ADVERTISEMENT

ನೈಜ ಪರಿಶಿಷ್ಟರಿಗೆ ಸೌಲಭ್ಯ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 9:12 IST
Last Updated 7 ಡಿಸೆಂಬರ್ 2013, 9:12 IST

ಭಟ್ಕಳ: ಪರಿಶಿಷ್ಟರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೈಜ ಪರಿಶಿಷ್ಟರಲ್ಲದವರಿಗೆ ನೀಡದಂತೆ ಭಟ್ಕಳ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿನ ಜಾಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಲ್ಲಾಸ ನಾಯ್ಕರಿಗೆ ಮನವಿ ಸಲ್ಲಿಸಿದರು.

ಜಾಲಿ ಗ್ರಾಮ ಪಂಚಾಯ್ತಿಯಲ್ಲಿ ಪರಿಶಿಷ್ಟರಿಗೆ ಕಾಯ್ದಿರಿಸಿದ ಅನುದಾನ­ದಿಂದ ಮತ್ತು ಸರ್ಕಾರದಿಂದ ಬಂದ ಸವಲತ್ತುಗಳನ್ನು ನೈಜ ಪರಿಶಿಷ್ಟರಿಗೆ ನೀಡದೇ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ. ಈ ಸೌಲಭ್ಯಗಳು ನೈಜ ಪರಿಶಿಷ್ಟರಿಗೆ ನೀಡು­ವಂತೆ ಮಾಡುವುದು ಅಧಿಕಾರಿಗಳ ಜವಾ­ಬ್ದಾರಿ­ಯಾಗಿದೆ ಎಂದು ಆಗ್ರಹಿಸಿದರು.

ಕಳೆದ ಹಲವು ವರ್ಷಗಳಿಂದ ಕೆಲವು ಕಂದಾಯ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡದೇ,  ಕರ್ತವ್ಯಲೋಪ ಎಸಗಿ ನೈಜ ಪರಿಶಿಷ್ಟರಿಗೆ ನೀಡಬೇಕಾದ ಸವ­ಲತ್ತುಗಳನ್ನು ಪರಿಶಿಷ್ಟರಲ್ಲದವರಿಗೆ ನೀಡು­ತ್ತಿದ್ದಾರೆ ಎಂದು ಆರೋಪಿಸಿದರು.

ಮೂಲತಃ ಮೀನುಗಾರಿಕೆ ವೃತ್ತಿ ಮಾಡುವ ಮೊಗೇರ ಜನಾಂಗದವರು ಪರಿಶಿಷ್ಟ ಜಾತಿಗೆ ಸೇರಿದವ­ರಲ್ಲವೆಂದು ಹೈಕೋರ್ಟ್‌ ಆದೇಶ ನೀಡಿದೆ.  ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪರಿಶಿಷ್ಟ­ರಲ್ಲದ ಮೊಗೇರ ಸಮಾಜದವರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ನಿಲ್ಲಿಸಬೇಕು ಹಾಗೂ ಅವರಿಗೆ ಈವರೆಗೆ ನೀಡಿರುವ ಸೌಲಭ್ಯ­ಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ದ.ಸಂ.ಸ ಮಿತಿಯ ಪ್ರಮುಖ ನಾರಾಯಣ ಶಿರೂರ್‌, ಕಿರಣ ಶಿರೂರ್‌, ಮಹೇಶ ಪಾಲನಕರ್‌, ಭಾಸ್ಕರ ಚಂದಾವರಕರ್, ಅನಿತಾ ಪಾಲೇಕರ್‌, ಲಲಿತಾ ಪಾವಸ್ಕರ್, ಶ್ರೀಧರ ಹಳ್ಳೇರ್‌,ಗಣೇಶ ಹಳ್ಳೇರ್‌, ದೇವೇಂದ್ರ ಬಾಕಡ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.