ADVERTISEMENT

ಅರಬ್ಬಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 6:35 IST
Last Updated 12 ಸೆಪ್ಟೆಂಬರ್ 2011, 6:35 IST

ಕಾರವಾರ: ಕಳೆದ ಹತ್ತು ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ಗಣೇಶಮೂರ್ತಿಗಳ ವಿಸರ್ಜನೆ ಇಲ್ಲಿಯ ಅರಬ್ಬಿ ಸಮುದ್ರದಲ್ಲಿ ಭಾನುವಾರ ನಡೆಯಿತು.

ಪಡುವಣದಲ್ಲಿ ಸೂರ್ಯ ಮರೆಯಾಗುತ್ತಿದ್ದಂತೆ ಕಡಲತೀರದಲ್ಲಿ ನೆರೆದಿದ್ದ ಸಾವಿರಾರು ಭಕ್ತರು `ಗಣಪತಿ ಬಪ್ಪ ಮೊರಯಾ ಪುಡ್ಚೆ ವರ್ಷಾ ಲೌಕರಿಯಾ~ ಎಂದು ಜೈಕಾರ ಹಾಕುತ್ತ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜಿಸಿದರು.

ಸಂಜೆ ನಾಲ್ಕು ಗಂಟೆ ಸುಮಾರಿಗೆ ವಿವಿಧರೂಪಿ ಗಣೇಶಮೂರ್ತಿಗಳ ಮೆರವಣಿಗೆ ಪ್ರಾರಂಭವಾಯಿತು. ನಗರದ ಕೋಡಿಭಾಗ, ಕಾಜುಭಾಗ, ನಂದನಗದ್ದಾ, ಶಿರವಾಡ, ಅಟೊ ಚಾಲಕ ಮತ್ತು ಮಾಲೀಕರ ಸಂಘ, ಮಾರುತಿಗಲ್ಲಿ ಹೀಗೆ ಹತ್ತಾರು ಸಮಿತಿಗಳು ಪ್ರತಿಷ್ಠಾಪಿಸಿದ ಗಣೇಶಮೂರ್ತಿಗಳು ನಗರತುಂಬ ಪ್ರದಕ್ಷಿಣೆ ಹಾಕಿ ನಂತರ ಕಡಲತೀರದತ್ತ ಸಾಗಿದವು.

ಒಂದು ವಾಹನದಲ್ಲಿ ಗಣೇಶಮೂರ್ತಿ ಹಾಗೂ ಇನ್ನೊಂದು ವಾಹನದಲ್ಲಿ ಲೌಡ್ ಸ್ಪೀಕರ್‌ಗಳನ್ನಿಟ್ಟು ಹಿಂದಿ, ಕನ್ನಡ, ಮರಾಠಿ ಚಿತ್ರದ ಹಾಡಿಗೆ ಹೆಜ್ಜೆ ಹಾಕುತ್ತ, ಗುಲಾಲು ಎರಚಿ ಸಂಭ್ರಮಿಸುತ್ತ ಭಕ್ತರು ಮೂರ್ತಿಯೊಂದಿಗೆ ಸಾಗಿದರು.

ವರ್ಷಕ್ಕೆ ಒಂದು ಬಾರಿ ನಡೆಯುವ ಗಣೇಶ ವಿಸರ್ಜನೆಯ ವೈಭವ ನೋಡಲು ನೋಡಲು ನೋಡಲು ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ನಗರಸಭೆ ವಾಣಿಜ್ಯ ಸಂಕೀರ್ಣದ ಮೇಲೆ ನಿಂತ ಜನರು ಮೆರವಣಿಗೆಯಲ್ಲಿ ಬಂದ ಗಣೇಶನನ್ನು ನೋಡಿ ನಮಿಸಿದರು.

ಎಂದಿನಂತೆ ಇಲ್ಲಿಯ ಮಾರುತಿ ಮಂದಿರದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನೆ ಮೊದಲು ನಡೆಯಿತು. ವಿಸರ್ಜನೆ ಶಾಂತಿಯುತವಾಗಿ ನಡೆಯಲು ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.