ADVERTISEMENT

ಗೌರವಧನ ದ್ವಿಗುಣಕ್ಕೆ ಒತ್ತಾಯ: ಧರಣಿ 2ರಂದು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 16:52 IST
Last Updated 24 ನವೆಂಬರ್ 2020, 16:52 IST

ಉಡುಪಿ: ರಾಜ್ಯದ ವಿಶೇಷ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಗೌರವಧನ ದ್ವಿಗುಣಕ್ಕೆ ಒತ್ತಾಯಿಸಿ ಡಿ.2ರಂದು ಎಲ್ಲ ಜಿಲ್ಲೆಗಳ ಡಿಸಿ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ವಿಶ್ವ ಅಂಗವಿಕಲರ ದಿನಾಚರಣೆಯನ್ನೂ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ ಸಂಘದ ಅಧ್ಯಕ್ಷೆ ಡಾ. ಕಾಂತಿ ಹರೀಶ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013- 14ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಶಿಕ್ಷಕರಿಗೆ ₹ 13,500, ಶಿಕ್ಷಕೇತರ ಸಿಬ್ಬಂದಿಗೆ ₹ 8ರಿಂದ ₹9ಸಾವಿರ ಗೌರವಧನ ಜಾರಿಗೊಳಿಸಿದ್ದು, ಶಿಶು ಕೇಂದ್ರಿಕೃತ ಸಹಾಯಧನ ಯೋಜನೆಯಡಿ 141 ವಿಶೇಷ ಶಾಲೆಗಳು ಅನುದಾನ ಬಿಡುಗಡೆಯಾಗುತ್ತಿದೆ. ಬಳಿಕ ಗೌರವ ಧನ ಏರಿಕೆಯಾಗಿಲ್ಲ. ಕನಿಷ್ಠ ವೇತನವೂ ಸಿಗದೆ ಜೀವನ ನಿರ್ವಹಣೆಗೆ ಶಿಕ್ಷಕರಿಗೆ ಕಷ್ಟವಾಗಿದೆ ಎಂದರು.

ರಾಜ್ಯ ಅಂಗವಿಕಲರ ಸೇವಾ ಸಂಸ್ಥೆಗಳ ಒಕ್ಕೂಟದ ಕರೆಯಂತೆ ಡಿ. 3ರಂದು ಸಾರ್ವತ್ರಿಕ ರಜೆಯಾಗಿದ್ದು, ಡಿ.2ರಂದು ವಿಶೇಷ ಶಾಲೆಗಳ ಎಲ್ಲ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಅಥವಾ ಅಂಗವಿಕಲರ ಸಬಲೀಕರಣ ಅಧಿಕಾರಿ ಕಚೇರಿ ಎದುರು ಸಾಂಕೇತಿಕ ಮುಷ್ಕರ ನಡೆಸ ಲಿದ್ದಾರೆ. ಬೇಡಿಕೆಗಳಿಗೆ ಸ್ಪ‍ಂದನ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕಾಂತಿ ಹರೀಶ್ ಎಚ್ಚರಿಕೆ ನೀಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಜಿಲ್ಲಾ ಕಾರ್ಯದರ್ಶಿ ಜಯ ವಿಜಯ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ರೇಷ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.