ADVERTISEMENT

ಉಡುಪಿ | ‘ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸಿ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:26 IST
Last Updated 19 ಅಕ್ಟೋಬರ್ 2025, 6:26 IST
.
.   

ಉಡುಪಿ: ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣವಿರುತ್ತದೆ. ಇದು ಚಿಕ್ಕ ಮಕ್ಕಳ, ವಯಸ್ಸಾದವರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಸುಪ್ರೀಂ ಕೋರ್ಟ್‌ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು, ರಾಷ್ಟ್ರೀಯ ಹಸಿರು ಪ್ರಾಧಿಕಾರದ ಆದೇಶದಂತೆ ಶಿಫಾರಸು ಮಾಡಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸುವಂತೆ ಸೂಚಿಸಲಾಗಿದೆ.

ಹಸಿರು ಪಟಾಕಿಯ ಮೇಲೆ ಹಸಿರು ಬಣ್ಣದಲ್ಲಿ ಸಿಎಸ್‌ಐಆರ್‌ ಚಿಹ್ನೆ ಮತ್ತು ಕ್ಯೂಆರ್‌ ಕೋಡ್‌ಗಳನ್ನು ಮುದ್ರಿಸಲಾಗಿರುತ್ತದೆ. ಅಂತಹ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಾರ್ವಜನಿಕರು ಬಳಸಲು ಅವಕಾಶವಿರುತ್ತದೆ. ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದ್ದು, ಉಳಿದ ಸಮಯದಲ್ಲಿ ಪಟಾಕಿಗಳ ಸ್ಫೋಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮುಂಜಾಗ್ರತೆ ವಹಿಸಿ ಪಟಾಕಿ ಸದ್ದಿಗೆ ಸಾಕು ಪ್ರಾಣಿ/ಜಾನುವಾರುಗಳಲ್ಲಿ ಆತಂಕ/ಭೀತಿ ಸೃಷ್ಟಿಯಾಗಿ ಅವುಗಳು ಹಲವು ದಿನಗಳ ಕಾಲ ಆಹಾರ ತ್ಯಜಿಸುವ ಹಾಗೂ ತಮ್ಮ ಮೂಲ ಸ್ಥಾನದಿಂದ ಪಲಾಯನ ಮಾಡುವ ಸಂಭವವಿರುತ್ತದೆ. ಆದ್ದರಿಂದ ಪ್ರಾಣಿಗಳನ್ನು ಕರ್ಕಶ ಶಬ್ದಗಳಿಂದ ಮುಕ್ತಗೊಳಿಸಲು ಸುರಕ್ಷಿತ ಕ್ರಮ ಕೈಗೊಂಡು ಸಾರ್ವಜನಿಕರು ಈ ಬಗ್ಗೆ ಗಮನಹರಿಸಿ ಸುಪ್ರೀಂ ಕೋರ್ಟ್‌ ಆದೇಶದಂತೆ ಪರಿಸರ ಸ್ನೇಹಿ ಸಿಡಿಮದ್ದುಗಳನ್ನು ಸಿಡಿಸುವಂತೆ ಪ್ರಾಣಿ ದಯಾ ಸಂಘದ ಸದಸ್ಯ ಕಾರ್ಯದರ್ಶಿ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.