ADVERTISEMENT

ಕೃಷ್ಣಮಠದಲ್ಲಿ ಸರಳ ರಾಮನವಮಿ, ಮನೆಯಲ್ಲಿಯೇ ಭಕ್ತರ ಪ್ರಾರ್ಥನೆಗೆ ಮನವಿ

ರಾಮತಾರಕ, ಧನ್ವಂತರಿ ಮಂತ್ರ ಜಪ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 14:35 IST
Last Updated 2 ಏಪ್ರಿಲ್ 2020, 14:35 IST
ಶಿರ್ವ ಮಂಚಕಲ್‌ನಲ್ಲಿ ನಡೆದ ರಾಮೋತ್ಸವದಲ್ಲಿ  ಪಲಿಮಾರು ಶ್ರೀಗಳು ರಾಮಾಯಣ ಪಾರಾಯಣ ನಡೆಸಿದರು.
ಶಿರ್ವ ಮಂಚಕಲ್‌ನಲ್ಲಿ ನಡೆದ ರಾಮೋತ್ಸವದಲ್ಲಿ  ಪಲಿಮಾರು ಶ್ರೀಗಳು ರಾಮಾಯಣ ಪಾರಾಯಣ ನಡೆಸಿದರು.   

ಉಡುಪಿ: ಕೃಷ್ಣಮಠದಲ್ಲಿ ಗುರುವಾರ ಪರ್ಯಾಯ ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಹಾಗೂ ಈಶಪ್ರಿಯ ತೀರ್ಥರು ಸರಳವಾಗಿ ರಾಮನವಮಿ ಪೂಜೆ ನೆರವೇರಿಸಿದರು.

ಗುರುವಾರ ಸಂಜೆ 6ರಿಂದ 6.30ರವರೆಗೆ ಕೃಷ್ಣನ ಗರ್ಭಗುಡಿಯ ಮುಂದೆ ಉಭಯ ಯತಿಗಳು ರಾಮತಾರಕ ಮಂತ್ರ ಹಾಗೂ ಧನ್ವಂತರಿ ಮಂತ್ರ ಜಪ ಮಾಡಿದರು. ಈ ಸಂದರ್ಭ ವಿಶ್ವಪ್ರಿಯ ತೀರ್ಥ ಶ್ರೀಗಳು ಭಕ್ತರಿಗೆ ಆಶೀರ್ವಚನ ನೀಡಿ, ಲೋಕದ ಒಳಿತಿಗಾಗಿ ಆತ್ಮರಕ್ಷೆಗಾಗಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಕುಳಿತು ರಾಮಧ್ಯಾನ ಮಾಡಬೇಕು. ಶ್ರೀಕೃಷ್ಣ ಮುಖ್ಯಪ್ರಾಣರ ಪ್ರೀತಿಗೆ ಪಾತ್ರರಾಗಬೇಕು ಎಂದರು.

ರಾಮನವಮಿ ದಿನವಾದ ಏ.2ರಿಂದ ಹನುಮ ಜಯಂತಿ ದಿನವಾದ 8ರವರೆಗೆ ಕೃಷ್ಣಮಠದಲ್ಲಿ ನಿತ್ಯ ಬೆಳಿಗ್ಗೆ 9ರಿಂದ 11ರವರೆಗೆ ಸತ್ಕಾಥಾಕಾಲಕ್ಷೇಪ ಹಾಗೂ ಭಾಗವತ ಸಪ್ತಾಹ ನಡೆಯಲಿದೆ. ಭಕ್ತರು ಮನೆಯಲ್ಲಿಯೇ ಕುಳಿತು ದೇವರನ್ನು ಪ್ರಾರ್ಥಿಸಬೇಕು ಎಂದು ಅದಮಾರು ಮಠದ ಆಡಳಿತ ಮಂಡಳಿ ಮನವಿ ಮಾಡಿದೆ.

ADVERTISEMENT

ಪಲಿಮಾರು ಶ್ರೀಗಳಿಂದ ಪೂಜೆ:ಕುತ್ಯಾರಿನಲ್ಲಿ ಪಲಿಮಾರು ವಿದ್ಯಾಧೀಶ ಶ್ರೀಗಳು ಸರಳವಾಗಿ ರಾಮೋತ್ಸವ ಪೂಜೆ ನಡೆಸಿದರು. ಮಠದ ಪಟ್ಟದ ದೇವರಾದ ರಾಮ ಸೀತಾ ಸಹಿತ ಲಕ್ಷಣನ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಶ್ರೀಗಳು ರಾಮಾಯಣ ಪಾರಾಯಣ ನಡೆಸಿದರು. ಈ ಸಂದರ್ಭ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಹಾಗೂ ಮಠದ ಕೆಲವೇ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.