ಉಡುಪಿ: ಜಿಲ್ಲೆಯ ಸುಂದರ ಕಡಲ ತೀರ, ಧಾರ್ಮಿಕ ಕೇಂದ್ರಗಳು, ಸ್ಥಳೀಯ ಸಂಸ್ಕೃತಿ, ಜಾನಪದ ಕಲೆ, ಧಾರ್ಮಿಕ ಉತ್ಸವಗಳೂ ಸೇರಿದಂತೆ ಇಲ್ಲಿನ ವಿಶೇಷತೆಗಳನ್ನು ಪ್ರಚಾರಪಡಿಸುವುದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.
ಮಣಿಪಾಲ ರಜತಾದ್ರಿಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಉಡುಪಿ ಹಾಗೂ ಜಸ್ಟ್ ರೋಲ್ ಫಿಲ್ಮ್ಸ್ ಅವರ ಸಹಯೋಗದೊಂದಿಗೆ ಜಿಲ್ಲೆಯ ಪ್ರವಾಸಿ ತಾಣಗಳನ್ನೊಳಗೊಂಡ, ಸುಮಧುರ ಹಾಡಿನೊಂದಿಗೆ ರಚಿಸಿರುವ ‘ಉಡುಪಿ ಆಂಥೆಮ್’ ಎಂಬ ವಿಡಿಯೊವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಕೃತಿ ಸೌಂದರ್ಯ, ಬೋರ್ಗರೆಯುವ ಕಡಲ ಕಿನಾರೆಗಳು, ಹಳ್ಳ ಕೊಳ್ಳ, ತೊರೆ ನದಿಗಳು, ಪಶ್ಚಿಮ ಘಟ್ಟದ ಶ್ರೇಣಿಗಳು ಹಾಗೂ ಧಾರ್ಮಿಕ ಪ್ರವಾಸಿ ಕೇಂದ್ರಗಳು ಒಳಗೊಂಡಂತೆ 48 ಪ್ರವಾಸಿ ತಾಣಗಳ ಜೊತೆಗೆ 32 ಪ್ರವಾಸಿ ತಾಣಗಳನ್ನು ಹೊಸದಾಗಿ ಗುರುತಿಸುವುದರೊಂದಿಗೆ ಅಲ್ಲಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಧುನಿಕ ತಂತ್ರಜ್ಞಾನಗಳ ಬಳಕೆಯೊಂದಿಗೆ ಹೆಚ್ಚು ಜನರನ್ನು ತಲುಪಿಸುವ ಕೆಲಸವಾಗಬೇಕಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಜಸ್ಟ್ ರೋಲ್ ಫಿಲ್ಮ್ಸ್ನವರು ರೂಪಿಸಿರುವ ವಿಡಿಯೊ ಚಿತ್ರಣವು ಉತ್ತಮವಾಗಿ ಮೂಡಿಬಂದಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು., ವಾರ್ತಾಧಿಕಾರಿ ಮಂಜುನಾಥ್, ಜಸ್ಟ್ ರೋಲ್ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನ್ ನಿರ್ದೇಶಕ, ನಿರ್ಮಾಪಕರು ಹಾಗೂ ಸಾಹಿತ್ಯ ಸಂಯೋಜಕರು ಉಪಸ್ಥಿತರಿದ್ದರು.
5 ನಿಮಿಷಗಳ ವಿಡಿಯೊ ಭಾಷೆ,ಕಲೆ, ಸಂಸ್ಕೃತಿ, ಸಂಪ್ರದಾಯಗಳು, ಹಬ್ಬ ಜಾತ್ರೆಗಳ ವೈಭವ, ಯಕ್ಷಗಾನ, ಭೂತ ಕೋಲ ಆಚರಣೆ, ಕಂಬಳದ ವೈಭವ ಅದ್ಭುತವಾಗಿ ಮೂಡಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.