ADVERTISEMENT

ಸಿದ್ದಾಪುರ ಏತ ನೀರಾವರಿ: ಕಾಮಗಾರಿ ಆರಂಭಿಸಲು ಒತ್ತಾಯ, ಹೋರಾಟಕ್ಕಿಳಿದ ರೈತರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 3:03 IST
Last Updated 23 ಜನವರಿ 2026, 3:03 IST
ಸಿದ್ದಾಪುರ ಏತ ನೀರಾವರಿಯ ಕಾಮಗಾರಿ ಸ್ಥಳ
ಸಿದ್ದಾಪುರ ಏತ ನೀರಾವರಿಯ ಕಾಮಗಾರಿ ಸ್ಥಳ   

ಉಡುಪಿ: ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ನಿಲ್ಲಿಸಿರುವುದನ್ನು ಖಂಡಿಸಿ ರೈತರು ಹೋರಾಟಕ್ಕಿಳಿದ್ದಿದ್ದಾರೆ.

‘ಈ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ನಾಲ್ಕು ಗ್ರಾಮ ಪಂಚಾಯಿತಿಗಳ ನಿರ್ಣಯವನ್ನು ಗೌರವಿಸದೆ ಕಾಮಗಾರಿಯನ್ನು ನಿಲ್ಲಿಸಲಾಗಿದೆ’ ಎಂಬುದು ರೈತರ ಆರೋಪ.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್‌ಚಂದ್ರ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ ರೈತ ಸಂಘದ ವತಿಯಿಂದ ಬುಧವಾರ ಸಿದ್ದಾಪುರದಲ್ಲಿ ಪ್ರತಿಭಟನೆ ಹಾಗೂ ಜನಾಗ್ರಹ ಸಭೆ ನಡೆದಿತ್ತು. ಬಿಜೆಪಿ ಶಾಸಕ ಗುರುರಾಜ್‌ ಗಂಟಿಹೊಳೆ ಅವರೂ ಭಾಗವಹಿಸಿದ್ದರು. ಪಕ್ಷಾತೀತವಾಗಿ ಹಲವು ಮಂದಿ ಪಾಲ್ಗೊಂಡಿದ್ದರು.

ADVERTISEMENT

'ಸುಮಾರು ₹165 ಕೋಟಿ ವೆಚ್ಚದ ಈ ಏತ ನೀರಾವರಿ ಯೋಜನೆಯ ಶೇ 50 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಈಗ ಸರ್ಕಾರವೇ ಯೋಜನೆಗೆ ತಡೆ ನೀಡಿರುವುದು ಸರಿಯಲ್ಲ’ ಎಂದು ರೈತರು ದೂರಿದ್ದಾರೆ.

ಸಿದ್ದಾಪುರ ಏತ ನೀರಾವರಿ ಯೋಜನೆ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರದ ಉಳ್ಳೂರು, ಸಿದ್ದಾಪುರ, ಆಜ್ರಿ, ಬಾಂಡ್ಯ ಸೇರಿದಂತೆ ಹಲವು ಗ್ರಾಮಗಳ ಸುಮಾರು 1,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ.

‘ಸಿದ್ದಾಪುರ ಗ್ರಾಮದ ಹೊರಿಯಬ್ಬೆ ಎಂಬಲ್ಲಿ ನಡೆಯುತ್ತಿದ್ದ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಅದನ್ನು ಕೂಡಲೇ ಆರಂಭಿಸಬೇಕು ಎಂಬ ಸಿದ್ದಾಪುರ ಏತ ನೀರಾವರಿ ಹೋರಾಟ ಸಮಿತಿಯ ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಬೆಂಬಲ ನೀಡಿದೆ’ ಎಂದು ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದ್ದಾರೆ.

‘ಡಿಪಿಆರ್‌ನಲ್ಲಿರುವಂತೆಯೇ ಕಾಮಗಾರಿ ಮುಂದುವರಿಸಬೇಕು. ಸಣ್ಣಪುಟ್ಟ ಬದಲಾವಣೆಗಳಿದ್ದರೆ, ಕಾಮಗಾರಿ ಮುಂದುವರಿಸಿಕೊಂಡೇ ಮಾಡಿ’ ಎಂದು ಶಾಸಕ ಗುರುರಾಜ್‌ ಗಂಟಿಹೊಳೆ ತಿಳಿಸಿದ್ದಾರೆ.

‘ವರದಿ ಸಲ್ಲಿಸಿದ ಬಳಿಕ ಕಾಮಗಾರಿ ಆರಂಭ’

‘ಸಿದ್ದಾಪುರ ಏತ ನೀರಾವರಿ ಯೋಜನೆಯ ಭಾಗವಾಗಿ ಜಾಕ್‌ವೆಲ್‌ ನಿರ್ಮಿಸುವ ಬಗ್ಗೆ ಪರಿಶೀಲನೆಗಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಈಗಾಗಲೇ ಸರ್ಕಾರದ ಪರಿಣತರ ಸಮಿತಿ ಬಂದು ಪರಿಶೀಲನೆ ನಡೆಸಿದೆ. ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಕಾಮಗಾರಿ ಮುಂದುವರಿಯಲಿದೆ’ ಕಿರಣ್‌ ಪಡ್ತಿ ಕಾರ್ಯಪಾಲಕ ಎಂಜಿನಿಯರ್‌ ಕರ್ನಾಟಕ ನೀರಾವರಿ ನಿಗಮ 

ಹಲವಾರು ವರ್ಷಗಳಿಂದ ವಾರಾಹಿ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಸಿದ್ದಾಪುರ ಏತನೀರಾವರಿ ಯೋಜನೆ ಕಾಮಗಾರಿಯನ್ನಾದರೂ ಮೊದಲು ಪೂರ್ಣಗೊಳಿಸಿ. ಈ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲ ಇದೆ.
–ಗುರುರಾಜ್‌ ಗಂಟಿಹೊಳೆ, ಬೈಂದೂರು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.