ADVERTISEMENT

ಉಡುಪಿ | ರಥೋತ್ಸವ ಕಣ್ತುಂಬಿಕೊಂಡ ಜನ: ಉತ್ಸವಕ್ಕೆ ಮೆರುಗು ನೀಡಿದ ವೇಷಧಾರಿಗಳು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:46 IST
Last Updated 16 ಸೆಪ್ಟೆಂಬರ್ 2025, 2:46 IST
ರಥಬೀದಿಯಲ್ಲಿ ಸಾಗಿದ ಕ್ರಿಕೆಟ್ ಆಟಗಾರರ ವೇಷಧಾರಿಗಳು
ರಥಬೀದಿಯಲ್ಲಿ ಸಾಗಿದ ಕ್ರಿಕೆಟ್ ಆಟಗಾರರ ವೇಷಧಾರಿಗಳು   

ಉಡುಪಿ: ಒಂದೆಡೆ ಹುಲಿವೇಷಗಳ ಅಬ್ಬರದ ಕುಣಿತ ಮತ್ತೊಂದೆಡೆ ಭಕ್ತ ಸಮೂಹದಿಂದ ಗೋವಿಂದನ ನಾಮಸ್ಮರಣೆ ನಡುವೆ ದೇವರ ರಥೋತ್ಸವ ಭಕ್ತಿ ಭಾವದ ನೋಟ...

ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಕೃಷ್ಣಮಠದ ರಥಬೀದಿಯಲ್ಲಿ ಸೋಮವಾರ ನಡೆದ ವಿಟ್ಲಪಿಂಡಿ ಮಹೋತ್ಸವವು ಇಂತಹ ಸನ್ನಿವೇಶಗಳಿಗೆ ಸಾಕ್ಷಿಯಾಯಿತು.

ಜನ್ಮಾಷ್ಟಮಿಯ ದಿನವಾದ ಭಾನುವಾರ ಕೃಷ್ಣ ಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಮಧ್ಯರಾತ್ರಿ ದೇವರಿಗೆ ನೈವೇದ್ಯ ಸಮರ್ಪಿಸಿ ಮಹಾಪೂಜೆ ನೆರವೇರಿಸಿದ್ದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಚಂದ್ರೋದಯದ ವೇಳೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ಮಾಡಿದ್ದರು. ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಸುಶೀಂದ್ರ ತೀರ್ಥ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಸೋಮವಾರ ಬೆಳಿಗ್ಗೆಯಿಂದಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಧ್ಯಾಹ್ನ 3 ಗಂಟೆಯಿಂದ ಶ್ರೀಕೃಷ್ಣ ದೇವರ ಮೃಣ್ಮಯ ಮೂರ್ತಿಯ ಮೆರವಣೆಗೆ ರಥಬೀದಿಯಲ್ಲಿ ನಡೆಯಿತು. ಈ ವೇಳೆ ರಥಬೀದಿಯುದ್ದಕ್ಕೂ ಜನರು ಕಿಕ್ಕಿರಿದು ತುಂಬಿದ್ದರು.

ವಿಟ್ಲಪಿಂಡಿ ಮಹೋತ್ಸವದ ಅಂಗವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೃಷ್ಣ ಮಠದತ್ತ ಜನ ಸಾಗರ ಹರಿದುಬಂದ ಕಾರಣ ಮಠದ ಸುತ್ತ ಮುತ್ತಲಿನ ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ರಸ್ತೆ ಬದಿಗಳಲ್ಲಿ ಮಕ್ಕಳ ಆಟದ ಸಾಮಗ್ರಿ , ಫ್ಯಾನ್ಸಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟವೂ ಗರಿಗೆದರಿತ್ತು.

ಹುಲಿಯ ಮುಖವಾಡ ಪ್ರದರ್ಶಿಸಿದ ವೇಷಧಾರಿ
ವಿಟ್ಲಪಿಂಡಿ ಅಂಗವಾಗಿ ಉಡುಪಿಯ ಕೃಷ್ಣಮಠದ ರಥಬೀದಿಯಲ್ಲಿ ರಥೋತ್ಸವ ನಡೆಯಿತು
ಮಲ್ಲಗಂಬ ಪ್ರದರ್ಶನ ನಡೆಯಿತು
ರಥೋತ್ಸವದ ಬಳೀಕ ಮೃಣ್ಮಯ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಯಿತು
ಆಲಾರೆ ಗೋವಿಂದ ತಂಡದವರು ಪ್ರದರ್ಶನ ನೀಡಿದರು
ಗಮನಸೆಳೆದ ಗೊಲ್ಲ ವೇಷಧಾರಿಗಳು

ಸಾವಿರಾರು ಮಂದಿಗೆ ಅನ್ನಸಂತರ್ಪಣೆ

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ದ್ವಿತೀಯಾರ್ಧದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಅನ್ನಪ್ರಸಾದ ಸವಿದರು. ಬೆಳಿಗ್ಗೆ ಶ್ರೀಕೃಷ್ಣನಿಗೆ‌ ಮಹಾಪೂಜೆ ನೆರವೇರಿಸಿದ ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಪಲ್ಲಪೂಜೆ ನಡೆಸಿದರು. ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಬಳಿಕ ಕೃಷ್ಣಮಠದ ಭೋಜನಶಾಲೆ ಅನ್ನಬ್ರಹ್ಮ ಹಾಗೂ ರಾಜಾಂಗಣಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಾಳೆಎಲೆಯಲ್ಲಿ ಮತ್ತು ಬಫೆ ಪದ್ಧತಿಯಲ್ಲಿ ಊಟ ನೀಡಲಾಗಿದ್ದು ಸುಮಾರು 50 ಸಾವಿರ ಮಂದಿ ಅನ್ನಪ್ರಸಾದ ಭೋಜನ ಸ್ವೀಕರಿಸಿದರು ಎಂದು ಮಠದ ಮೂಲಗಳು ತಿಳಿಸಿದವು. ಭಕ್ತರಿಗೆ ಊಟದೊಂದಿಗೆ ಹಾಲುಪಾಯಸ ಉಂಡೆ ಚಕ್ಕುಲಿ ವಿತರಿಸಲಾಯಿತು‌.

ಮುದನೀಡಿದ ಆಲಾರೆ ಗೋವಿಂದ ತಂಡ

ರಥಬೀದಿಯಲ್ಲಿ ಸೋಮವಾರ ಬೆಳಿಗ್ಗೆ ಮುಂಬೈನ ಆಲಾರೆ ಗೋವಿಂದ ತಂಡದವರು ಮಡಿಕೆ ಒಡೆಯುವ ಪ್ರದರ್ಶನ ನೀಡುವ ಮೂಲಕ ಜನರಿಗೆ ಮುದನೀಡಿದರು. ಗೀತಾಮಂದಿರದ ಮುಂಭಾಗದಲ್ಲಿ ಮಧ್ಯಾಹ್ನ ಆಲಾರೆ ಗೋವಿಂದ ತಂಡದವರಿಂದ ಮಡಿಕೆ ಒಡೆಯುವ ಪ್ರದರ್ಶನ ನಡೆಯಿತು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಪ್ರದರ್ಶನವನ್ನು ವೀಕ್ಷಿಸಿದರು. ಆಲಾರೆ ಗೋವಿಂದ ಪುರುಷರ ತಂಡದವರು ಮಾನವ ಪಿರಮಿಡ್‌ ರಚಿಸಿ ಮಡಿಕೆ ಒಡೆಯಲು ಪ್ರಯತ್ನಿಸಿದಾಗ ಆಯತಪ್ಪಿ ಬಿದ್ದರು. ಈ ವೇಳೆ ತಂಡದ ಸದಸ್ಯರೊಬ್ಬರ ತಲೆಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಮಹಿಳಾ ತಂಡದವರು ಮಡಿಕೆ ಒಡೆದರು. ನಾಸಿಕ್‌ ಬ್ಯಾಂಡ್‌ ತಂಡದವರು ಬ್ಯಾಂಡ್‌ ವಾದನ ಪ್ರಸ್ತುತಪಡಿಸಿದರು.

ಹುಲಿಗಳ ಅಬ್ಬರ

ಜನ್ಮಾಷ್ಟಮಿ ಅಂಗವಾಗಿ ನಗರದಾದ್ಯಂತ ಹುಲಿವೇಷಧಾರಿಗಳು ಕುಣಿತ ಪ್ರದರ್ಶಿಸಿದರು. ವಿಟ್ಲಪಿಂಡಿಯ ದಿನವಾದ ಸೋಮವಾರ ರಥಬೀದಿಯಲ್ಲಿ ಹುಲಿಗಳ ಅಬ್ಬರದ ಕುಣಿತ ಮುಗಿಲು ಮುಟ್ಟಿತ್ತು. ರಥೋತ್ಸವದ ವೇಳೆಯೂ ಹುಲಿವೇಷಧಾರಿಗಳು ಪ್ರದರ್ಶನ ನೀಡಿದರು. ರಥಬೀದಿಯಲ್ಲಿ ಸಿದ್ಧಪಡಿಸಿದ್ದ ಪ್ರತ್ಯೇಕ ವೇದಿಕೆಯಲ್ಲೂ ಹುಲಿವೇಷ ತಂಡಗಳು ಪ್ರದರ್ಶನ ನೀಡಿದವು. ರಥೋತ್ಸವದ ಬಳಿಕ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹುಲಿವೇಷ ತಂಡಗಳು ಪ್ರದರ್ಶನ ನೀಡಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.