ADVERTISEMENT

ಬ್ರಹ್ಮಾವರ: ಮಕ್ಕಳ ಮನಸ್ಸಲ್ಲಿ ಸಂಸ್ಕಾರ, ಮೌಲ್ಯ ತುಂಬಿ; ಪ್ರಕಾಶ್ಚಂದ್ರ ಶೆಟ್ಟಿ

ಜಿ.ಎಂ. ವಿದ್ಯಾನಿಕೇತನ ಸ್ಕೂಲ್‌ 21ನೇ ವಾರ್ಷಿಕೋತ್ಸವದಲ್ಲಿ ಪ್ರಕಾಶ್ಚಂದ್ರ ಶೆಟ್ಟಿ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:30 IST
Last Updated 1 ಡಿಸೆಂಬರ್ 2025, 7:30 IST
ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಿ ಪಡಿಸಿದರು
ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಿ ಪಡಿಸಿದರು   

ಬ್ರಹ್ಮಾವರ: ಇಂದು ಸಂಸ್ಕಾರ ಮರೆಯಾಗುತ್ತಿದ್ದು, ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸಬೇಕು ಎಂದು ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಇಲ್ಲಿನ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್‌ನ 21ನೇ ವರ್ಷದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಉಡುಪಿ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಮಕ್ಕಳ ಸಾಧನೆ, ಬೆಳವಣಿಗೆ, ಪ್ರತಿಭೆಯನ್ನು ಆಚರಿಸುವ ವಿಶೇಷ ಸಂದರ್ಭ ಎಂದು ಹೇಳಿದರು.

ADVERTISEMENT

ಉಡುಪಿ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕುಡ್ಲು ಮಾತನಾಡಿ, ಜಿ.ಎಂ. ನಾನು ಕಂಡ ಅತ್ಯಂತ ಶಿಸ್ತುಬದ್ಧ ಶಾಲೆ. ಇಲ್ಲಿ ಜ್ಞಾನ, ಶ್ರದ್ಧೆ, ಶಿಸ್ತು, ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಮಕ್ಕಳಿಗೆ ಜೀವನದಲ್ಲಿ ಸಾಧನೆಗೆ ಕಠಿಣಶ್ರಮ, ಬದ್ಧತೆ ಅಗತ್ಯ. ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯದ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, ಜೀವನ ಎಂದರೆ ಮೆದುಳಿನಿಂದ ಹೃದಯಕ್ಕೆ ಬರುವ ಒಳ್ಳೆಯ ತರಂಗಗಳು. ನಿಮ್ಮ ಗುರಿ ಮತ್ತು ನೀವು ಮಾಡಬೇಕಾದ ಕೆಲಸಗಳೆಲ್ಲವನ್ನು ಒಂದು ಚೌಕಟ್ಟಿನಲ್ಲಿ ಸಾಧಿಸಿ ಎಂದು ಹೇಳಿದರು.

ಪ್ರಾಂಶುಪಾಲ ಜಾರ್ಜ್ ಕುರಿಯನ್ ಶಾಲಾ ಚಟುವಟಿಕೆಗಳ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯಲ್ಲಿ ಸುದೀರ್ಘ ಕರ್ತವ್ಯ ನಿರ್ವಹಿಸಿದ ಶಿಕ್ಷಕರು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪ್ರತಿಭಾನ್ವಿತ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಶಾಲಾ ಆಡಳಿತ ಮಂಡಳಿ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಜಿ.ಎಂ. ಗ್ಲೋಬಲ್ ಸ್ಕೂಲ್‌ ಆಡಳಿತ ನಿರ್ದೇಶಕ ಪ್ರಣವ ಶೆಟ್ಟಿ, ಡಾ.ವಿಜಯೇಂದ್ರ, ರಾಮ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ.ಅನುಷಾ ಸುಬ್ರಹ್ಮಣ್ಯಂ, ಉಪಾಧ್ಯಕ್ಷೆ ರೇವತಿ ಕೆ, ಶ್ರೀಮಾ ಪ್ರಣವ್ ಶೆಟ್ಟಿ, ರಶ್ಮಿ ಕೃಷ್ಣಪ್ರಸಾದ್, ಶಶಿಧರ ಶೆಟ್ಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.