
ಉಡುಪಿ: ದೇಶದ ಕರಾವಳಿ ಪ್ರದೇಶವು ಅಂತರರಾಷ್ಟ್ರೀಯ ಗಡಿ ಇದ್ದಂತೆ. ಅಲ್ಲಿನ ಸುರಕ್ಷತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮಹಿಳಾ ಸಬಲೀಕರಣದ ಉದ್ದೇಶದಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್ಎಫ್) ಸೈಕ್ಲೋಥಾನ್ ಹಮ್ಮಿಕೊಂಡಿದೆ ಎಂದು ಸಿಐಎಸ್ಎಫ್ ಡೆಪ್ಯೂಟಿ ಕಮಾಂಡೆಂಟ್ ಸಂದೀಪ್ ಚಕ್ರವರ್ತಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಬ್ರಹ್ಮಾವರದ ಆಶ್ರಯ ಹೋಟೆಲ್ನ ಸಭಾಂಗಣದಲ್ಲಿ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ಅಂಗವಾಗಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದ್ರ ತೀರದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದರೆ ಪೊಲೀಸರಿಗೆ, ಭದ್ರತಾ ಪಡೆಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಗುಜರಾತ್ನ ಲಖ್ಪತ್ನಿಂದ ಪಶ್ಚಿಮ ಬಂಗಾಳದ ಬಕ್ಖಾಲಿ ವರೆಗೆ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್ ಸಾಗಲಿದೆ ಎಂದು ವಿವರಿಸಿದರು.
ಸಿಐಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ದುರ್ಗೇಶ್ ಕಲಾಲ್ ಮಾತನಾಡಿ, ಕರಾವಳಿಯ ಜನರು ದೇಶದ ಕಿವಿ ಮತ್ತು ಕಣ್ಣು ಇದ್ದಂತೆ. ಕಡಲಿನ ಮೂಲಕ ಕಳ್ಳಸಾಗಣೆ, ಶಸ್ತ್ರಾಸ್ತ್ರ ಅಕ್ರಮ ಸಾಗಣೆ, ಮಾನವ ಕಳ್ಳ ಸಾಗಣೆ ಚಟುವಟಿಕೆಗಳು ನಡೆಯದಂತೆ ಕರಾವಳಿಯ ಜನರು ಎಚ್ಚರ ವಹಿಸಬೇಕು ಎಂದರು.
ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಭುವನೇಶ್ ಜಾಧವ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಷನ್ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ನಾಯರ್, ಉಪಾಧ್ಯಕ್ಷ ಸುದೇಶ್ ಹೆಗ್ಡೆ, ಕಾರ್ಯದರ್ಶಿ ಗ್ರೆಗೋರಿ ಡಿಸೋಜ, ಉದ್ಯಮಿ ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ರ್ಯಾಲಿಯು ಬೆಳಿಗ್ಗೆ ತ್ರಾಸಿಗೆ ಪ್ರವೇಶಿಸಿದ್ದು, ಸ್ಥಳೀಯ ಸಂಪ್ರದಾಯದೊಂದಿಗೆ ಸ್ವಾಗತಿಸಲಾಯಿತು. ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕುಂದಾಪುರದ ಮೂಲಕ ಬ್ರಹ್ಮಾವರ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.