
ಬ್ರಹ್ಮಾವರ: ಜೀವನದಲ್ಲಿ ಹೋರಾಟ, ಪರಿಶ್ರಮ, ಪ್ರಾಮಾಣಿಕತೆ, ಶ್ರದ್ಧೆ ಮುಖ್ಯ. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮತ್ತು ಯಶಸ್ಸು ಗಳಿಸಲು ಇವೆಲ್ಲವೂ ಅಗತ್ಯ ಎಂದು ಬ್ರಹ್ಮಾವರ ಅಂಜಲೀಸ್ ವಿಜಯಲಕ್ಷ್ಮಿ ಸಾರೀಸ್ನ ವ್ಯವಸ್ಥಾಪಕ ನಿರ್ದೇಶಕಿ ಅಂಜಲಿ ವಿಜಯ್ ಹೇಳಿದರು.
ಭಾರತ ಸರ್ಕಾರದ ತೆಂಗು ನಾರು ಮಂಡಳಿ ಸಹಯೋಗದಲ್ಲಿ ಬೆಂಗಳೂರಿನ ನಾರು ಮಂಡಳಿ ಬ್ರಹ್ಮಾವರದ ಕ್ರಾಸ್ಲ್ಯಾಂಡ್ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಮೂರು ದಿನಗಳ ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಂತ್ರಿಕತೆ ಬದಲಾಗಿದೆ. ಯುವ ಜನರು ತಾಂತ್ರಿಕತೆಯನ್ನು ಬಳಸಿಕೊಂಡು ಕೆಲಸ ಮಾಡಿದಲ್ಲಿ ಸಮಾಜದಲ್ಲಿ ಗೌರವ, ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂದರು.
ಕಾಲೇಜಿನ ಸಂಚಾಲಕಿ ಲಾಲಿ ಎ. ಮ್ಯಾಥ್ಯೂ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಏಳು ಬೀಳುಗಳು ಸಹಜ. ಇವೆಲ್ಲವನ್ನು ಮೆಟ್ಟಿನಿಂತು ನಾವು ಮುನ್ನಡೆದಲ್ಲಿ ಯಶಸ್ಸು ಗಳಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ರಾಬರ್ಟ್ ಕ್ಲೈವ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ತೆಂಗು ನಾರು ಮಂಡಳಿಯ ಪ್ರಾದೇಶಿಕ ಕಚೇರಿಯ ವಿಸ್ತರಣಾ ಸೇವಾ ಅಧಿಕಾರಿ ವಿದ್ಯಾಧರನ್ ಎಂ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಬೆಂಗಳೂರಿನ ಸಂಪತ್ ಕುಮಾರ್, ನಾರು ಮಂಡಳಿಯ ನಿವೃತ್ತ ಅಧಿಕಾರಿ ಎಸ್.ಮಂಜುನಾಥ, ತೆಂಗು ನಾರು ಉದ್ಯಮದ ಬಗ್ಗೆ ಮಾತನಾಡಿದರು. ಬೆಣೆಕುದ್ರುವಿನ ತೆಂಗು ನಾರು ಉದ್ಯಮಿ ಸತೀಶ ಅನುಭವ ಹಂಚಿಕೊಂಡರು.
ಸುರಭಿ ಸ್ವಾಗತಿಸಿದರು. ಸುದೀಕ್ಷಾ ವಂದಿಸಿದರು. ಬರ್ನಿಸ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿಯಲ್ಲಿ ಬ್ರಹ್ಮಾವರದ ಕ್ರಾಸ್ಲ್ಯಾಂಡ್, ಎಸ್.ಎಂ.ಎಸ್, ಉಡುಪಿ ತೆಂಕನಿಡಿಯೂರಿನ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತೆಂಗಿನಿಂದ 600ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾಡಬಹುದಾಗಿದ್ದು ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಆಗಬೇಕಾಗಿದೆ. ಇದರಿಂದ ಆದಾಯವೂ ಹೆಚ್ಚಲಿದೆ.ಸಂಪತ್ ಕುಮಾರ್ ತೆಂಗು ನಾರು ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.