ಕುಂದಾಪುರ: ಚಿತ್ರನಟ ಪುನೀತ್ ರಾಜ್ಕುಮಾರ್ ಹಾಗೂ ಕುಂದಾಪುರಕ್ಕೆ ಹಲವಾರು ವರ್ಷಗಳ ನಂಟು ಇದೆ. ಇಲ್ಲಿನ ಹಲವು ಸ್ನೇಹಿತರು ಅವರೊಂದಿಗೆ ಇಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಆತ್ಮೀಯ ಗೆಳೆಯನ ಅಗಲುವಿಕೆ ಅವರ ಸ್ನೇಹಿತರಿಗೆ ದು:ಖ ಉಮ್ಮಳಿಸುವಂತೆ ಮಾಡಿದೆ.
ಕಳೆದ ವರ್ಷ ನಿಧನರಾಗಿದ್ದ ಬೆಂಗಳೂರಿನ ಉದ್ಯಮಿ ವಿ.ಕೆ.ಮೋಹನ್ ಅವರಿಗೆ ಡಾ.ರಾಜ್ ಕುಟುಂಬದ ಜತೆಗೆ ಇದ್ದ ನಂಟು, ಪುನೀತ್ ಅವರನ್ನು ಹಲವು ಬಾರಿ ಕುಂದಾಪುರಕ್ಕೆ ಬರುವಂತೆ ಮಾಡಿತ್ತು.
ವೀರಪ್ಪನ್ ಅಪಹರಣ ಪ್ರಕರಣದ ಬಳಿಕ ರಾಜ್ ಕುಮಾರ್ ಅವರು ಭಾಗವಹಿಸಿದ್ದ ಮೊದಲ ಸಾರ್ವಜನಿಕ ಕಾರ್ಯಕ್ರಮ. ತಾಲ್ಲೂಕಿನ ವಕ್ವಾಡಿಯಲ್ಲಿ (2004) ಯಲ್ಲಿ ನಡೆದಿದ್ದ ಡಾ.ರಾಜ್ ಅವರ ಕಾರ್ಯಕ್ರಮದಲ್ಲಿ ತಂದೆ-ತಾಯಿ ಹಾಗೂ ಸಹೋದರ ರಾಘವೇಂದ್ರ ರಾಜ್ಕುಮಾರ್ ಅವರೊಂದಿಗೆ ಬಂದು ವೇದಿಕೆ ಹಂಚಿಕೊಂಡಿದ್ದರು.
ಆಶ್ವಿನಿ ಅವರ ಜತೆಗೆ ವಿವಾಹವಾದ ಬಳಿಕ ಕೊಲ್ಲೂರಿಗೆ ಬಂದಿದ್ದ ದಂಪತಿ ಮೂಕಾಂಬಿಕೆ ದರ್ಶನ ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಕುಂದಾಪುರದ ಗಾಂಧಿ ಮೈದಾನದಲ್ಲಿ ಬಿಲ್ಲವ ಸಮುದಾಯದಿಂದ ನಡೆದಿದ್ದ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ- ನಟಿಯರೊಂದಿಗೆ ಪಾಲ್ಗೊಂಡಿದ್ದ ಅವರು, ಅಭಿಮಾನಿಗಳನ್ನು ರಂಜಿಸಿದ್ದರು. 2017 ರಲ್ಲಿ ಕೊನೆಯ ಬಾರಿ ಕುಂದಾಪುರಕ್ಕೆ ಕುಟುಂಬ ಸಹಿತರಾಗಿ ಬಂದಿದ್ದ ಅವರು ಕೊಲ್ಲೂರು, ಆನೆಗುಡ್ಡೆ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು.
ಕುಂದಾಪುರ ಭಾಗದ ಗೆಳೆಯರೊಂದಿಗೆ ಕುಂದಾಪ್ರ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನ ಪಡುತ್ತಿದ್ದರು. ಇಲ್ಲಿನ ನಾಟಿ ಕೋಳಿ, ಕುಚ್ಚಲಕ್ಕಿ ಅನ್ನ, ನೀರ್ ದೋಸೆ, ಕೋರಿ ರೊಟ್ಟಿ, ಕಾಣೆ ಪ್ರೈ ಅವರ ಅಚ್ಚುಮೆಚ್ಚಿನ ಖಾದ್ಯ. ಕುಟುಂಬ ಸ್ನೇಹಿತ ವಕ್ವಾಡಿ ವಿ.ಕೆ.ಮೋಹನ್ ಅವರ ಮನೆಗೆ ಬಂದಾಗ ಪರಿಸರದಲ್ಲಿ ನಡೆಯುತ್ತಿದ್ದ ಕೋಳಿ ಅಂಕ ವನ್ನು ನೋಡಿ ಖುಷಿ ಪಟ್ಟಿದ್ದರಲ್ಲದೆ, ಕೋಳಿಗಳ ಕಾಳಗವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು.
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸ್ನೇಹಿತ ವಿ.ಕೆ.ಮೋಹನ್ ನಿಧನವಾಗಿದ್ದಾಗ, ಬೆಂಗಳೂರಿನಿಂದ ಅವರ ಪಾರ್ಥಿಕ ಶರೀರವ ತರಲು ಸಹಾಯಹಸ್ತ ನೀಡಿದ್ದಲ್ಲದೆ ಸ್ನೇಹಿತನ ಅಗಲಿಕೆ ಬಗ್ಗೆ ಬಹಳಷ್ಟು ನೊಂದಿದ್ದರು.
ಪುನೀತ್ ಅವರ ಸಾವಿನಲ್ಲಿಯೂ ವಿಧಿ ಅವರ ನೆನಪನ್ನು ಉಳಿಸಿ ಹೋಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.