ಬಂಧನ
(ಸಾಂದರ್ಭಿಕ ಚಿತ್ರ)
ಕಾರ್ಕಳ: ತಾಲ್ಲೂಕಿನ ಅಜೆಕಾರು ಹೆನ್ರಿ ಡಿಸೋಜ ಅವರ ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ₹1 ಲಕ್ಷ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೋಲೀಸರು ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಸೋಲಾಪುರ ಕೇದಾರನಾಥ ನಗರದ ಶ್ರವಣ್ ಸತೀಶ ಮಿನಜಗಿ (27), ಸೋಲಾಪುರ ತಾಲ್ಲೂಕಿನ ಇಂದಿರಾ ನಗರದ ಪ್ರದೀಪ ಮಾರುತಿ ಇಂಗ್ಲೆ(27), ಪುಣೆ ಜಿಲ್ಲೆಯ ಇಂದಾಪುರ ತಾಲ್ಲೂಕಿನ ವನಗಲ್ಲಿಯ ಕಿರಣ್ ಬಾಲು ಚೌವ್ಹಾಣ್ (28) ಬಂಧಿತರು. ಈ ಮೂವರು ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ 70ಕ್ಕೂ ಹೆಚ್ಚು ಪ್ರಕರಣಗಳಿವೆ. ನಾಲ್ಕನೆ ಅರೋಪಿಯ ಪತ್ತೆಗಾಗಿ ಬಲೆಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಜೆಕಾರು ಪೊಲೀಸ್ ಠಾಣೆಯ ಪಿಎಸ್ಐ ಶುಭಕರ, ಸಿಬ್ಬಂದಿ ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್ ಚೆಕ್ಪೋಸ್ಟ್ ಬಳಿ ಮಂಗಳವಾರ ತಪಾಸಣೆ ನಡೆಸುತಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ₹4 ಲಕ್ಷ ಮೌಲ್ಯದ ಕಾರು, 3 ಮೊಬೈಲ್ ಫೋನ್, ವಿವಿಧ ಬ್ಯಾಂಕ್ಗಳ ಒಟ್ಟು 52 ಎಟಿಎಂ ಕಾರ್ಡ್, ಒಟ್ಟು ₹4.85 ಲಕ್ಷ ಮೌಲ್ಯದ ವಸ್ತುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಸಿಪಿಐ ಮಂಜಪ್ಪ ಡಿ.ಆರ್, ಅಜೆಕಾರು ಪಿಎಸ್ಐ ರವಿ ಬಿ.ಕೆ, ನೇತೃತ್ವದಲ್ಲಿ ಅಜೆಕಾರು ಪೊಲೀಸ್ ಠಾಣೆಯ ಶುಭಕರ ಮತ್ತು ಸಿಬ್ಬಂದಿ ಸತೀಶ ಬೆಳ್ಳಿ, ಪ್ರದೀಪ ಶೆಟ್ಟಿ, ನಾಗೇಶ, ಪ್ರವೀಣ ಕುಮಾರ್, ಬಸವರಾಜ ಭದ್ರಶೆಟ್ಟಿ, ಶಶಿಕಲಾ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ನಿತಿನ್ ಹಾಗೂ ದಿನೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.