ADVERTISEMENT

ಉಡುಪಿ: ಜಿಲ್ಲೆಯ ಕಡಲ ತೀರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಬೇಕಿದೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 7:05 IST
Last Updated 16 ಡಿಸೆಂಬರ್ 2024, 7:05 IST
<div class="paragraphs"><p>ಮಲ್ಪೆ ಬೀಚ್‌ನಲ್ಲಿ ಭಾನುವಾರ ಸಮುದ್ರದ ನೀರಿಗಿಳಿದು ಸಂಭ್ರಮಿಸಿದ ಶಾಲಾ ಮಕ್ಕಳು</p></div>

ಮಲ್ಪೆ ಬೀಚ್‌ನಲ್ಲಿ ಭಾನುವಾರ ಸಮುದ್ರದ ನೀರಿಗಿಳಿದು ಸಂಭ್ರಮಿಸಿದ ಶಾಲಾ ಮಕ್ಕಳು

   

ಉಡುಪಿ: ಕ್ರಿಸ್‌ಮಸ್‌ ರಜೆ ಸಮೀಪಿಸುತ್ತಿರುವಂತೆ ಕಡಲ ತೀರಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಪದೇ ಪದೇ ಸಂಭವಿಸುತ್ತಿರುವ ಅವಘಡಗಳು ನೀರಿಗಿಳಿಯುವ ಪ್ರವಾಸಿಗರಿಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸುತ್ತಲೇ ಇವೆ.

ಜಿಲ್ಲೆಯ ಕುಂದಾಪುರ ಬೀಚ್‌ನಲ್ಲಿ ಈಚೆಗೆ ಸಹೋದರರಿಬ್ಬರು ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಯ ನೆನಪು ಮಾಸುವ ಮುನ್ನವೇ ನೆರೆಯ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಪ್ರವಾಸಕ್ಕೆ ಬಂದಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದಾರೆ.

ADVERTISEMENT

ಈ ಘಟನೆಗಳು ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಜಿಲ್ಲಾಡಳಿತವು ಇನ್ನಷ್ಟು ಆದ್ಯತೆ ನೀಡಬೇಕೆಂಬ ಆಗ್ರಹಗಳು ಜನರಿಂದ ಕೇಳಿ ಬಂದಿವೆ.

ಜಿಲ್ಲೆಯ ಮಲ್ಪೆ, ತ್ರಾಸಿ ಮರವಂತೆ, ಕಾಪು ಬೀಚ್‌ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವಾರಾಂತ್ಯ, ರಜಾ ದಿನಗಳಲ್ಲಿ ಈ ಕಡಲ ತೀರಗಳಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ.

ಸಾಮಾನ್ಯವಾಗಿ ಜಿಲ್ಲೆಯ ಬೀಚ್‌ಗಳಲ್ಲಿ ಮಳೆಗಾಲದಲ್ಲಿ ಪ್ರವಾಸಿಗರು ಕಡಲಿಗಿಳಿಯದಂತೆ ನಿರ್ಬಂಧ ಹೇರಲಾಗುತ್ತದೆ. ಮಳೆ ಆರಂಭವಾಗುವಲ್ಲಿಂದ ಅಕ್ಟೋಬರ್‌ ತಿಂಗಳ ವರೆಗೂ ಸಮುದ್ರದ ಬದಿಯಲ್ಲಿ ಬೇಲಿ ನಿರ್ಮಿಸಲಾಗುತ್ತದೆ. ಮಳೆ ಕಡಿಮೆಯಾದ ಬಳಿಕ ಸಮುದ್ರ ಶಾಂತವಾದರೂ ಚಂಡಮಾರುತಗಳ ಪರಿಣಾಮದಿಂದ ಬೇಸಿಗೆಯಲ್ಲೂ ಕಡಲು ಪ್ರಕ್ಷುಬ್ಧಗೊಳ್ಳುವುದಿದೆ.

ದೇಗುಲ ಪ್ರವಾಸೋದ್ಯಮವು ಜಿಲ್ಲೆಯಲ್ಲಿ ಪ್ರಮುಖವಾಗಿದ್ದು, ಇಲ್ಲಿನ ಕೃಷ್ಣ ಮಠ, ಕೊಲ್ಲೂರು ದೇಗುಲ, ನೆರೆಯ ಜಿಲ್ಲೆಗಳ ದೇವಸ್ಥಾನಗಳಿಗೆ ಬರುವ ಪ್ರವಾಸಿಗರು ಊರಿಗೆ ಮರಳುವ ಮುನ್ನ ಬೀಚ್‌ಗಳಿಗೆ ಭೇಟಿ ನೀಡಿಯೇ ಮರಳುತ್ತಾರೆ.

ಮಲ್ಪೆ ಬೀಚ್‌ಗೆ ರಜಾದಿನಗಳಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. ಆದರೆ, ಜೀವ ರಕ್ಷಕ ಸಿಬ್ಬಂದಿ ಬೆರಳೆಣಿಕೆಯಷ್ಟೇ ಇದ್ದಾರೆ. ಇಲ್ಲಿಗೆ ಸಾಕಷ್ಟು ಜೀವ ರಕ್ಷಕ ಸಿಬ್ಬಂದಿ ನೇಮಕ ಮಾಡಲು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಮಲ್ಪೆ ಬೀಚ್‌ನಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳೇ ಕಣ್ಣಿಗೆ ಬೀಳುವುದಿಲ್ಲ. ಪ್ರವಾಸಿಗರ ಮೇಲೆ ನಿಗಾ ವಹಿಸಲು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಸ್ಥಾಪಿಸಬೇಕು. ಸಿಬ್ಬಂದಿಯ ಮಾತು ಕೇಳದೆ ಸಮುದ್ರದಲ್ಲಿ ಆಳದವರೆಗೂ ಈಜಲು ತೆರಳುವವರ ವಿರುದ್ಧ ಕ್ರಮ ಕೈಗೊಂಡರಷ್ಟೇ ಉಳಿದವರಿಗೆ ಭಯವಾಗಬಹುದು. ಕಾನೂನು ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ.

ಮಲ್ಪೆ ಬೀಚ್‌ಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರೂ ತುರ್ತು ಸಂದರ್ಭಕ್ಕಾಗಿ ಬಳಸಲು ಆಂಬುಲೆನ್ಸ್‌ ವ್ಯವಸ್ಥೆಯೇ ಕೂಡ ಇಲ್ಲ. ಬೀಚ್‌ ಪಕ್ಕ ಸದಾ ಒಂದು ಆಂಬುಲೆನ್ಸ್‌ ಸನ್ನದ್ಧವಾಗಿರಿಸಿದರೆ ತುರ್ತು ಸಂದರ್ಭಗಳಲ್ಲಿ ಸಹಕಾರಿಯಾಗಬಹುದು.

ಉತ್ತರ ಕರ್ನಾಟಕ ಭಾಗದಿಂದ ಪ್ರವಾಸಕ್ಕೆ ಬರುವ ಹೆಚ್ಚಿನ ಮಂದಿ ಮಲ್ಪೆ ಬೀಚ್‌ಗೆ ಭೇಟಿ ನೀಡುತ್ತಾರೆ. ಇವರಿಗೆ ಸಮುದ್ರದ ಅಪಾಯದ ಅರಿವಿರುವುದಿಲ್ಲ. ಕೆಲವರು ಈಜು ಬರುತ್ತದೆ ಎಂಬ ಭಂಡತನದಿಂದಲೂ ಸಮುದ್ರದಲ್ಲಿ ಆಳದವರೆಗೂ ಹೋಗಿ ಅಪಾಯವನ್ನು ಆಹ್ವಾನಿಸುತ್ತಾರೆ.

ಜಿಲ್ಲೆಯ ಬೀಚ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಪಾಯದ ಬಗ್ಗೆ ಅರಿವು ಮೂಡಿಸಲು ಇನ್ನಷ್ಟು ಫಲಕಗಳನ್ನು ಸ್ಥಾಪಿಸಬೇಕಾಗಿದೆ. ಧ್ವನಿವರ್ಧಕದ ಮೂಲಕವೂ ಪ್ರವಾಸಿಗರನ್ನು ಎಚ್ಚರಿಸುವ ಕೆಲಸ ನಡೆದರೆ ಜೀವಹಾನಿ ತಪ್ಪಿಸಬಹುದಾಗಿದೆ.

ಪ್ರವಾಸೋದ್ಯಮ ಇಲಾಖೆಯು ಬೀಚ್ ಎಂದು ಅಭಿವೃದ್ಧಿಪಡಿಸದ ಸ್ಥಳಗಳಲ್ಲೂ ಕೆಲವರು ನೀರಿಗಿಳಿಯುತ್ತಾರೆ. ಅಂತಹ ಸ್ಥಳಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಅಧಿಕಾರಿಗಳು ಹೇಳುತ್ತಾರೆ.

ಮಲ್ಪೆ ಬೀಚ್‌ನಲ್ಲಿ ಅಳವಡಿಸಿರುವ ಎಚ್ಚರಿಕೆ ಫಲಕ
ಮಲ್ಪೆ ಬೀಚ್‌ನಲ್ಲಿ ಈಜಾಡುವ ಸ್ಥಳದ ಮಾಹಿತಿ ನೀಡುವ ಫಲಕ
ಪ್ರವಾಸಿ ಮಿತ್ರರು ಮತ್ತು ಜೀವರಕ್ಷಕ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ವಾಟರ್‌ ಸ್ಪೋರ್ಟ್ಸ್‌ ಟೆಂಡರ್ ಪಡೆಯವರ ವತಿಯಿಂದಲೂ ಪ್ರವಾಸಿಗರ ಸುರಕ್ಷತೆಗಾಗಿ ಜೀವ ರಕ್ಷಕ ಸಿಬ್ಬಂದಿ ಇದ್ದಾರೆ
ಕುಮಾರ್‌ ಸಿ.ಯು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
ಬೀಚ್‌ಗಳಲ್ಲಿ ಬಾತ್‌ ಝೋನ್‌
ಮಲ್ಪೆ ಸೇರಿದಂತೆ ವಿವಿಧ ಬೀಚ್‌ಗಳಲ್ಲಿ ಪ್ರವಾಸೋದ್ಯಮ ಇಲಾಖೆಯವರು ಬಾತ್‌ ಝೋನ್‌ ಎಂಬುದಾಗಿ ಗುರುತಿಸಿ ಫಲಕಗಳನ್ನು ಸ್ಥಾಪಿಸಿದ್ದಾರೆ. ಆ ಪ್ರದೇಶದಲ್ಲೇ ಪ್ರವಾಸಿಗರು ಸಮುದ್ರದ ನೀರಿಗಿಳಿಯಬಹುದಾಗಿದೆ. ಅಲ್ಲಿ ಜೀವರಕ್ಷಕ ಸಿಬ್ಬಂದಿ ಇರುವುದರಿಂದ ಏನಾದರೂ ಅಪಾಯವಾದರೆ ಅವರು ಕೂಡಲೇ ನೆರವಿಗೆ ಧಾವಿಸುತ್ತಾರೆ. ಆದರೆ ಕೆಲವು ಪ್ರವಾಸಿಗರು ಜೀವರಕ್ಷಕ ಸಿಬ್ಬಂದಿಯ ಮಾತು ಕೇಳುವುದಿಲ್ಲ. ಕೆಲವೊಮ್ಮೆ ಬಾತ್ ಝೋನ್‌ ಅಲ್ಲದ ಪ್ರದೇಶಗಳಲ್ಲೂ ನೀರಿಗಿಳಿಯುತ್ತಾರೆ ಎಂಬ ಆರೋಪಗಳೂ ಕೇಳಿ ಬಂದಿವೆ.
‘ಶಿಕ್ಷಕರೇ ಜವಾಬ್ದಾರರು’
ಶಾಲಾ ಮಕ್ಕಳನ್ನು ಬೀಚ್‌ಗಳಿಗೆ ಕರೆದುಕೊಂಡು ಬರುವ ಶಿಕ್ಷಕರು ಮೈಮರೆಯಬಾರದು ಅವರು ಎಚ್ಚರಿಕೆಯಿಂದ ಮಕ್ಕಳು ನೀರಿಗಿಳಿಯದಂತೆ ನೋಡಿಕೊಳ್ಳಬೇಕು. ಏನಾದರೂ ಅಪಾಯಗಳಾದರೆ ಅದಕ್ಕೆ ಅವರೇ ಹೊಣೆಗಾರರು. ಪ್ರಮುಖ ಬೀಚ್‌ಗಳಲ್ಲಿ ಜಿಲ್ಲಾಡಳಿತದ ಅಧೀನದಲ್ಲಿ ಜೀವರಕ್ಷಕ ಸಿಬ್ಬಂದಿ ನೇಮಿಸಲಾಗಿದೆ. ಸಣ್ಣ ಬೀಚ್‌ಗಳಿಗೂ ಜೀವರಕ್ಷಕ ಸಿಬ್ಬಂದಿ ನೇಮಕ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ತಿಳಿಸಿದರು. ಬೀಚ್‌ಗಳಲ್ಲಿನ ಅಪಾಯದ ಬಗ್ಗೆ ಪ್ರವಾಸಿಗರಲ್ಲಿ ವೆಬ್‌ಸೈಟ್‌ ಮೂಲಕ ಜಾಗೃತಿ ಮೂಡಿಸಲಾಗುವುದು. ಶಿಕ್ಷಕರು ಜನಸಂದಣಿ ಇಲ್ಲದ ಬೀಚ್‌ಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಕನಿಷ್ಠ ಸ್ಥಳೀಯರ ಮಾರ್ಗದರ್ಶನವನ್ನಾದರೂ ಪಡೆಯಬೇಕು. ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಗೃಹರಕ್ಷಕ ಸಿಬ್ಬಂದಿಯನ್ನೂ ನೇಮಿಸಿದ್ದೇವೆ. ಅವರಿಗೆ ಈಜು ತರಬೇತಿಯನ್ನೂ ನೀಡಲಾಗುವುದು ಎಂದು ಹೇಳಿದರು.
‘ಕರಾವಳಿ ಕಾವಲು ಪಡೆ ಸಿಬ್ಬಂದಿ ಗಸ್ತು’
ನಮ್ಮ ಇಲಾಖೆಯ ಸಿಬ್ಬಂದಿಯನ್ನು ಬೀಚ್‌ಗಳಲ್ಲಿ ಕರ್ತವ್ಯಕ್ಕೆ ನೇಮಿಸುತ್ತಿದ್ದೇವೆ. ಅಲ್ಲದೆ ಗೂರ್ಖ ವಾಹನದ ಮೂಲಕ ಗಸ್ತು ಕಾರ್ಯವೂ ನಿಯಮಿತವಾಗಿ ನಡೆಯುತ್ತಿದೆ. ಈ ವಾಹನದಲ್ಲಿರುವ ಧ್ವನಿವರ್ಧಕದ ಮೂಲಕ ಪ್ರವಾಸಿಗರಿಗೆ ಎಚ್ಚರಿಕೆ ನಿಡಲಾಗುತ್ತದೆ ಎಂದು ಕರಾವಳಿ ಕಾವಲು ಪಡೆಯ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ತಿಳಿಸಿದರು. ಬೀಚ್‌ಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ನಾವು ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ. ಬೀಚ್‌ಗಳಲ್ಲಿ ನೋ ಸ್ವಿಮ್ಮಿಂಗ್‌ ಝೋನ್‌ಗಳನ್ನು ಗುರುತಿಸಿ ಎಚ್ಚರಿಕೆ ಫಲಕಗಳನ್ನು ಸ್ಥಾಪಿಸಲು ಈಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈಗಾಗಲೇ ನಮ್ಮ ಇಲಾಖೆ ವತಿಯಿಮದ ಬೀಚ್‌ಗಳಲ್ಲಿ ಎಚ್ಚರಿಗೆ ಫಲಕಗಳನ್ನು ಅಳವಡಿಸಿದ್ದೇವೆ. ಪ್ರವಾಸಿಗರ ರಕ್ಷಣೆಗೆ ಅಗತ್ಯವಾದ ಬೋಟ್‌ಗಳ ಕೊರತೆಯೂ ಇದೆ. ಆ ಕುರಿತು ಗಮನಹರಿಸಲಾಗಿದೆ ಎಂದು ಹೇದರು.
‘ಜೀವರಕ್ಷಕ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ’
ಮಲ್ಪೆ ಬೀಚ್‌ಗೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರೂ ಅಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ ಅವುಗಳ ಮೂಲಕ ಪ್ರವಾಸಿಗರ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ವೈದ್ಯರು ಒಳಗೊಂಡ ಆಂಬುಲೆನ್ಸ್‌ ಅನ್ನು ಬೀಚ್‌ ಪಕ್ಕ ಸದಾ ಸಿದ್ಧವಾಗಿಟ್ಟುಕೊಳ್ಳಬೇಕು. ಅಪಾಯ ಸಂಭವಿಸುವ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡಲು ವೈದ್ಯರ ಅಗತ್ಯವಿದೆ ಎನ್ನುತ್ತಾರೆ ಮುಳುಗುತಜ್ಞ ಈಶ್ವರ್‌ ಮಲ್ಪೆ. ಸಮುದ್ರದಲ್ಲಿ ಮುಳುಗುವವರನ್ನು ರಕ್ಷಿಸಲು ಜಿಲ್ಲಾಡಳಿತದ ವತಿಯಿಂದ ಜೆಟ್‌ಸ್ಕಿ ಕೂಡ ಇಲ್ಲ. ಮಲ್ಪೆಯಲ್ಲಿ ಕನಿಷ್ಠ 15 ಮಂದಿ ಜಿವರಕ್ಷಕ ಸಿಬ್ಬಂದಿಯನ್ನಾದರೂ ನೇಮಿಸಬೇಕು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.