ADVERTISEMENT

ಸಂಸದ ಸಾಕ್ಷಿ ಮಹಾರಾಜ್‌ಗೆ ತೆಕ್ಕಟ್ಟೆಯಲ್ಲಿ ಪಂಚಕರ್ಮ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 21:14 IST
Last Updated 8 ಡಿಸೆಂಬರ್ 2020, 21:14 IST
ಕುಂದಾಪುರದ ತೆಕ್ಕಟ್ಟೆಯಲ್ಲಿರುವ ಡಾ.ತನ್ಮಯ ಗೋಸ್ವಾಮಿ  ಅವರ ‘ಆಯುರ್ವೇದ ಆಶ್ರಮ’ ದಲ್ಲಿ ಚಿಕಿತ್ಸೆಗಾಗಿ ಬಂದಿರುವ ಬಿಜೆಪಿ ಯ ಹಿರಿಯ ಸಂಸದ ಸಾಕ್ಷಿ ಮಹಾರಾಜ್‌ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ಮಾಡಿ ಕುಶಲೋಪರಿ ನಡೆಸಿದರು.
ಕುಂದಾಪುರದ ತೆಕ್ಕಟ್ಟೆಯಲ್ಲಿರುವ ಡಾ.ತನ್ಮಯ ಗೋಸ್ವಾಮಿ  ಅವರ ‘ಆಯುರ್ವೇದ ಆಶ್ರಮ’ ದಲ್ಲಿ ಚಿಕಿತ್ಸೆಗಾಗಿ ಬಂದಿರುವ ಬಿಜೆಪಿ ಯ ಹಿರಿಯ ಸಂಸದ ಸಾಕ್ಷಿ ಮಹಾರಾಜ್‌ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ಮಾಡಿ ಕುಶಲೋಪರಿ ನಡೆಸಿದರು.   

ಕುಂದಾಪುರ: ಉತ್ತರ ಪ್ರದೇಶದ ಉನ್ನವೊ ಲೋಕಸಭಾ ಕ್ಷೇತ್ರವನ್ನುಪ್ರತಿನಿಧಿಸುತ್ತಿರುವ ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್‌, ತೆಕ್ಕಟ್ಟೆಯ ಸಮೀಪದ ಕೊಮೆಯಲ್ಲಿ ಡಾ.ತನ್ಮಯ ಗೋಸ್ವಾಮಿ ನಡೆಸುತ್ತಿರುವ ‘ಆಯುರ್ವೇದ ಆಶ್ರಮ’ ದಲ್ಲಿ ಪಂಚಕರ್ಮ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸಾಕ್ಷಿ ಮಹಾರಾಜ್‌ ಉತ್ತರ ಪ್ರದೇಶದಿಂದ ಕರ್ನಾಟಕದ ಕರಾವಳಿಯ ಸೊಬಗಿಗೆ ಮನಸೋತು ಇಲ್ಲಿಗೆ ಬಂದಿರುವುದೇ ವಿಶೇಷ. ದೇಶದ ಕೆಲವೇ ಮಂದಿಗೆ ಇರುವ ವೈ–ಪ್ಲಸ್‌ ಭದ್ರತೆಯನ್ನು ಹೊಂದಿರುವ ಅವರು, ಇದನ್ನೆಲ್ಲ ಮರೆತು ಆಯುರ್ವೇದ ಆಶ್ರಮದ ವೈದ್ಯ ಡಾ.ತನ್ಮಯ ಗೋಸ್ವಾಮಿ ಅವರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ಶುಕ್ರವಾರದಿಂದ ಆಶ್ರಮದಲ್ಲಿ ಚಿಕಿತ್ಸೆ ಪಡದುಕೊಳ್ಳುತ್ತಿರುವ ಅವರು, ಬುಧವಾರ ಬೆಳಿಗ್ಗೆ ಮಂಗಳೂರಿನ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶಕ್ಕೆ ಹಿಂದಿರುಗುವರು.

ಸಾಕ್ಷಿ ಮಹಾರಾಜ್‌ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಆಶ್ರಮದ ಮುಖ್ಯಸ್ಥ ಡಾ.ತನ್ಮಯ್‌ ಗೋಸ್ವಾಮಿ ಅವರು, ‘ಬೆಳಿಗ್ಗೆ ಯೋಗಾಭ್ಯಾಸದಿಂದ ಚಿಕಿತ್ಸೆ ಪ್ರಾರಂಭವಾಗುತ್ತದೆ. ಮಧ್ಯಾಹ್ಮದವರೆಗೂ ಪಂಚಕರ್ಮದ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ ದೇಹವನ್ನು ಹದಗೊಳಿಸಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಲಘು ಆಹಾರ. ಸಂಜೆ ಧ್ಯಾನ ಹಾಗೂ ಸಮುದ್ರ ದಂಡೆಯಲ್ಲಿ ವಾಯುವಿಹಾರ ನೀಡಲಾಗುತ್ತದೆ. 65 ವರ್ಷ ದಾಟಿರುವ ಸಾಕ್ಷಿ ಮಹಾರಾಜ್‌ ಅವರಿಗೆ ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಲ್ಲ. ವಯೋಸಹಜ ನರ ಹಾಗೂ ದೇಹ ಬಲವರ್ಧನೆಗಾಗಿ ಕೇವಲ 1 ವಾರದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.