ADVERTISEMENT

ಉಡುಪಿ| ಶಕ್ತಿಯ ಆರಾಧನೆಗೆ ಸಜ್ಜಾಗಿದೆ ಜಿಲ್ಲೆ: ಎಲ್ಲೆಲ್ಲೂ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:51 IST
Last Updated 22 ಸೆಪ್ಟೆಂಬರ್ 2025, 5:51 IST
ಮಂದಾರ್ತಿ ದುರ್ಗಾಪರಮೇಶ್ವರಿ ದೇವಿ
ಮಂದಾರ್ತಿ ದುರ್ಗಾಪರಮೇಶ್ವರಿ ದೇವಿ   

ಉಡುಪಿ: ಶಕ್ತಿಯ ಆರಾಧನೆಯ ನವರಾತ್ರಿ ಹಬ್ಬ ಮತ್ತೆ ಬಂದಿದೆ. ಎಲ್ಲೆಲ್ಲೂ ಸಡಗರ, ಸಂಭ್ರಮ ಮನೆ ಮಾಡಿದ್ದು, ದೇವಿ ದೇವಾಲಯಗಳಲ್ಲಿ ಆರಾಧನೆಯ ಪರ್ವ ಆರಂಭವಾಗಿದೆ.

ಶರನ್ನವರಾತ್ರಿ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ದೇವಿ ದೇವಾಲಯಗಳಲ್ಲಿ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಾಲಯ, ಕಡಿಯಾಳಿಯ ಮಹಿಷಮರ್ದಿನಿ ದೇಗುಲ, ಕನ್ನೆರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಾಲಯ, ಅಂಬಾಗಿಲು ದುರ್ಗಾಪರಮೇಶ್ವರಿ, ದೊಡ್ಡಣಗುಡ್ಡೆಯ ಆದಿಶಕ್ತಿ ಕ್ಷೇತ್ರ, ಬೈಲೂರಿನ ಮಹಿಷಮರ್ದಿನ ದೇವಸ್ಥಾನಗಳಲ್ಲಿ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.

ADVERTISEMENT

ಜಿಲ್ಲೆಯಲ್ಲಿ ಹಲವಾರು ಇತಿಹಾಸ ಪ್ರಸಿದ್ಧ ದೆವಾಲಯಗಳಿದ್ದು, ಈ ದೇವಾಲಯಗಳಲ್ಲಿ ಜಗನ್ಮಾತೆಯನ್ನು ಶಕ್ತಿಯ ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಅಂಗವಾಗಿ ಈಗಾಗಲೇ ದೇವಾಲಯಗಳನ್ನು ತಳಿರು, ತೋರಣ, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ.

ಶ್ರೀಕೃಷ್ಣ ಮಠದ ಸುತ್ತ ಇರುವ ನಾಲ್ಕು ದುರ್ಗಾಲಯಗಳಲ್ಲಿ ಒಂದಾಗಿರುವ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ. 22ರಿಂದ ಅಕ್ಟೋಬರ್‌ 2ರವರೆಗೆ ಶರನ್ನವರಾತ್ರಿ ಮಹೋತ್ಸವ ನೆರವೇರಲಿದೆ. ಕಡಿಯಾಳಿಯ ಮಹಿಷಮರ್ದಿನಿ ದೇವಸ್ಥಾನದಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ನವರಾತ್ರಿಯ ಅಂಗವಾಗಿ ದೇವಾಲಯಗಳಲ್ಲಿ ಚಂಡಿಕಾ ಯಾಗ, ಸಹಸ್ರನಾಮಾರ್ಚನೆ, ದುರ್ಗಾ ನಮಸ್ಕಾರ ಪೂಜೆಗಳು ನಡೆಯಲಿವೆ. ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೂಪಗಳಲ್ಲಿ ಅಲಂಕರಿಸಿ ಪೂಜಿಸಲಾಗುತ್ತಿದೆ. ಕೆಲವು ದೇವಾಲಯಗಳಲ್ಲಿ ಪ್ರತಿದಿನ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆಯಲಿವೆ.

ಪೂರಕ ಮಾಹಿತಿ: ರಾಜೇಶ್‌ ಕೆ.ಸಿ., ಶೇಷಗಿರಿ ಭಟ್‌, ವಿಶ್ವನಾಥ ಆಚಾರ್ಯ, ಹಮೀದ್‌ ಪಡುಬಿದ್ರಿ, ವಾಸುದೇವ ಭಟ್‌

ನೀಲಾವರ ಮಹಿಷಮರ್ದಿನಿ ದೇವಿ 
ಕಾರ್ಕಳ ತಾಲ್ಲೂಕಿನ ಹಿರ್ಗಾನ ಲಕ್ಷ್ಮೀಪುರ ಮಹಾಲಕ್ಷ್ಮಿ ದೇವಿ
ಕಾರ್ಕಳ ತಾಲ್ಲೂಕಿನ ಅಡಿಪಾಯ ಉಮಾಮಹೇಶ್ವರಿ ದೇವಿ
ಉಪ್ಪುಂದ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ
ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವಿ
ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನ
ಉಡುಪಿಯ ಕನ್ನೆರ್ಪಾಡಿಯ ಜಯದುರ್ಗಾಪರಮೇಶ್ವರಿ ದೇವಸ್ಥಾನ
ಕಡಿಯಾಳಿಯ ಮಹಿಷಮರ್ದಿನಿ ದೇವಿ
ಕೊಲ್ಲೂರಿನಲ್ಲಿ ನವರಾತ್ರಿಗೆ ಸಿದ್ಧತೆ
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಸೆ. 22ರಿಂದ ಪ್ರಾರಂಭಗೊಂಡು ಅಕ್ಟೋಬರ್‌ 2 ರವರೆಗೂ ನಡೆಯಲಿರುವ ಮಹಾನವರಾತ್ರಿ ಉತ್ಸವದಲ್ಲಿ ಪಾಲ್ಗೊಳ್ಳಲು ಬರುವ ಭಕ್ತರಿಗೆ ಯಾವುದೇ ರೀತಿಯ ಸೇವಾ-ಸೌಲಭ್ಯಗಳಲ್ಲಿ ಕೊರತೆಯಾಗದಂತೆ ದೇವಸ್ಥಾನ ಆಡಳಿತೆ ಸಾಕಷ್ಟು ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದೆ. ನವರಾತ್ರಿಯ ಅಂಗವಾಗಿ ದೆವಸ್ಥಾನದಲ್ಲಿ ದಿನಂಪ್ರತಿ ನಡೆಯುವ ಕಟ್ಟಕಟ್ಟಳೆ ಪೂಜೆಗಳ ಜೊತೆಯಲ್ಲಿ ನವರಾತ್ರಿಯ ವಿಶೇಷ ಪೂಜೆ ಹಾಗೂ ಉತ್ಸವಗಳು ನಡೆಯಲಿವೆ. ಅ. 1ರಂದು ಮಹಾ ನವಮಿಯ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಚಂಡಿಕಾಯಾಗ ಹಾಗೂ ಮಧ್ಯಾಹ್ನ ಗಂಟೆ 1.30ರ ಧನುರ್ ಲಗ್ನದಲ್ಲಿ ರಥೋತ್ಸವ ಜರುಗಲಿದೆ. ಅ. 2ರಂದು ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ ನವಾನ್ನ ಪ್ರಾಶನ ಹಾಗೂ ಸಂಜೆ ಶ್ರೀಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಪ್ರತಿದಿನ ಮಧ್ಯಾಹ್ನ 3ರಿಂದ ರಾತ್ರಿ 11.30ರವರೆಗೆ ಸ್ವರ್ಣಮುಖಿ ರಂಗಮಂಟಪದಲ್ಲಿ ದೇಶದ ವಿವಿಧ ಭಾಗದಿಂದ ಬರುವ ಕಲಾ ತಂಡಗಳಿಂದ ಸೇವಾ ರೂಪವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇವಳದ ದಾಸೋಹ ಭವನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವಿತರಣೆಗೆ ನಡೆಯುತ್ತದೆ. ನವರಾತ್ರಿ ಸಂಭ್ರವದ ಅಂಗವಾಗಿ ಅದ್ದೂರಿಯ ವಿದ್ಯುತ್ ದೀಪ ಹಾಗೂ ಹೂವಿನ ಅಲಂಕಾರ ಮಾಡಲಾಗಿದೆ.
ಉಪ್ಪುಂದ ಶರನ್ನವರಾತ್ರಿ
ತಾಲ್ಲೂಕಿನ ಪ್ರಸಿದ್ಧ ಶಕ್ತಿ ಕೇಂದ್ರಗಳಲ್ಲೊಂದಾದ ಉಪ್ಪುಂದ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಸೆ. 22ರಿಂದ ಅ. 2ರವರೆಗೆ ನಡೆಯಲಿದೆ. 8ನೇ ಶತಮಾನದಲ್ಲಿ ಶ್ರೀ ಆದಿಶಂಕರರು ಆಗಮ ಶಾಸ್ತ್ರದ ಆಧಾರದಂತೆ ಶ್ರೀಚಕ್ರದ ಮೇಲೆ ಲಿಂಗರೂಪದಲ್ಲಿ ಶಕ್ತಿ ದೇವತೆಯಾದ ಶ್ರೀದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿದರು ಎಂಬ ಉಲ್ಲೇಖವಿದೆ. ತಾಲ್ಲೂಕಿನ ವಿವಿಧ ದೇವಾಲಯಗಳಾದ ಬೈಂದೂರು ಪಡುವರಿ ಪಂಚಲಿಂಗೇಶ್ವರ ದೇವಸ್ಥಾನ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ ಇದರ ಶ್ರೀ ಮಹಿಷಮರ್ದಿನಿ ಅಮ್ಮನವರ ಸನ್ನಿಧಿ ಶ್ರೀಕ್ಷೇತ್ರ ಉಪ್ರಳ್ಳಿ ಶ್ರೀಕಾಳಿಕಾಂಬಾ ದೇವಸ್ಥಾನ ವತ್ತಿನಕಟ್ಟೆ ಶ್ರೀಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ದುರ್ಗಾಹೋಮ ದುರ್ಗಾ ಪಾರಾಯಣ ಚಂಡಿಕಾಹೋಮ ಮಹಾ ಮಂಗಳಾರತಿ ರಂಗಪೂಜೆ ಮಹಾಪೂಜೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ.
ವೈಭವದ ಉಚ್ಚಿಲ ದಸರಾ
ಶ್ರೀಕ್ಷೇತ್ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅಕ್ಟೋಬರ್‌ 2ರವರೆಗೆ ನಡೆಯಲಿರುವ ನಾಲ್ಕನೇ ವರ್ಷದ ಉಡುಪಿ ಉಚ್ಚಿಲ ದಸರಾ 2025ಕ್ಕೆ ಕ್ಷೇತ್ರದಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯಿಂದ ಕಾಪು ಮತ್ತು ಕೊಪ್ಪಲಂಗಡಿವರೆಗೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಮಹಾಲಕ್ಷ್ಮಿ ದೇವಸ್ಥಾನದ ಸುತ್ತಲೂ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಶಾಲಿನಿ ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಶ್ರೀಶಾರದಾ ಮಾತೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆಗೆ 160 ಅಡಿ ಉದ್ದ 22 ಅಡಿ ಎತ್ತರದ ಮಂಟಪವನ್ನು ಕೊಲ್ಲೂರು ದೇವಸ್ಥಾನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮಂಟಪದ ಬಲಬದಿಯಲ್ಲಿ ಪಂಡರಾಪುರ ಶ್ರೀ ವಿಠೋಭರುಕುಮಾಯಿ ಎಡ ಬದಿಯಲ್ಲಿ ಕ್ಷೇತ್ರ ಮಾತೆ ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಮಂಟಪ ರಚಿಸಲಾಗಿದೆ. ದಸರಾ ಮಂಟಪದ ಮುಖ್ಯದ್ವಾರವನ್ನೂ ಅತ್ಯಾಕರ್ಷವಾಗಿ ನಿರ್ಮಿಸಲಾಗಿದೆ. ನಿತ್ಯ ಚಂಡಿಕಾಹೋಮ ಶ್ರೀಶಾರದಾ ಮಾತೆ ಮತ್ತು ಶ್ರೀ ನವದುರ್ಗೆಯರಿಗೆ ಪೂಜೆ ಕುಂಕುಮಾರ್ಚನೆ ಭಜನೆ ಹಾಗೂ ನಿತ್ಯ ಅನ್ನದಾಸೋಹಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ. ಶಾರದಾ ಮಾತೆ ಮತ್ತು ನವದುರ್ಗೆಯರ ಮೂರ್ತಿಗಳ ರಚನೆ ಅಂತಿಮ ಹಂತದಲ್ಲಿದೆ.
ಮಾರಿಗುಡಿಯಲ್ಲಿ ಶರನ್ನವರಾತ್ರಿ
ಕಾಪು ಶ್ರೀಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಇದೇ 22ರಿಂದ ಅಕ್ಟೋಬರ್ 2ರವರೆಗೆ ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಶ್ರೀಶರನ್ನವರಾತ್ರಿ ಮಹೋತ್ಸವವು ನಡೆಯಲಿದೆ. ಜೀರ್ಣೋದ್ಧಾರದ ಬಳಿಕ ನಡೆಯುವ ಪ್ರಥಮ ಶರನ್ನವರಾತ್ರಿ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. 22ರಂದು ಬೆಳಿಗ್ಗೆ 8.30ಕ್ಕೆ ಶರನ್ನವರಾತ್ರಿ ಮಹೋತ್ಸವದ ಉದ್ಘಾಟನೆಯನ್ನು 9 ಮಂದಿ ಮಹಿಳೆಯರು ಮಾಡಲಿದ್ದಾರೆ. ಈ ಬಾರಿಯ ನವರಾತ್ರಿಯಲ್ಲಿ 9 ದೀಪಗಳನ್ನು ಬೆಳಗುವ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀದೇವಿಗೆ ಹರಕೆಯಾಗಿ ಬಂದಿರುವ ಸೀರೆಗಳ ಏಲಂ ದೇವಳದ ಪ್ರಾಂಗಣದಲ್ಲಿ ನಡೆಯಲಿದೆ. ಸಾಂಸ್ಕೃತಿಕ ವೈಭವಕ್ಕೆ ಮೆರುಗನ್ನು ನೀಡಲು ಸಂಗೀತ ನೃತ್ಯ ನಾಟಕ ಯಕ್ಷಗಾನ ಪ್ರದರ್ಶನ ನಡೆಯಲಿವೆ.
ಕಾರ್ಕಳದಲ್ಲಿ ನವರಾತ್ರಿ ಸಂಭ್ರಮ
ತಾಲ್ಲೂಕಿನ ದೇವಿ ದೇವಸ್ಥಾನಗಳಲ್ಲಿ ಅ.1ರ ತನಕ ನವರಾತ್ರಿ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ. ತಾಲ್ಲೂಕಿನ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿದಿನ ಚಂಡಿಕಾಹೋಮ ಮಧ್ಯಾಹ್ನ ಮಹಾಪೂಜೆ ಸಂತರ್ಪಣೆ ರಂಗಪೂಜೆ ಪ್ರಸಾದ ವಿತರಣೆ ಸಂತರ್ಪಣೆ ನಡೆಯಲಿದೆ. 29ರಂದು ಮೂಲ ನಕ್ಷತ್ರದಂದು ಶಾರದಾ ಪ್ರತಿಷ್ಠೆ ಮೂಡೆ ಪ್ರಸಾದ ಸೇವೆ ನಡೆಯಲಿದೆ. ಅ. 2ರಂದು ಶಾರದಾ ಶೋಭಯಾತ್ರೆ ಹಾಗೂ ಶಾರದಾ ವಿಸರ್ಜನೆ ಜರುಗಲಿದೆ. ಶ್ರೀಕ್ಷೇತ್ರ ಅಡಪಾಡಿ ಶ್ರೀಉಮಾಮಹೇಶ್ವರ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅನುಷ್ಠಾನಗಳು 22ರಿಂದ ಅ. 1ರ ಪರ್ಯಂತ ಸಂಪನ್ನಗೊಳ್ಳಲಿವೆ. ತಾಲ್ಲೂಕಿನ ಹಿರ್ಗಾನ ಲಕ್ಷ್ಮಿಪುರ ಶ್ರೀಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 10 ದಿನಗಳ ಪರ್ಯಂತ ನವರಾತ್ರಿ ಉತ್ಸವ ನಡೆಯಲಿದೆ. ಕಾರ್ಕಳ ನಗರ ಮಾರಿಯಮ್ಮ ದೇವಸ್ಥಾನದಲ್ಲಿ 22 ರಿಂದ ಅ. 1ರ ತನಕ ದಿನಾಲೂ ಸಂಜೆ ಭಜನಾ ಸೇವೆ ಸಹಿತ ಶ್ರೀದೇವಿಗೆ ವಿಶೇಷ ಪೂಜೆ ಜರುಗಲಿದೆ.
ದೇವಿ ದೇಗುಲಗಳಲ್ಲಿ ನವರಾತ್ರಿ ಸಂಭ್ರಮ
ಬ್ರಹ್ಮಾವರ ತಾಲ್ಲೂಕಿನ ಮಂದಾರ್ತಿ ಕೋಟ ಅಮೃತೇಶ್ವರಿ ನೀಲಾವರದ ಮಹಿಷಮರ್ದಿನಿ ಕನ್ನಾರಿನ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಉಳಿದ ಅಮ್ಮನವರ ದೇವಸ್ಥಾನಗಳಲ್ಲಿ ನವರಾತ್ರಿ ಹಬ್ಬದ ಸಂದರ್ಭ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಚಂಡಿಕಾ ಯಾಗಗಳೊಂದಿಗೆ ಆಚರಿಸಲಾಗುತ್ತಿದೆ. ಮಂದಾರ್ತಿ ದುರ್ಗಾಪರಮೇಶ್ವರಿ: ಶ್ರೀಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 22ರಿಂದ ಅಕ್ಟೋಬರ್‌ 2ರವರೆಗೆ ಶರನ್ನವರಾತ್ರಿ ವಿಶೇಷ ಪೂಜಾ ಸಮಾರಂಭ ನಡೆಯಲಿದೆ. 29ರಂದು ಮೂಲನಕ್ಷತ್ರ ದಿನ ದೇವಸ್ಥಾನದ ವತಿಯಿಂದ ಚಂಡಿಕಾಹೋಮ ಜರುಗಲಿದ್ದು ವಿಜಯದಶಮಿಯಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮಕ್ಕಳಿಗೆ ಅಕ್ಷರಾಭ್ಯಾಸ ಸೇವೆ ನಡೆಯಲಿದೆ. ಕೋಟ ಅಮೃತೇಶ್ವರೀ ದೇವಸ್ಥಾನ: ಕೋಟದ ಪುರಾಣ ಪ್ರಸಿದ್ಧ ಸಂತಾನ ಭಾಗ್ಯ ಕರುಣಿಸುವ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ದಸರಾ ಉತ್ಸವ ಸಂಭ್ರಮದಿಂದ ನಡೆಯಲಿದೆ. ನವರಾತ್ರಿಯ ಸಂದರ್ಭ ದೇವಸ್ಥಾನವನ್ನು ವಿಶೇಷವಾಗಿ ದೀಪಾಲಂಕಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಕ್ಟೋಬರ್‌ 2ರವರೆಗೆ ನಡೆಯಲಿದೆ. ಶ್ರೀಕ್ಷೇತ್ರ ನೀಲಾವರ: ಶ್ರೀಕ್ಷೇತ್ರ ನೀಲಾವರ ಮಹತೋಭಾರ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಸಂದರ್ಭ ಅಕ್ಟೋಬರ್‌ 2ರ ವಿಜಯದಶಮಿ ದಿನ ಚಂಡಿಕಾಯಾಗ ಮತ್ತು ಸಂಜೆ ಸಾಮೂಹಿಕ ದೀಪ ನಮಸ್ಕಾರ ನಡೆಯಲಿದೆ. 25ರಂದು ಬೆಳಿಗ್ಗೆ 7.30ಕ್ಕೆ ಕದಿರು ಕಟ್ಟುವ ಕಾರ್ಯಕ್ರಮ ಜರುಗಲಿದೆ. ಕನ್ನಾರು ದುರ್ಗಾಪರಮೇಶ್ವರಿ: ಕನ್ನಾರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂದರ್ಭ ಪ್ರತಿನಿತ್ಯ ಸಪ್ತಶತಿ ಪಾರಾಯಣ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿರುವುದು. 22ರಂದು ಬೆಳಿಗ್ಗೆ ಕದಿರು ಕಟ್ಟುವಿಕೆ ಅಕ್ಟೋಬರ್ 1ರಂದು ಸಾಮೂಹಿಕ ಚಂಡಿಕಾ ಹೋಮ ನಡೆಯಲಿದ್ದು ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರುಗಲಿದೆ.  ಬಾರ್ಕೂರು ಏಕನಾಥೇಶ್ವರೀ ದೇವಸ್ಥಾನ ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಸ್ಥಾನ ಬಾರ್ಕೂರು ಕಾಳಿಕಾಂಬಾ ಕನ್ನಾರು ದುರ್ಗಾಪರಮೇಶ್ವರಿ ದೇವಸ್ಥಾನ ಸಾಲಿಕೇರಿಯ ದುರ್ಗಾಪರಮೇಶ್ವರಿ ದೇವಸ್ಥಾನ ಸಾಹೇಬರಕಟ್ಟೆ ಬಳಿಯ ಕಾಜ್ರಳ್ಳಿ ವನದುರ್ಗಾಪರಮೇಶ್ವರಿ ದೇವಸ್ಥಾನ ಚಾಂತಾರಿನ ದುರ್ಗಾಪರಮೇಶ್ವರಿ ಗದ್ದುಗೆ ಅಮ್ಮನವರ ದೇವಸ್ಥಾನ ಚಿತ್ರಪಾಡಿಯ ಮಾರಿಯಮ್ಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಂಡಿಕಾಯಾಗ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.