ಕುಂದಾಪುರ: ಆಗೊಮ್ಮೆ, ಈಗೊಮ್ಮೆ ಸುರಿಯುವ ತುಂತುರು ಮಳೆ, ಅಕ್ಕ-ಪಕ್ಕದಲ್ಲೆಲ್ಲ ಕೆಸರು ತುಂಬಿದ ಗದ್ದೆಗಳು, ಮೊಳಕಾಲೆತ್ತರಕ್ಕೆ ಉಡುಪನ್ನು ಕಟ್ಟಿಕೊಂಡು ಗದ್ದೆಗಿಳಿದ ಮಕ್ಕಳಲ್ಲಿ ನಾವೇನು ಈ ಕ್ಷೇತ್ರಕ್ಕೆ ಹೊಸಬರಲ್ಲ ಎನ್ನುವ ಹುಮ್ಮಸ್ಸು. ಸ್ಥಳೀಯ ಮಹಿಳೆಯರೊಂದಿಗೆ ಕೈಜೋಡಿಸಿ ಕ್ಷಣಾರ್ಧದಲ್ಲಿ ಸಾಲು ಸಾಲು ನೇಜಿ ಗಿಡಗಳನ್ನು ಗದ್ದೆಯ ಕೆಸರಿನಲ್ಲಿ ಇಡುವ ಮಕ್ಕಳ ಕೈಚಳಕಕ್ಕೆ ಸ್ಥಳೀಯ ಕೃಷಿಕರಿಂದ ಮೆಚ್ಚುಗೆಯ ಮಹಾಪೂರ........
ಈ ದೃಶ್ಯಗಳಿಗೆ ಸಾಕ್ಷಿಯಾದದ್ದು, ಬಾಂಡ್ಯ ಗ್ರಾಮದ, ಕೆಳ ಬಾಂಡ್ಯದ ಕೃಷಿ ಗದ್ದೆಗಳಲ್ಲಿ. ಇಂದಿನ ಮಕ್ಕಳಲ್ಲಿ ಮರೆಯಾಗುತ್ತಿರುವ ಕೃಷಿ ಆಸಕ್ತಿಯನ್ನು ನಮ್ಮ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ನ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಭತ್ತ ಬೆಳೆಯುವ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಗುರುಕುಲ ವಿದ್ಯಾಸಂಸ್ಥೆಯ ಬಸ್ಸುಗಳಲ್ಲಿ ವಕ್ವಾಡಿಯಿಂದ ಶಿಕ್ಷಕರ ಜೊತೆ ಬೆಳಿಗ್ಗೆ ಬಾಂಡ್ಯಕ್ಕೆ ಬಂದಿಳಿದಿದ್ದ 120 ವಿದ್ಯಾರ್ಥಿಗಳು ನೋಡ ನೋಡುತ್ತಲೇ ಗದ್ದೆಗಳಲ್ಲಿ ಇಳಿದು ನಾಟಿ ಕಾರ್ಯಕ್ಕೆ ತಯಾರಿ ನಡೆಸಿದ್ದರು. ಬಾಂಡ್ಯ ಎಜುಕೇಷನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್.ಶೆಟ್ಟಿ ಅವರು ತಮ್ಮ 4 ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಕೃಷಿ ನಾಟಿ ಕಾರ್ಯಕ್ರಮದಲ್ಲಿ ನೇಜಿ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಂದಲೇ ನಾಟಿ: ಉದ್ಯೋಗ, ತಂತ್ರಜ್ಞಾನ, ನಿರಾಸಕ್ತಿ ಮುಂತಾದ ಕಾರಣಗಳಿಂದ ಕೃಷಿ ಕ್ಷೇತ್ರದಿಂದ ಯುವ ಸಮುದಾಯ ವಿಮುಖವಾಗುತ್ತಿರುವುದನ್ನು ಗಮನಿಸಿದ್ದ, ಬಾಂಡ್ಯ ಎಜ್ಯುಕೇಷನ್ ಟ್ರಸ್ಟ್, ಕೆಲ ವರ್ಷಗಳಿಂದ ತಮ್ಮದೇ ಶಾಲೆಯ ವಿದ್ಯಾರ್ಥಿಗಳ ಮೂಲಕ ಗ್ರಾಮೀಣ ಭಾಗದ ಕೃಷಿ ಗದ್ದೆಗಳಲ್ಲಿ ಭತ್ತದ ಗಿಡಗಳ ನಾಟಿ ಕಾರ್ಯದ ಕಸುಬನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪ್ರತಿ ವರ್ಷ ಆಟಿ ತಿಂಗಳು ಪ್ರಾರಂಭವಾಗುತ್ತಿದ್ದಂತೆಯೇ ಮಲೆನಾಡಿನ ಗ್ರಾಮೀಣ ಭಾಗವಾದ ಕೆಳ ಬಾಂಡ್ಯದಲ್ಲಿ ಗದ್ದೆಗಳನ್ನು ಹಸನು ಮಾಡಿ ವಿದ್ಯಾರ್ಥಿಗಳಿಂದಲೇ ನಾಟಿ ಕಾರ್ಯ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಮುಹೂರ್ತ ನಿಗದಿ ಮಾಡಿದ ಬಳಿಕ ಸಂಸ್ಥೆಯ ಶಿಕ್ಷಕ ವೃಂದದ ಜೊತೆ ವಿದ್ಯಾರ್ಥಿಗಳನ್ನು ಕರೆತಂದು ಕೆಸರು ತುಂಬಿದ ಗದ್ದೆಗಳಲ್ಲಿಯೇ ಕೃಷಿ ಹಬ್ಬ ಸ್ಥಳೀಯ ಕೃಷಿಕರೊಂದಿಗೆ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸ್ಥಳೀಯ ಅನುಭವಿ ಕೃಷಿಕರೇ ಇವರಿಗೆಲ್ಲ ಕೃಷಿ ಪಾಠ ಮಾಡುವ ಮೇಷ್ಟ್ರುಗಳಾಗುತ್ತಾರೆ. ನೇಜಿ ಹೊತ್ತು ತರುವುದು, ಗದ್ದೆ ಹಸನು ಮಾಡುವುದು, ಅಂಚು ಕಡಿಯುವುದು, ನೇಜಿ ಸಾಲಾಗಿ ನಾಟಿ ಮಾಡುವವರೆಗೂ ಮಕ್ಕಳಿಗೆ ಮಾರ್ಗದರ್ಶನ ದೊರೆಯುತ್ತದೆ. ಮಕ್ಕಳೊಂದಿಗೆ ಶಿಕ್ಷಕರು, ಸ್ಥಳೀಯರು ನಾಟಿ ಕಾರ್ಯದಲ್ಲಿ ಜೊತೆಯಾಗುತ್ತಾರೆ.
ಕೆಸರು ಗದ್ದೆಯಲ್ಲೇ ಆಟದ ಸಂಭ್ರಮ: ಮೊದಲ ಬಾರಿಗೆ ಗದ್ದೆಯಲ್ಲಿ ಭತ್ತ ಗಿಡ ನಾಟಿ ಮಾಡುವುದನ್ನು ಕರಗತ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ, ಕೃಷಿ ಗದ್ದೆಗಳು ಜೀವನದ ಹೊಸ ಪಾಠಕ್ಕೆ ಆಡೊಂಬೊಲವಾಗಿತ್ತು. ಕೊಪ್ಪಳ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಬೆಂಗಳೂರು, ಕಾರವಾರ ಸೇರಿದಂತೆ ನಾಡಿನ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಜನೆಗಾಗಿ ಗುರುಕುಲಕ್ಕೆ ಬಂದಿದ್ದ ವಿದ್ಯಾರ್ಥಿಗಳು ನಾಟಿ ಕೆಲಸದ ಬಳಿಕ ಕೆಸರು ತುಂಬಿದ ಗದ್ದೆಗಳಲ್ಲಿ ಆಟವಾಡಿ ಸಂಭ್ರಮಿಸಿದರು. ತಮ್ಮಲ್ಲೇ ಹುಡುಗ, ಹುಡುಗಿಯರ ಪ್ರತ್ಯೇಕ ತಂಡ ಮಾಡಿಕೊಂಡು ಕೆಸರು ಗದ್ದೆಯ ಓಟ, ಹಗ್ಗಜಗ್ಗಾಟ ಆಟೋಟದ ಗಮ್ಮತ್ತಿನ ಜೊತೆ ಮೈಯೆಲ್ಲಾ ಕೆಸರು ಎರಚಿಕೊಂಡು ಸಂಭ್ರಮಪಟ್ಟರು.
ಬಾಂಡ್ಯ ಎಜುಕೇಷನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಅನುಪಮಾ ಎಸ್.ಶೆಟ್ಟಿ ಮಾತನಾಡಿ, ಗುರುಕುಲ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ, ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಕೃಷಿ, ತೋಟಗಾರಿಕೆ ಸೇರಿದಂತೆ ಜೀವನ ಅನುಭವಗಳನ್ನು ತಜ್ಞರಿಂದ ಕಲಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಭತ್ತದ ಕೃಷಿ ಮರೆಯಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭತ್ತ ಹೇಗೆ ಬೆಳೆಯಲಾಗುತ್ತದೆ, ನಾಟಿ ಕಾರ್ಯದ ಅನುಭವ, ರೈತಾಪಿ ವರ್ಗದ ಶ್ರಮ ಅರ್ಥ ಮಾಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಭತ್ತ ಕೃಷಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಸಂಸ್ಥೆಯಿಂದ ನಡೆಯುತ್ತಿದೆ ಎಂದರು.
ಬಾಂಡ್ಯ ಎಜುಕೇಷನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ ಟ್ರಸ್ಟಿ ಸುಭಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲ ಸುನಿಲ್, ಶಿಕ್ಷಕರು, ಸಿಬ್ಬಂದಿ ಇದ್ದರು.
ತಂತ್ರಜ್ಞಾನ ಆಧುನಿಕತೆಯ ಪರ್ವದಲ್ಲಿ ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕೃಷಿ ಕಾಯಕದ ಪರಂಪರೆ ಮರೆಯಾಗಬಾರದು ಎನ್ನುವ ನೆಲೆಯಲ್ಲಿ ಸಾವಯವ ಕೃಷಿ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ ಜಂಟಿ ಕಾರ್ಯ ನಿರ್ವಾಹಕ ಟ್ರಸ್ಟಿ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.