
ಬಂಧನ
ಪಡುಬಿದ್ರಿ: ಹೆಜಮಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಡಿಸೆಂಬರ್ 24 ರಂದು ವೃದ್ಧೆಯೊಬ್ಬರ ಕತ್ತಿನಿಂದ ಚಿನ್ನದ ಸರವನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಕೃಷ್ಣನಗರಿಯ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿಯ ಕಾಳಿಯಮ್ಮ, ಮಾರಿ (40), ಶೀತಲ್ ಬಂಧಿತ ಆರೋಪಿಗಳು. ಹೆಜಮಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಡಿಸೆಂಬರ್ 24 ರಂದು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸಕ್ಕೆ ಶಿವನಗರ ನಿವಾಸಿ ವೃದ್ಧೆ ಕಮಲಾ ಎಂಬುವವರು ಸಂಬಂಧಿಕರೊಂದಿಗೆ ತೆರಳಿದ್ದರು. ದೈವದ ದರ್ಶನ ಮಾಡಿ ನಂತರ ಅಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ಸಂಬಂಧಿಯೊಬ್ಬರು ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದೆ ಇರುವ ಬಗ್ಗೆ ಗಮನಕ್ಕೆ ತಂದರು. ಗರಡಿ ಸುತ್ತಮುತ್ತ ಹುಡುಕಾಡಿದಲ್ಲಿ ಎಲ್ಲಿಯೂ ಸಿಗದೇ ಇದ್ದಾಗ ಗರಡಿಯಲ್ಲಿ ಮೂವರು ಅಪರಿಚಿತ ಮಹಿಳೆಯರು ಕಂಡು ಬಂದಿದ್ದು, ಅವರೇ ತೆಗೆದಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದರು. ದೈವಸ್ಥಾನದ ಆಡಳಿತ ಮಂಡಳಿಯವರು ಗರಡಿಯ ಸಿ.ಸಿ.ಟಿ.ವಿ. ಕ್ಯಾಮೆರಾವನ್ನು ಪರಿಶೀಲಿಸಿದಾಗ ಮೂವರು ಅಪರಿಚಿತ ಮಹಿಳೆಯರು ಸಹಾಯ ಮಾಡುವ ನೆಪದಲ್ಲಿ ಕಮಲಾ ಅವರ ಗಮನಕ್ಕೆ ಬಾರದಂತೆ ಕುತ್ತಿಗೆಯಲ್ಲಿದ್ದ ಸುಮಾರು 3 ಪವನ್ ಚಿನ್ನದ ಸರವನ್ನು ಕಳವು ಮಾಡಿರುವುದು ಕಂಡು ಬಂದಿತ್ತು.
ಪುತ್ತೂರಿನಲ್ಲೂ ಚಿನ್ನದ ಸರ ಕದಿಯಲು ಹವಣಿಸುತ್ತಿದ್ದಾಗ ಇದೇ ಮಹಿಳೆಯರು ಸಿಕ್ಕಿಬಿದ್ದಿದ್ದು, ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಹೆಜಮಾಡಿ ಘಟನೆಯ ವಿಚಾರವಾಗಿಯೂ ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.