ADVERTISEMENT

ಬೈಲಾ ತಿದ್ದುಪಡಿಗಿಂತ ಕನ್ನಡ ಶಾಲೆ ಉಳಿಸಿ‌: ಗಣನಾಥ ಎಕ್ಕಾರು

ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 1 ಮೇ 2025, 15:24 IST
Last Updated 1 ಮೇ 2025, 15:24 IST
ಸಮ್ಮೇಳನಾಧ್ಯಕ್ಷ ಪಾದೆಕಲ್ಲು ವಿಷ್ಣುಭಟ್ಟ ದಂಪತಿಯನ್ನು ಸನ್ಮಾನಿಸಲಾಯಿತು
ಸಮ್ಮೇಳನಾಧ್ಯಕ್ಷ ಪಾದೆಕಲ್ಲು ವಿಷ್ಣುಭಟ್ಟ ದಂಪತಿಯನ್ನು ಸನ್ಮಾನಿಸಲಾಯಿತು   

ಉಡುಪಿ: ಕನ್ನಡ ಸಾಹಿತ್ಯ ಪರಿಷತ್‌ ಬೈಲಾ ತಿದ್ದುಪಡಿ ಮಾಡುವುದಕ್ಕಿಂತ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್‌ ಅಧ್ಯಕ್ಷ ಗಣನಾಥ ಎಕ್ಕಾರು ಹೇಳಿದರು.

ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಉಡುಪಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಕನ್ನಡ ಶಾಲೆಗಳನ್ನು ಇಂದು ಉಳಿಸುವ ಅಗತ್ಯ ಇದೆ ಎಂದು ಕ.ಸಾ.ಪ. ಅಧ್ಯಕ್ಷ ಮಹೇಶ್‌ ಜೋಶಿ ಅವರು ಈ ಸಮ್ಮೇಳನದಲ್ಲಿ ಹೇಳಿದ್ದಾರೆ. ಆದರೆ ಕನ್ನಡ ಶಾಲೆಗಳನ್ನು ಉಳಿಸುವ ಮತ್ತು ಕನ್ನಡದ ಅಸ್ಮಿತೆಯನ್ನು ಕಾಪಾಡುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್‌ಗೆ ಇದೆ ಎಂದರು.

ADVERTISEMENT

ಒಂದು ಗ್ರಾಮಕ್ಕೆ ಎರಡು, ಮೂರು ಶಾಲೆಗಳನ್ನು ಕೊಡುವುದಕ್ಕಿಂತ ಹತ್ತು ಗ್ರಾಮಗಳನ್ನು ಒಟ್ಟು ಮಾಡಿ, ಒಂದು ಒಳ್ಳೆಯ ಕನ್ನಡ ಶಾಲೆ ನಿರ್ಮಾಣ ಮಾಡಿ. ಇಂಗ್ಲಿಷ್‌ ಅನ್ನು ಕೂಡ ಅಲ್ಲಿ ಪ್ರಧಾನ ಭಾಷೆಯನ್ನಾಗಿ ಇಟ್ಟುಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಕನ್ನಡ ಶಾಲೆಗಳಲ್ಲಿ ಅಧ್ಯಾಪಕರನ್ನು ನೇಮಕ ಮಾಡುವುದರ ಜೊತೆಗೆ ಸೌಲಭ್ಯಗಳನ್ನೂ ಕಲ್ಪಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಆಗಬೇಕು. ಈ ಹಕ್ಕೊತ್ತಾಯವನ್ನು ಕ.ಸಾ.ಪ. ಮಾಡಬೇಕು ಎಂದರು.

ಕರಾವಳಿಯ ಸೌಹಾರ್ದ ಪರಂಪರೆಯ ಸಂದೇಶವನ್ನು ಈ ಸಮ್ಮೇಳನ ನೀಡಿದೆ. ಶಾಸ್ತ್ರೀಯ ಅಧ್ಯಯನ ಪರಂಪರೆಯ ಕೊಂಡಿಯಾಗಿರುವ ಪಾದೆಕಲ್ಲು ವಿಷ್ಣುಭಟ್ಟ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸಮ್ಮೇಳನದ ಘನತೆ ಹೆಚ್ಚಿಸಿದೆ ಎಂದು ಹೇಳಿದರು.

ಭಾಷಾ ವಿಜ್ಞಾನ, ವ್ಯಾಕರಣ, ಕಾವ್ಯ ಮೀಮಾಂಸೆ ಮೊದಲಾದ ಶಾಸ್ತ್ರೀಯ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಉದ್ಯಮಿ ಆನಂದ ಸಿ. ಕುಂದರ್‌ ಸಾಧಕರನ್ನು ಸನ್ಮಾನಿಸಿದರು. ಕ.ಸಾ.ಪ. ಜಿಲ್ಲಾ ಘಟಕ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕ.ಸಾ.ಪ. ದ.ಕ. ಜಿಲ್ಲೆಯ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ತುಳುಕೂಟ ಉಡುಪಿ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್‌, ತಿಂಗಳೆ ಪ್ರತಿಷ್ಠಾನದ ತಿಂಗಳೆ ವಿಕ್ರಮಾರ್ಜುನ ಹೆಗಡೆ ಇದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಗಜೇಂದ್ರ ಗುಂಡ್ಮಿ, ರವೀಂದ್ರ ಶೆಟ್ಟಿ ಬಜಗೋಳಿ, ಪ್ರದೀಪ್‌ ಕುಮಾರ್‌ ಉದ್ಯಾವರ, ರಂಗಪ್ಪಯ್ಯ ಹೊಳ್ಳ, ಸುಗುಣ ಮೂಲ್ಯ ಪಡುಬಿದ್ರಿ, ಉದಯ್‌ಕುಮಾರ್‌ ಶೆಟ್ಟಿ, ಕೊಯಿಕೂರು ಸೀತಾರಾಮ ಶೆಟ್ಟಿ, ಸೂರಿ ಶೆಟ್ಟಿ ಕಾಪು, ಅಪ್ಪಿ ಪಾಣಾರ ಶಿರ್ವ, ರಾಮಚಂದ್ರ ಆಚಾರ್ಯ ಪಡುಬಿದ್ರಿ, ಪ್ರಸನ್ನ ಶೆಟ್ಟಿಗಾರ್‌ ಮಂದಾರ್ತಿ, ಸೀತಾ ಶ್ರೀನಿವಾಸ ಪಡುವರಿ, ಈಶ್ವರ್‌ ಮಲ್ಪೆ, ರವಿ ಕಟಪಾಡಿ, ಯೋಗೀಶ್‌ ಭಟ್‌, ವಿದುಷಿ ಸಂಸ್ಕೃತಿ ಪ್ರಭಾಕರ, ಯಡ್ತಾಡಿ ಸತೀಶ್‌ ಕುಮಾರ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ನರೇಂದ್ರ ಕುಮಾರ್‌ ಕೋಟ ನಿರೂಪಿಸಿದರು. ಅರುಣ್‌ ಕುಮಾರ್‌ ಶಿರೂರು ಸ್ವಾಗತಿಸಿದರು. ರಘು ನಾಯ್ಕ ವಂದಿಸಿದರು.

ಜೀವನದಲ್ಲಿ ಸತತಾಭ್ಯಾಸ ಪ್ರಯತ್ನ ಅತ್ಯಗತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಮುಂದುವರಿಯೋಣ. ಅದರಿಂದ ಫಲ ಲಭಿಸಿಯೇ ಲಭಿಸುತ್ತದೆ
-ಪಾದೆಕಲ್ಲು ವಿಷ್ಣುಭಟ್‌, ಸಮ್ಮೇಳನಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.