
ಬ್ರಹ್ಮಾವರ: ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್, ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಸಹಯೋಗದಲ್ಲಿ ಆಯೋಜಿಸಿದ್ದ ‘ಕಿಶೋರ ಯಕ್ಷಗಾನ ಸಂಭ್ರಮ ಅಭಿಯಾನ’ದ ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಎಂಟು ಶಾಲೆಗಳ ಪ್ರದರ್ಶನಗಳ ಸಮಾರೋಪ ಸೋಮವಾರ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ಅಧ್ಯಕ್ಷತೆ ವಹಿಸಿದ್ದರು. ಬಹು ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ ಪ್ರಮಾಣ ಪತ್ರ ವಿತರಿಸಿದರು.
ತೆಕ್ಕಟ್ಟೆಯ ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಸುಜಯೀಂದ್ರ ಹಂದೆ, ಶಿಕ್ಷಕ ಸಹಕಾರಿ ಬ್ಯಾಂಕಿನ ಪ್ರಬಂಧಕ ಕೆ. ಸಂತೋಷ ಕುಮಾರ ಶೆಟ್ಟಿ, ಯಕ್ಷದೇಗುಲದ ಸುದರ್ಶನ ಉರಾಳ, ಟ್ರಸ್ಟ್ ಕೋಶಾಧಿಕಾರಿ ಗಣೇಶ ಬ್ರಹ್ಮಾವರ, ಕಲಾರಂಗದ ರಾಜೇಶ ನಾವಡ ಇದ್ದರು.
ವಿದ್ಯಾರ್ಥಿಗಳಾದ ಅರುಷ್, ಉನ್ನತಿ, ಸೃಷ್ಟಿ, ಭರತ್ ಯಕ್ಷ ಶಿಕ್ಷಣದಿಂದ ತಮಗೊದಗಿದ ಅವಿಸ್ಮರಣೀಯ ಅನುಭವ ಹಂಚಿಕೊಂಡರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.