ ಸಹಿತ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಅರ್ಜಿದಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.