ADVERTISEMENT

ಕಾರ್ಕಳ: ಧಾರಾಕಾರ ಮಳೆ– ಅಲ್ಲಲ್ಲಿ ಹಾನಿ

​ಪ್ರಜಾವಾಣಿ ವಾರ್ತೆ
Published 20 ಮೇ 2025, 13:37 IST
Last Updated 20 ಮೇ 2025, 13:37 IST
ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮದ ಬರಬೈಲು ಎಂಬಲ್ಲಿ ಸೇತುವೆ ಕಾಮಗಾರಿ ಅಪೂರ್ಣವಾಗಿ ಮಳೆಯಿಂದ ಹಳ್ಳದಲ್ಲಿ ನೀರು ತುಂಬಿ ಸಂಪರ್ಕ ಕಡಿತಗೊಂಡಿದೆ
ಕಾರ್ಕಳ ತಾಲ್ಲೂಕಿನ ಬೋಳ ಗ್ರಾಮದ ಬರಬೈಲು ಎಂಬಲ್ಲಿ ಸೇತುವೆ ಕಾಮಗಾರಿ ಅಪೂರ್ಣವಾಗಿ ಮಳೆಯಿಂದ ಹಳ್ಳದಲ್ಲಿ ನೀರು ತುಂಬಿ ಸಂಪರ್ಕ ಕಡಿತಗೊಂಡಿದೆ   

ಕಾರ್ಕಳ: ಮಂಗಳವಾರ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಅಲ್ಲಲ್ಲಿ ಹಾನಿ ಸಂಭವಿಸಿದೆ.

ಎರ್ಲಪಾಡಿ ಗ್ರಾಮದ ವಿನೋದ ಶೆಟ್ಟಿ ಭೂತಾಲ್ ಮನೆ ಎಂಬುವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಸಾಣೂರು ಸಂಕದ ಬಳಿ ಹೆದ್ದಾರಿ ಪ್ರಾಧಿಕಾರದ ಚರಂಡಿ ವ್ಯವಸ್ಥೆ ಇಲ್ಲದೆ ಮೋಹನ್ ಶೆಟ್ಟಿ ಎಂಬು‌ವರ ಮನೆ ಸಮೀಪ, ಸಾಣೂರು ಸೀಡ್ ಫಾರ್ಮ್ ಬಳಿ ಸೀನ ಮೂಲ್ಯ ಅವರ ಮನೆಗೆ, ಸಾಣೂರು ರಾಮಮಂದಿರದ ಸಮೀಪ ಮಳೆನೀರು ನುಗ್ಗಿದೆ.

ಬೋಳ ಗ್ರಾಮದ ಬರಬೈಲು ಎಂಬಲ್ಲಿ ಸೇತುವೆ ಕಾಮಗಾರಿ ಅಪೂರ್ಣ ಆಗಿರುವುದರಿಂದ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿದೆ. ಈ ಸೇತುವೆಯು ಮಂಜರಪಲ್ಕೆಯಿಂದ ಕಾಂತಾವರಕ್ಕೆ ಸಂಪರ್ಕಿಸುವ ಪಿಡಬ್ಲ್ಯುಡಿ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಬದಲಿ ಪರ್ಯಾಯ ರಸ್ತೆ ಉಪಯೋಗಿಸಲಾಗುತ್ತಿದೆ.

ADVERTISEMENT

ಸಾಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಪದ್ಮನಾಭ ನಗರದ ಗುಡ್ಡದ ತುದಿಯಲ್ಲಿರುವ ಹೈಟೆನ್ಷನ್ ಟವರ್ ತಡೆಗೋಡೆಯ ಮೇಲ್ಭಾಗಕ್ಕೆ ಮಣ್ಣು ತುಂಬಿಸಿ ಅಸಮರ್ಪಕ ಕಾಮಗಾರಿ ನಡೆಸಲಾಗಿತ್ತು. ಭಾರಿ ಮಳೆಗೆ ಗುಡ್ಡದ ಮೇಲಿನ ದೊಡ್ಡ ದೊಡ್ಡ ಕಲ್ಲುಗಳು, ಮಣ್ಣು ಸರ್ವಿಸ್ ರಸ್ತೆಗೆ ಬೀಳುತ್ತಿದೆ. ಗುಡ್ಡದ ಮಣ್ಣು ಜರಿದು ರಸ್ತೆಗೆ ಬಿದ್ದು ಇನ್ನಷ್ಟು ಅಪಾಯವಾಗುವ ಸಂಭವವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.