ADVERTISEMENT

ತೆಂಗಿನ ಮರಕ್ಕೆ ಸುಳಿಕೊಳೆ ರೋಗ: ಸ್ಥಳಕ್ಕೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 6:55 IST
Last Updated 2 ಸೆಪ್ಟೆಂಬರ್ 2013, 6:55 IST

ಶಿರಸಿ: ತಾಲ್ಲೂಕಿನ ಮತ್ತೀಘಟ್ಟಾ ಭಾಗದಲ್ಲಿ ತೆಂಗಿನ ಮರಕ್ಕೆ ಸುಳಿಕೊಳೆ ರೋಗ ತಗುಲಿದ್ದು, 500ಕ್ಕೂ ಹೆಚ್ಚು ಮರಗಳು ರೋಗಕ್ಕೆ ತುತ್ತಾಗಿವೆ.

ಅಡಿಕೆಗೆ ಬಂದಿರುವ ಕೊಳೆರೋಗದಿಂದ ಕಂಗಾಲಾಗಿರುವ ಕೃಷಿಕರು ತೆಂಗಿಗೆ ಬಂದಿರುವ ಸುಳಿಕೊಳೆ ರೋಗ ಕಂಡು ಘಾಸಿಗೊಂಡಿದ್ದಾರೆ. ರೋಗಕ್ಕೆ ತುತ್ತಾದ ಹಲವು ಮರಗಳ ಸಾಯುವ ಮುನ್ಸೂಚನೆ ನೀಡಿವೆ. ಸುಳಿಕೊಳೆ ರೋಗ ಬಂದಿರುವ ಮರಗಳ ಸುಳಿ ಕೊಳೆತು ಕೆಳಗೆ ಬೀಳುತ್ತಿದೆ. ಇದನ್ನು ನೋಡಿದ ಬೆಳೆಗಾರರು ತೋಟಗಾರಿಕಾ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ತೋಟಗಾರಿಕಾ ಇಲಾಖೆಯ ಅಣ್ಣಪ್ಪ ನಾಯ್ಕ, ವಿ.ಎಂ.ಹೆಗಡೆ, ಎನ್.ಡಿ.ಮಡಿವಾಳ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹೇರಂಭ ಹೆಗಡೆ, ಮಂಜುನಾಥ ಹೆಗಡೆ, ಗಣಪತಿ ಕಾಶೀತೋಟ, ವಿಶ್ವೇಶ್ವರ ಕಾಶಿಗದ್ದೆ, ಗಿರಿಜಾ ತಿಮ್ಮಯ್ಯ ಹೆಗಡೆ ಅವರಿಗೆ ಸೇರಿದ ಸುಮಾರು 30 ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಮರಗಳ ಸುಳಿ ಕೊಳೆತಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ.

ಸುಳಿಕೊಳೆ ರೋಗ ಪ್ರಾರಂಭ ಹಂತದಲ್ಲಿದ್ದರೆ ಔಷಧಿ ಮೂಲಕ ನಿಯಂತ್ರಿಸಲು ಸಾಧ್ಯವಿದೆ. ರೈತರಿಗೆ ಸೂಕ್ತ ಸಲಹೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.