ಬ್ರಹ್ಮಾವರ: ಮಹಿಳೆಯೊಬ್ಬರು ಮಗುವಿಗೆ ನೇಣು ಹಾಕಿ, ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಬಳಿಯ ಆರೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಸುಷ್ಮಿತಾ (35) ಮತ್ತು ಶ್ರೇಷ್ಠ( ಒಂದೂವರೆ ವರ್ಷ) ಮೃತಪಟ್ಟವರು. ‘2009 ರಲ್ಲಿ ಸುಷ್ಮಿತಾ ಅವರ ಗಂಡ ಮತ್ತು ಕುಟುಂಬಸ್ಥರ ವಿರುದ್ಧ ಐಪಿಸಿ 307 ಕಲಂ ಅಡಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ 12 ವರ್ಷ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಕಾರಣಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎಂಬುದಾಗಿ ತಿಳಿದು ಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
‘ಮಹಿಳೆ ಬರೆದಿಟ್ಟಿರುವ ಪತ್ರ ಸಿಕ್ಕಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದೂ ಅವರು ತಿಳಿಸಿದರು. ಪತಿ ಬೆಂಗಳೂರಿಗೆ ತೆರಳಿದ್ದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಗಂಡನ ವಿಚಾರಕ್ಕಾಗಿ ಪದೇ ಪದೇ ಪೊಲೀಸರು ಮನೆಗೆಬಂದು ನೋಟಿಸ್ ನೀಡಿದ್ದಕ್ಕೆ ಮತ್ತು ಬೆದರಿಕೆ ಹಾಕಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿರಬಹುದು’ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.