ಉಡುಪಿ: ಕೊರೊನಾ ಸಂಕಷ್ಟವನ್ನು ತಂದೊಡ್ಡುವುದರ ಜೊತೆಗೆ ಮಾನವೀಯ ಮುಖಗಳನ್ನೂ ಅನಾವರಣಗೊಳಿಸಿದೆ. ಬಡವರು, ನಿರ್ಗತಿಕರಿಗೆ ಆಹಾರ ಹಂಚುವ ಕೈಗಳು ಹೆಚ್ಚುತ್ತಿವೆ. ಹೀಗೆ, ಹಸಿವು ತಣಿಸುತ್ತಿರುವ ಪೈಕಿ ರಾಣೆಬೆನ್ನೂರಿನ ತರಕಾರಿ ವ್ಯಾಪಾರಿ ಬಸವರಾಜ್ ಕೂಡ ಒಬ್ಬರು.
ಪ್ರತಿದಿನ ನಗರದಲ್ಲಿ ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಸಂಘ–ಸಂಸ್ಥೆಗಳು ಹಂಚುತ್ತಿರುವ ಊಟಕ್ಕೆ ಅಗತ್ಯವಾದ ತರಕಾರಿಗಳನ್ನು ಬಸವರಾಜ್ ಉಚಿತವಾಗಿ ಪೂರೈಸುತ್ತಿದ್ದಾರೆ. ಹಾಗೆಂದು, ಇವರು ಶ್ರೀಮಂತ ವ್ಯಾಪಾರಿಯಲ್ಲ, ಸಣ್ಣ ವ್ಯಾಪಾರಿಯಾಗಿದ್ದರೂ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಟ್ಟು ಮಾದರಿಯಾಗಿದ್ದಾರೆ.
25 ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿರುವ ಬಸವರಾಜ್ಬೀಡಿನಗುಡ್ಡೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಪ್ರತಿದಿನ ಬೆಳಗಿನ ಜಾವ ಶಿವಮೊಗ್ಗದಿಂದ ಬರುವ ತರಕಾರಿಯನ್ನು ಖರೀದಿಸಿ ಸಾರ್ವಜನಿಕರಿಗೆ ಮಾರುತ್ತಾರೆ. ಹಾಕಿದ ಬಂಡವಾಳ ಕೈಸೇರಿದ ಬಳಿಕ, ಉಳಿದ ಎಲ್ಲ ತರಕಾರಿಗಳನ್ನು ಕೊರೊನಾ ವಾರಿಯರ್ಸ್ಗಳಿಗೆ ತಲುಪಿಸುತ್ತಾರೆ. ಅವರು ನಗರದಲ್ಲಿ ಆಹಾರ ಹಂಚುವ ಸಂಘ ಸಂಸ್ಥೆಗಳಿಗೆ ತರಕಾರಿಯನ್ನು ಮುಟ್ಟಿಸುತ್ತಾರೆ.
ಇದುವರೆಗೂ ಹಂಚಿದ ತರಕಾರಿಯ ಬಗ್ಗೆ ಲೆಕ್ಕವಿಟ್ಟಿಲ್ಲ; ಪ್ರತಿದಿನ ದೇವರು ಕೊಡುತ್ತಾನೆ, ಅದರಲ್ಲಿ ಒಂದಷ್ಟನ್ನು ಬೇರೆಯವರಿಗೆ ಕೊಡುತ್ತೇನೆ. ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ.ಕೊರೊನಾ ಸಂಕಷ್ಟದಲ್ಲಿ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸಬೇಕಿರುವುದು ನಾಗರಿಕರ ಕರ್ತವ್ಯವಲ್ಲವೇ ಎನ್ನುತ್ತಾರೆ ಅವರು.
ವ್ಯಾಪಾರದಲ್ಲಿ ಸಿಗುವ ಅಲ್ಪ ಆದಾಯದಲ್ಲಿ ನೆಮ್ಮದಿಯಾಗಿದ್ದೇನೆ. ಕೈಲಾದಷ್ಟು ದಿನ ಉಚಿತವಾಗಿ ತರಕಾರಿ ಹಂಚುತ್ತೇನೆ. ಆದಷ್ಟು ಬೇಗ ಕೊರೊನಾ ಸಂಕಷ್ಟ ನಿವಾರಣೆಯಾಗಲಿ ಎನ್ನುತ್ತಾರೆ ಬಸವರಾಜ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.