ADVERTISEMENT

ತುಳುನಾಡಿನ ಸಂಸ್ಕೃತಿಗೆ ಧಕ್ಕೆ ತಂದಿಲ್ಲ

ಕಾರ್ಕಳ: ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:08 IST
Last Updated 10 ಜುಲೈ 2021, 4:08 IST

ಕಾರ್ಕಳ: ತುಳುವನಾಗಿ ತುಳುನಾಡಿನ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ವಿಶೇಷ ಗೌರವ ಹೊಂದಿರುವ ನನ್ನಿಂದ ತುಳುನಾಡಿಗೆ ಅಪಚಾರ ಆಗಿದೆ ಎನ್ನುವ ಬಿಜೆಪಿ ಹೇಳಿಕೆ ಖಂಡನೀಯ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಡುಪಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತುಳುನಾಡಿನ ದೈವರಾಧನೆ ಪರಿಕರ ಕಡ್ಸಲೆ ಪ್ರತಿಕೃತಿ ಉಡುಗೊರೆಯಾಗಿ ನೀಡಲಾಗಿತ್ತು. ಆದರೆ, ಇದರ ಹಿಂದೆ ತುಳುನಾಡಿನ ದೈವರಾಧನೆಗೆ ಅಪಪ್ರಚಾರ ಮಾಡುವ ಯಾವ ದುರುದ್ದೇಶ ಇರಲಿಲ್ಲ. ದೈವ ದೇವರ ಭಕ್ತಿ ಮತ್ತು ನಂಬಿಕೆ ಕುರಿತು ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ. ತುಳುನಾಡಿನ ಕುರಿತು ಕಾಳಜಿ ವಹಿಸಿದಂತೆ ಮಾತನಾಡುವ ಶಾಸಕರು ತುಳುನಾಡಿನವರಲ್ಲ. ಅವರು ಬೇರೆ ಜಿಲ್ಲೆಯಿಂದ ಇಲ್ಲಿಗೆ ಬಂದವರು ಎಂದು
ತಿಳಿಸಿದರು.

ಹಿರ್ಗಾನ ನಿವಾಸಿ ರಾಧಾಕೃಷ್ಣ ನಾಯಕ್ ಅವರನ್ನು ಠಾಣೆಗೆ ಕರೆಸಿ ಥಳಿಸಿದ ನಗರ ಠಾಣಾಧಿಕಾರಿ ನಡೆ ಖಂಡನೀಯ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆರೋಪಿಸಿದರು.

ADVERTISEMENT

ವರ್ಷದ ಹಿಂದೆಯೇ ರಾಧಾಕೃಷ್ಣ ನಾಯಕ್ ಅವರ ಹೆಸರನಲ್ಲಿ ನಕಲಿ ಖಾತೆ ತೆರೆದು ಸೈನಿಕರ ವಿರುದ್ಧ ಪೋಸ್ಟ್‌ಅನ್ನು ಬೇರೆಯವರು ಹರಿಬಿಟ್ಟಿದ್ದರು. 2020 ರ ಸೆ.4 ರಂದು ಅವರ ವಿರುದ್ದ ಪ್ರಕರಣ ದಾಖಲಿಸಲಾಗಿತ್ತು. ಬೆಂಗಳೂರು ಗಂಗಮ್ಮನ ಗುಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ರಾಧಾಕೃಷ್ಣ ನಾಯಕ್ ಅವರು ನಕಲಿ ಖಾತೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು.

ಆದರೆ ವರ್ಷದ ಬಳಿಕ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ನಗರ ಠಾಣಾಧಿಕಾರಿ ಅಮಾನುಷ ರೀತಿ ಹಲ್ಲೆ ನಡೆಸಿದ್ದಾರೆ. ಅದಲ್ಲದೆ ಸೈಬರ್ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುವ ಪ್ರಕರಣವನ್ನು ಕೈಗೆತ್ತಿಕೊಂಡು ಬಿಜೆಪಿ ಪಕ್ಷಕ್ಕೆ ಖುಷಿ ತರುವಂತಹ ಕೆಲಸವನ್ನು ಪಿಎಸ್‌ಐ ಮಾಡಿದ್ದಾರೆ. ತಪ್ಪಿದಸ್ಥ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಗೃಹ ಇಲಾಖೆ ಮತ್ತು ಸರ್ಕಾರನ್ನು ಒತ್ತಾಯಿಸಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ್‌ಚಂದ್ರಪಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ರಾಜ್ಯ ಯುವ ಕಾಂಗ್ರೆಸ್ ಮುಖಂಡ ರವಿಶಂಕರ್ ಶೇರಿಗಾರ್, ಪುರಸಭೆ ಸದಸ್ಯ ಶುಭದ ರಾವ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪ್ರಕಾಶ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.