ADVERTISEMENT

ಕೋಡಿ ಬ್ಯಾರೀಸ್‌ ಕಾಲೇಜು: ದೃಷ್ಟಿ ಯೋಜನೆ ಉದ್ಘಾಟನೆ

ಖಾಸಗಿ ಭದ್ರತಾ ವ್ಯವಸ್ಥೆಯಡಿ ಅಪರಾಧ ಚಟುವಟಿಕೆಗಳ ಕಣ್ಗಾವಲು ಮಾಡುವ ವಿನೂತನ ವ್ಯವಸ್ಥೆ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:14 IST
Last Updated 19 ಆಗಸ್ಟ್ 2025, 3:14 IST
ಕೋಡಿಯ ಬ್ಯಾರೀ‌ಸ್ ಕಾಲೇಜಿನಲ್ಲಿ ಎಸ್‌ಪಿ ಹರಿರಾಮ್‌ ಶಂಕರ್ ಅವರು ದೃಷ್ಟಿ ಯೋಜನೆ ಉದ್ಘಾಟಿಸಿದರು
ಕೋಡಿಯ ಬ್ಯಾರೀ‌ಸ್ ಕಾಲೇಜಿನಲ್ಲಿ ಎಸ್‌ಪಿ ಹರಿರಾಮ್‌ ಶಂಕರ್ ಅವರು ದೃಷ್ಟಿ ಯೋಜನೆ ಉದ್ಘಾಟಿಸಿದರು   

ಕುಂದಾಪುರ: ಮನೆ ಮನೆಗೆ ಪೊಲೀಸ್ ಯೋಜನೆ ಸ್ವರೂಪದಲ್ಲಿ ದೃಷ್ಟಿ ಯೋಜನೆ ಪ್ರಾರಂಭಿಸಲಾಗಿದ್ದು, ಪೊಲೀಸ್ ಇಲಾಖೆ ಮೇಲುಸ್ತುವಾರಿಯಲ್ಲಿ, ಖಾಸಗಿ ಭದ್ರತಾ ವ್ಯವಸ್ಥೆಯಡಿ ಅಪರಾಧ ಚಟುವಟಿಕೆಗಳ ಕಣ್ಗಾವಲು ಮಾಡುವ ವಿನೂತನ ವ್ಯವಸ್ಥೆಯಾಗಿದೆ ಎಂದು ಎಸ್‌ಪಿ ಹರಿರಾಮ್ ಶಂಕರ್ ಹೇಳಿದರು.

ಇಲ್ಲಿಗೆ ಸಮೀಪದ ಕೋಡಿಯ ಬ್ಯಾರೀಸ್ ಕಾಲೇಜಿನಲ್ಲಿ ಪೊಲೀಸ್ ಉಪವಿಭಾಗದ ಆಶ್ರಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ದೃಷ್ಟಿ ಯೋಜನೆ’ ಉದ್ಘಾಟಿಸಿ ಅವರು ಮಾತನಾಡಿ, ಮನೆ, ಅಂಗಡಿ, ಸಾರ್ವಜನಿಕರ ರಕ್ಷಣೆಗೆ ನೆರವಾಗಲು ಈ ಯೋಜನೆ ಆರಂಭಿಸಿದ್ದು, ಖಾಸಗಿ ಭದ್ರತಾ ವ್ಯವಸ್ಥೆಗಾಗಿ ಮಾಸಿಕ ₹100– 150 ದೇಣಿಗೆ ನೀಡಿ ಸುರಕ್ಷತೆ ಪ‍ಡೆಯಬಹುದು ಎಂದರು.

ಜಿಲ್ಲೆಯ 50 ಕಡೆ ಯೋಜನೆ ಜಾರಿಯಾಗಲಿದೆ. ಸೇಫ್ ಕುಂದಾಪುರ ಪ್ರಾಜೆಕ್ಟ್ ಮೂಲಕ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆ ಸಿಸಿಟಿವಿ ಲೈವ್ ಮಾನಿಟರಿಂಗ್ ಮಾಡಿ ಅನೇಕ ಅಪರಾಧ ಚಟುವಟಿಕೆಗಳನ್ನು ತಡೆಯಲು, ಪತ್ತೆ ಹಚ್ಚಲು ನೆರವಾಗಿದೆ. ಕೋಡಿ ಸೀವಾಕ್‌ಗೆ ಪ್ರವಾಸಿಗರು ಹೋಗಲು ಕೂಡಾ ಇದು ಸಹಕಾರಿಯಾಗಿದೆ ಎಂದರು.

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ಡಿವೈಎಸ್‌ಪಿ ಎಚ್.ಡಿ.ಕುಲಕರ್ಣಿ ಅವರು, ಜಿಲ್ಲೆಯಲ್ಲಿ 13 ಕಡೆ ದೃಷ್ಟಿ ಯೋಜನೆ ಅನುಷ್ಠಾನಕ್ಕೆ ಬಂದಿದೆ. ಅಪರಾಧ, ಅಪಘಾತ, ಶಾಲಾ ಕಾಲೇಜು ಮಕ್ಕಳ ಡ್ರಗ್ಸ್ ಹಾವಳಿ ತಡೆಗೂ ಉಪಯೋಗವಾಗಲಿದೆ ಎಂದರು.

ಜಿಲ್ಲಾ ಗೃಹರಕ್ಷಕ ದಳ ಜಿಲ್ಲಾ ಸೆಕೆಂಡ್ ಇನ್ ಕಮಾಂಡೆಂಟ್ ರಾಜೇಶ್ ಕೆ.ಸಿ., ಯಂಗ್ ಮುಸ್ಲಿಂ ಅಸೋಸಿಯೇಶನ್‌ ಪದಾಧಿಕಾರಿ ಮುನಾಫ್ ಕೋಡಿ, ತಾಲ್ಲೂಕು ಬೋರ್ಡ್ ಮಾಜಿ ಸದಸ್ಯ ಅಬ್ದುಲ್ ಕೋಡಿ ಮಾತನಾಡಿದರು. ಬ್ಯಾರೀಸ್ ಸಮೂಹ ಸಂಸ್ಥೆಯ ಆಡಳಿತ ಟ್ರಸ್ಟಿ ಅಶ್ರಫ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.‌ ಅಧ್ಯಕ್ಷ ಕೆ.ಎಂ.‌ ಅಬ್ದುಲ್ ರಹಿಮಾನ್, ಪುರಸಭೆ ಸದಸ್ಯರಾದ ಅಶ್ಪಕ್ ಕೋಡಿ, ಕಮಲ ಮಂಜುನಾಥ್, ಲಕ್ಷ್ಮೀ ಬಾಯಿ, ಕೋಡಿ ಚಕ್ರಮ್ಮ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ, ಕೋಡಿ ಮುಹಿಯುದೀನ್ ಜುಮಾ ಮಸೀದಿ ಅಧ್ಯಕ್ಷ ಜುಲ್ಫಿಕರ್, ಬಿಲಾಲ್ ಮಸೀದಿ ಅಧ್ಯಕ್ಷ ಮಹಮದ್ ಅಲಿ, ಹೈಗುಳಿ ದೇವಸ್ಥಾನ ಅಧ್ಯಕ್ಷ ವೆಂಕಟೇಶ ಬಿಲ್ಲವ, ಕಿಲೆರಿಯಾ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್.ಫಾರೂಕ್ ಭಾಗವಹಿಸಿದ್ದರು.

ದೃಷ್ಟಿ ಯೋಜನೆಯಲ್ಲಿ ಸೇವೆ ಸಲ್ಲಿಸುವ ಹಸೈನಾರ್ ಕೋಡಿ ಅವರಿಗೆ ಧ್ವಜ ಹಸ್ತಾಂತರ ಮಾಡಲಾಯಿತು. ಎಸ್‌ಪಿ ಹರಿರಾಮ್‌ಶಂಕರ್, ಅಶ್ರಫ್ ಬ್ಯಾರಿ, ರಾಜೇಶ್ ಕೆ.ಸಿ, ಎಚ್.ಡಿ.ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ವೃತ್ತ ನಿರೀಕ್ಷಕ‌ ಸಿ.ಪಿ. ಜಯರಾಮ ಗೌಡ ಸ್ವಾಗತಿಸಿದರು. ನಗರ ಠಾಣೆ ಎಸ್‌ಐ ನಂಜಾನಾಯ್ಕ್ ವಂದಿಸಿದರು. ಹೆಡ್ ಕಾನ್‌ಸ್ಟೆಬಲ್ ಮಧುಸೂದನ ಉಪ್ಪಿನಕುದ್ರು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.