ಉಡುಪಿ: ‘ಉಡುಪಿ ಸೀರೆ’ ಕರಾವಳಿಯ ಹೆಮ್ಮೆಯ ಸ್ಥಳೀಯ ಉತ್ಪನ್ನವಾಗಿದ್ದು ಪ್ರಧಾನಿ ಮೋದಿ ಅವರ ಕರೆಯಂತೆ ಸ್ವದೇಶಿ ವಸ್ತುಗಳ ಬಳಕೆ ಹಾಗೂ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಹೇಳಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ವೋಕಲ್ ಫಾರ್ ಲೋಕಲ್’ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಕೈಮಗ್ಗ ನೇಕಾರರ ಸಹಕಾರ ಸಂಘಗಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಉಡುಪಿಯ ಹೆಮ್ಮೆಯ ಉತ್ಪನ್ನವಾದ ಉಡುಪಿ ಸೀರೆಗಳ ಬಳಕೆ ಹೆಚ್ಚಾಗಬೇಕು. ಮಾರುಕಟ್ಟೆಯ ವ್ಯವಸ್ಥೆ ಒದಗಿಸಿ ಪೋತ್ಸಾಹಿಸಬೇಕು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇಷ್ಟವಾದ ಉಡುಪಿ ಸೀರೆಯನ್ನು ಸ್ಥಳೀಯರು ಹೆಚ್ಚು ಬಳಸಿ ಬೆಂಬಲ ನೀಡಬೇಕು ಎಂದು ದಿನಕರ ಬಾಬು ಹೇಳಿದರು.
ಉಡುಪಿ ಸೀರೆಗಳಲ್ಲಿ ನೇಕಾರರ ವಿಶಿಷ್ಟ ಕಲೆ ಹಾಗೂ ವಿನ್ಯಾಸವನ್ನು ಕಾಣಬಹುದು. ಗುಣಮಟ್ಟದಲ್ಲೂ ಉಡುಪಿ ಸೀರೆಗಳು ಮುಂದಿವೆ ಎಂದರು.
ಉಡುಪಿ, ಶಿವಳ್ಳಿ, ಬ್ರಹ್ಮಾವರ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ಸದಸ್ಯರು ಉಡುಪಿ ಸೀರೆಗಳ ಮಾರಾಟದಲ್ಲಿ ಭಾಗವಹಿಸಿದ್ದರು. ₹ 850 ರಿಂದ ₹ 1400 ರ ವರೆಗೆನ ಸೀರೆಗಳು ಪ್ರದರ್ಶನದಲ್ಲಿ ಲಭ್ಯವಿದೆ. ಕಾರ್ಮಿಕರ ಸಮಸ್ಯೆಯಿಂದ ಉತ್ಪಾದನೆ ಕಡಿಮೆಯಾಗಿದೆ. ಸ್ಥಳೀಯರಿಂದ ಸೀರೆಗಳ ಖರೀದಿಗೆ ಉತ್ತಮ ಬೆಂಬಲ ದೊರೆಯುತ್ತಿದೆ ಎಂದು ಮಾರಾಟಗಾರ ಮಾಧವ ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ.ಪುತ್ರನ್, ಸಿಇಒ ಪ್ರೀತಿ ಗೆಹ್ಲೋಟ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕೈಮಗ್ಗ ಹಾಗೂ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಶಿವಶಂಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.