ADVERTISEMENT

ಮಳೆ, ಗಾಳಿ: ಕಡಲ್ಕೊರೆತ ಆರಂಭ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:46 IST
Last Updated 11 ಜೂನ್ 2013, 8:46 IST

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟ ಸೋಮವಾರವೂ ಮುಂದುವರಿದಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲ್ಲೂಕಿನಲ್ಲಿ ಒಂದೆರಡು ಗಂಟೆ ಹೊರತುಪಡಿಸಿ ದಿನವಿಡೀ ಮಳೆ ಸುರಿದಿದೆ.

ಗಾಳಿ, ಮಳೆಯಿಂದಾಗಿ ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದು ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ಕಡಲ್ಕೊರೆತ ಆರಂಭವಾಗಿದೆ. ದೊಡ್ಡದೊಡ್ಡ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದ್ದು ತೀರವನ್ನು ಸಮುದ್ರ ಆಪೋಶನ ಮಾಡಿಕೊಳ್ಳುತ್ತಿದೆ.

ಕಡಲತೀರದ ರಕ್ಷಣೆಗೆ ಹಾಕಿರುವ ದೊಡ್ಡದೊಡ್ಡ ಶಿಲೆ ಕಲ್ಲುಗಳು ಸಮುದ್ರದೊಳಗೆ ಹೋಗುತ್ತಿದೆ. ಇದರಿಂದಾಗಿ ಸ್ಥಳೀಯ ಮೀನುಗಾರರ ಆತಂಕಕ್ಕೆ ಒಳಗಾಗಿದ್ದಾರೆ.

`ಕಡಲ್ಕೊರೆತ ತಡೆಗಟ್ಟಲು ಸರ್ಕಾರ ತಡೆಗೋಡೆ ನಿರ್ಮಿಸಿತು ಆದರೆ, ಕಡಲಿನ ಅಬ್ಬರಕ್ಕೆ ಅವು ನಿಲ್ಲುತ್ತಿಲ್ಲ. ತೀರದ ರಕ್ಷಣೆಗೆ ಸರ್ಕಾರ ಕೂಡಲೇ ತುರ್ತು ಕ್ರಮಕೈಗೊಳ್ಳಬೇಕು' ಎಂದು ಹಾರವಾಡ ಗ್ರಾ.ಪಂ. ಅಧ್ಯಕ್ಷ ಉಮೇಶ ಕಾಂಚನ್, ಸದಸ್ಯ ಶ್ರೀಕಾಂತ ನಾಯ್ಕ ಆಗ್ರಹಿಸಿದ್ದಾರೆ.

ಜೋಯಿಡಾ, ಹಳಿಯಾಳ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳ, ಕೊಳ್ಳಗಳು ತುಂಬಿ ಹರಿಯಲಾರಂಭಿಸಿವೆ.

ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 22.9 ಸೆಂ.ಮೀ ಮಳೆಯಾಗಿದೆ.

ಅಂಕೋಲಾ- 45.8ಮಿ.ಮೀ, ಭಟ್ಕಳ- 27.8, ಹಳಿಯಾಳ- 2.6, ಹೊನ್ನಾವರ- 39.8, ಕಾರವಾರ- 59.6, ಕುಮಟಾ- 31.5, ಮುಂಡಗೋಡ- 3, ಸಿದ್ದಾಪುರ- 15.2, ಶಿರಸಿ- 9.5, ಜೋಯಿಡಾ- 9 ಹಾಗೂ ಯಲ್ಲಾಪುರದಲ್ಲಿ 7.8 ಮಿ.ಮೀ ಮಳೆಯಾಗಿದೆ. ಜೂನ್ 1 ರಿಂದ 10 ರವರೆಗೆ ಸರಾಸರಿ 126.3 ಮಿ.ಮೀ ಮಳೆಯಾಗಿದೆ.

ಸಿದ್ದಾಪುರ ವರದಿ
ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಚುರುಕಾಗಿದ್ದು, ಆಸ್ತಿ-ಪಾಸ್ತಿ ಹಾನಿಯಾದ ವರದಿಗಳು ಬಂದಿವೆ.

ತಾಲ್ಲೂಕಿನ ಮುಗದೂರಿನಲ್ಲಿ ಪಾರ್ವತಿ ರಾಮಚಂದ್ರ ಮಡಿವಾಳ ಎಂಬವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಭಾರಿ ಮಳೆಯಿಂದ ಕುಸಿದಿದೆ. ಕಂದಾಯ ನಿರೀಕ್ಷಕ ಡಿ.ಎಂ.ನಾಯ್ಕ ಮತ್ತು ಗ್ರಾಮ ಲೆಕ್ಕಾಧಿಕಾರಿ ರೇಖಾ ಸ್ಥಳಕ್ಕೆ ಭೇಟಿ ನೀಡಿದ್ದು, ರೂ.22 ಸಾವಿರ ಹಾನಿಯ ಅಂದಾಜು ಮಾಡಿದ್ದಾರೆ.

ಹಲಗೇರಿ,ಸುಂಕತ್ತಿಯಲ್ಲಿ ಶಿವಾಜಿ ಎಂಬವರ ಮನೆಯ ಮೇಲೆ ಹಲಸಿನ ಮರ ಬಿದ್ದು, ರೂ 30 ಸಾವಿರ ಹಾನಿ ಭಾನುವಾರ ಸಂಭವಿಸಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.