ADVERTISEMENT

ಮಿಶ್ರ ಕೃಷಿ ಪದ್ಧತಿ ಅನುಸರಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:37 IST
Last Updated 20 ಡಿಸೆಂಬರ್ 2012, 8:37 IST

ಸಿದ್ದಾಪುರ: `ನಗರದತ್ತ ಆಕರ್ಷಿತರಾಗುತ್ತಿರುವ ಯುವಕರನ್ನು ಕೃಷಿಯತ್ತ ಸೆಳೆಯಲು ಆಧುನಿಕ ಕೃಷಿ ಪದ್ಧತಿಯನ್ನು ಜಾರಿಗೆ ತರುವ ಅಗತ್ಯವಿದೆ' ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೇರೂರು ವಲಯದ ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತಿತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ತಾಲ್ಲೂಕಿನ ಕಾನಸೂರಿನ ಕಾಳಿಕಾಭವಾನಿ ಪ್ರೌಢಶಾಲೆಯ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕೃಷಿ ಮಹೋತ್ಸವ ಮತ್ತು  ಕ್ರೀಡೋತ್ಸವದ ಸಮಾರೋಪ  ಸಮಾರಂಭದಲ್ಲಿ ಅವರು ಮಾತನಾಡಿದರು.

`ರೈತ ಬೆಳೆದ ಬೆಳೆಗೆ ಬೆಲೆಯನ್ನು ಸರ್ಕಾರ ನಿಗದಿ ಪಡಿಸಬೇಕು. ರೈತರು ಕೃಷಿಯ ಜೊತೆಗೆ  ಹೈನುಗಾರಿಕೆ, ಕೋಳಿ ಸಾಕಾಣಿಕೆ, ಹಂದಿ ಸಾಕಾಣಿಕೆಯಂತಹ ಉಪಕಸಬುಗಳನ್ನು  ಕೈಗೊಳ್ಳಬೇಕು' ಎಂದರು. ಸಾಮಾಜಿಕ ಕಾರ್ಯಕರ್ತ ಡಾ.ಶಶಿಭೂಷಣ ಹೆಗಡೆ ಮಾತನಾಡಿ, `ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ನೌಕರಿ ಕನಿಷ ಎಂಬ ಭಾವನೆ ಹಿಂದಿನ ದಿನಗಳಲ್ಲಿ ಇತ್ತು. ಆದರೆ ಇಂದು ನೌಕರಿಗೆ ಪ್ರಥಮ ಸ್ಥಾನವಿದೆ. ಭಾರತದಲ್ಲಿ ಆಹಾರ ಉತ್ಪಾದನೆ ಹೆಚ್ಚು ಮಾಡುವ ಅನಿವಾರ್ಯತೆ ಇದೆ. ಕೇವಲ ಸಾವಯವ ಕೃಷಿಯಿಂದ ರೈತ ಬದುಕಲು ಸಾಧ್ಯವಿಲ್ಲ' ಎಂದರು.

ಶಿರಸಿ ವಕೀಲರ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, `ಸರ್ಕಾರ ಅನೇಕ ಯೋಜನೆಗಳನ್ನು ತರುತ್ತದೆ. ಆದರೆ ಅಧಿಕಾರಿಗಳು ಕಾಗದಪತ್ರದಲ್ಲಿ ಅದನ್ನು ಜಾರಿಗೆ ತರುತ್ತಾರೆಯೇ ವಿನಾ ಜನಸಾಮಾನ್ಯರಿಗೆ ತಲುಪಿಸುವ ಗೋಜಿಗೆ  ಹೋಗುವುದಿಲ್ಲ' ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಲಿನಿ ಗೌಡರ್, ಪತ್ರಕರ್ತ ರಮೇಶ ಹೆಗಡೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸತೀಶ ಶೆಟ್ಟಿ, ಜಿಲ್ಲಾ  ಜನಜಾಗೃತಿ ವೇದಿಕೆ ಸದಸ್ಯ ಸುಭಾಷ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ಉಪಸ್ಥಿತರಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರೇಮಾ ಹೆಗಡೆ ಅಧ್ಯಕ್ಷತೆ  ವಹಿಸಿದ್ದರು. 
ಕಾಳಿಕಾ ಭವಾನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಆರ್.ಶೇಷಗಿರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.