
ಸಾಲಿಗ್ರಾಮ (ಬ್ರಹ್ಮಾವರ): ರಸ್ತೆ ಅಪಘಾತದಲ್ಲಿ ಯುವಜನರು ಹೆಚ್ಚು ಸಾವಿಗೀಡಾಗುತ್ತಿದ್ದು, ಈ ಬಗ್ಗೆ ಅವರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ. ಹೇಳಿದರು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ಬುಧವಾರ ಜಿಲ್ಲಾ ಪೊಲೀಸ್, ಉಡುಪಿ ಪೊಲೀಸ್ ಉಪವಿಭಾಗ, ಬ್ರಹ್ಮಾವರ ಪೊಲೀಸ್ ವೃತ್ತ ಕೋಟ ಪೊಲೀಸ್ ಠಾಣೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ನಡೆದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ, ಸೈಬರ್ ಅಪರಾಧಗಳ ಬಗ್ಗೆ ತಿಳುವಳಿಕೆ ಸಭೆ, ಉಚಿತ ನೇತ್ರ, ದಂತ ಪರೀಕ್ಷೆ, ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು ಮಕ್ಕಳಿಗೆ ವಾಹನ ನೀಡುವಾಗ ಅವರ ವಯಸ್ಸನ್ನು ಆಧರಿಸಿ ವಾಹನ ಚಲಾಯಿಸಲು ಪರವಾನಗಿ ಪಡೆದು ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ, ಕೋಟ ಪಂಚವರ್ಣ ಸಂಘಟನೆ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಕಾರ್ಯಕ್ರಮಕ್ಕೆ ಸಹಯೋಗ ನೀಡಿದ್ದವು. ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಉದ್ಘಾಟಿಸಿ ಶುಭ ಹಾರೈಸಿದರು.
ಕೋಟ, ಸಾಲಿಗ್ರಾಮ, ಸಾಸ್ತಾನದ ಹಿರಿಯ ಆಟೊ ಚಾಲಕರಾದ ರತ್ನಾಕರ ಪೈ ಕೋಟ, ವೆಂಕಟೇಶ ಪೂಜಾರಿ ಕೋಟ, ನಾರಾಯಣ ಪೂಜಾರಿ ಸಾಲಿಗ್ರಾಮ, ನಾರಾಯಣ ಗುಂಡ್ಮಿ ಅವರನ್ನು ಗೌರವಿಸಲಾಯಿತು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕೋಟ ಮೂರ್ಕೈಯಿಂದ ಸಾಲಿಗ್ರಾಮದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಕೋಟ ವಿವೇಕ ವಿದ್ಯಾಸಂಸ್ಥೆ, ಆಶ್ರಿತ್ ಸಮೂಹ ಶಿಕ್ಷಣ ಸಂಸ್ಥೆ, ಮಾಬುಕಳದ ಫಾರ್ಚುನ್ ಸೈನ್ಸ್ ಕಾಲೇಜು, ಕೋಟ ಮಧುವನದ ಇಸಿಆರ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೋಟ ವಿವೇಕ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ. ಜಗದೀಶ ನಾವಡ ಜಾಥಾಕ್ಕೆ ಚಾಲನೆ ನೀಡಿದರು.
ಪಾರ್ವತಿ ಮಹಾಬಲ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆಯ ಸಂಯೋಜಕ ಶಂಕರ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಡಾ.ಯಶಶ್ರೀ ಶೆಟ್ಟಿ, ಉಡುಪಿ ಆರ್ಟಿಒ ಅಧಿಕಾರಿ ಲಕ್ಷ್ಮೀನಾರಾಯಣ ನಾಯಕ್, ಕೋಟ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರವೀಣ ಕುಮಾರ್ ಭಾಗವಹಿಸಿದ್ದರು. ಪಂಚವರ್ಣದ ರವೀಂದ್ರ ಕೋಟ ಸ್ವಾಗತಿಸಿದರು. ಸುಜಾತ ಬಾಯರಿ ನಿರೂಪಿಸಿದರು. ಕ್ರೈಂ ವಿಭಾಗದ ಎಸ್ಐ ಮಹಂತೇಶ ಗೌಡ ವಂದಿಸಿದರು. ಕೋಟ ಠಾಣೆಯ ಎಎಸ್ಐ ಗೋಪಾಲ ಪೂಜಾರಿ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.