ಪಡುಬಿದ್ರಿ: ‘ಶಿಕ್ಷಣ, ಆರೋಗ್ಯ ಮತ್ತು ಬಡತನ ನಿರ್ಮೂಲನಕ್ಕಾಗಿ ನೀಡುವ ಸೇವೆಯೂ ಶಾಂತಿಯ ಸಂಕೇತ. ಸಹೋದರತ್ವ, ಸೌಹಾರ್ದ ಇರುವಲ್ಲಿ ಶಾಂತಿ ನೆಲೆಸುತ್ತದೆ. ಇದನ್ನೇ ರೋಟರಿ ಬಯಸುತ್ತದೆ’ ಎಂದು ಜಿಲ್ಲಾ ಪೂರ್ವ ಗವರ್ನರ್, ರೋಟರಿ ಸಲಹೆಗಾರ ಅಭಿನಂದನ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ರೋಟರಿ ಕ್ಲಬ್ನ 25ನೇ ವರ್ಷದ, 2025–26ನೇ ಸಾಲಿನ ನೂತನ ಅಧ್ಯಕ್ಷ ಸುನಿಲ್ ಕುಮಾರ್ ಹಾಗೂ ತಂಡದ ಪದಗ್ರಹಣ ಸಮಾರಂಭದಲ್ಲಿ ಪದಪ್ರದಾನ ನೆರವೇರಿಸಿ ಮಾತನಾಡಿದರು.
ಯಾವ ದೇಶದಲ್ಲಿ ಯುದ್ಧ ಇಲ್ಲವೋ ಅಲ್ಲಿ ಶಾಂತಿ ಇದೆ ಎಂದು ಅರ್ಥವಲ್ಲ. ದೇಶದ ಗಡಿಯಲ್ಲಿ ಯುದ್ಧ ತಡೆಗಟ್ಟುವುದು ಶಾಂತಿಯ ಸಂಕೇತವಲ್ಲ. ಎಲ್ಲಿ ಸೌಹಾರ್ದ, ಸಹೋದರತ್ವ, ಆರೋಗ್ಯ, ಶಿಕ್ಷಣ, ಹಸಿವಿನ ವಿರುದ್ಧ ಹೋರಾಟ ಮತ್ತು ಆಂತರಿಕ ಶಾಂತಿ ಕಾಪಾಡಿಕೊಳ್ಳುವ ಮನಃಸ್ಥಿತಿ ಬೆಳೆಸಿಕೊಳ್ಳುವುದು ಶಾಂತಿಯ ಸಂಕೇತ ಎಂದರು.
ರಜತ ಮಹೋತ್ಸವಕ್ಕೆ ಚಾಲನೆ: ರೋಟರಿ ಕ್ಲಬ್ನ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಕ್ಲಬ್ನ ಸ್ಥಾಪಕಾಧ್ಯಕ್ಷ ವೈ. ಸುಧೀರ್ ಕುಮಾರ್ ಚಾಲನೆ ನೀಡಿ ಶುಭಹಾರೈಸಿದರು.
ರೋಲಿಂಗ್ ಶೀಲ್ಡ್: ದಿ.ವೈ. ಹಿರಿಯಣ್ಣ ದಂಪತಿ ಸ್ಮರಣಾರ್ಥ ಅವರ ಪುತ್ರರಾದ ವೈ. ಸುಧೀರ್ ಕುಮಾರ್, ವೈ. ಸುಕುಮಾರ್ ಅವರಿಂದ ನೀಡಲ್ಪಟ್ಟ ರೋಲಿಂಗ್ ಶೀಲ್ಡ್ ಅನ್ನು ಸತತ ನೂರು ಶೇ ಫಲಿತಾಂಶ ಪಡೆದ ಪಡುಬಿದ್ರಿ ಸಾಗರ್ ವಿದ್ಯಾಮಂದಿರ ಶಾಲೆಗೆ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಅಧಿಕ ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದಿ. ಮಾಧವ ಆಚಾರ್ಯ, ಸಿ. ಸೀತಾ ಬಾಯಿ ದಂಪತಿ ಸ್ಮರಣಾರ್ಥ ಅರುಣ್, ಗೀತಾ ಅವರು ಎಸ್ಎಸ್ಎಲ್ಸಿಯಲ್ಲಿ ಗರಿಷ್ಟ ಅಂಕ ಪಡೆದ ಮುದರಂಗಡಿ ಸೇಂಟ್ ಫ್ರಾನ್ಸಿಸ್ ಶಾಲೆಯ ಸೌರಭ್ ಅವರಿಗೆ ವಿದ್ಯಾರ್ಥಿವೇತನ ವಿತರಿಸಿದರು. 25 ಸದಸ್ಯರು ಹೊಸದಾಗಿ ರೋಟರಿ ಸಂಸ್ಥೆಗೆ ಸೇರ್ಪಡೆಗೊಂಡರು.
ಗೃಹಪತ್ರಿಕೆ ಬಿಡುಗಡೆ: ಪಡುಬಿದ್ರಿ ರೋಟರಿ ಕ್ಲಬ್ನ ಗೃಹಪತ್ರಿಕೆ ‘ಸ್ಪಂದನ’ ಬಿಡುಗಡೆಗೊಳಿಸಲಾಯಿತು. ಅಭಿನಂದನ್ ಶೆಟ್ಟಿ, ನಿಕಟಪೂರ್ವ ಸಹಾಯಕ ಗವರ್ನರ್ ಅನಿಲ್ ಡೇಸಾ, ನಿಕಟಪೂರ್ವ ವಲಯ ಸೇನಾನಿ ಲೆಫ್ಟಿನೆಂಟ್ ಮೆಲ್ವಿನ್ ಡಿಸೋಜ, ನಿಕಟಪೂರ್ವ ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ ಅವರನ್ನು ಗೌರವಿಸಲಾಯಿತು.
ಸಂಸ್ಥೆಯ ನೂತನ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ವಲಯ ಸೇನಾನಿ ಸಂದೀಪ್ ಬಂಗೇರ ಭಾಗವಹಿಸಿದ್ದರು. ಪೂರ್ವಾಧ್ಯಕ್ಷ ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಪವನ್ ಸಾಲ್ಯಾನ್ ವಂದಿಸಿದರು. ಕಾರ್ಯದರ್ಶಿ ಹೇಮಲತಾ ಸುವರ್ಣ ವರದಿ ವಾಚಿಸಿದರು. ಬಿ.ಎಸ್.ಆಚಾರ್ಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.