ADVERTISEMENT

ವಿದ್ಯಾರ್ಥಿಗಳಿಗೆ ಜೀವನ ನಿರ್ವಹಣೆ ಪಾಠ ಅಗತ್ಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:05 IST
Last Updated 11 ಅಕ್ಟೋಬರ್ 2011, 8:05 IST

ಶಿರಸಿ: ಮಕ್ಕಳಿಗೆ ಪಠ್ಯ ಪಾಠದ ಜೊತೆಗೆ ಜೀವನ ನಿರ್ವಹಣೆಯ ಪಾಠ ಮಾಡಬೇಕು. ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಬ್ಬ ಗುರು ಇರಬೇಕು. ಆದರೆ ಇಂದು ಈ ಕೊರತೆ ಕಾಣುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಅವರು ನಗರದ ಲಯನ್ಸ್ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಮತ್ತು ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರ ಸಂಘ ಸೋಮವಾರ ಆಯೋಜಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತ ನಾಡಿದರು.
 
ಶಿರಸಿ ಶೈಕ್ಷಣಿಕ ಜಿಲ್ಲೆಯ 31 ಶಾಲೆಗಳು ಹತ್ತನೇ ತರಗತಿಯಲ್ಲಿ ಶೇಕಡಾ 100ರ ಫಲಿತಾಂಶ ಪಡೆದಿದ್ದು, ಅವುಗಳಲ್ಲಿ 14 ಸರ್ಕಾರಿ ಶಾಲೆಗಳಾಗಿವೆ. ಸರ್ಕಾರಿ ಶಾಲೆಯೆಂದು ಹೀಗಳೆ ಯುವವರಿಗೆ ಇದು ಪ್ರತ್ಯುತ್ತರವಾಗಿದೆ ಎಂದರು.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಜೊತೆಗೆ ಸಾಧನೆಗೆ ಬೆನ್ನೆಲುಬಾದ ಶಿಕ್ಷಕರನ್ನು ಸನ್ಮಾನಿ ಸುವಂತಾಗಬೇಕು. ವಿದ್ಯಾರ್ಥಿ ಗಳು ಸಾಮೂಹಿಕವಾಗಿ ಕಡಿಮೆ ಅಂಕ ಪಡೆದ ವಿಷಯಗಳ ಕಲಿಕೆಯಲ್ಲಿ ಆದ ನೂನ್ಯತೆ ಕುರಿತು ವಿಮರ್ಶೆ ಆಗಬೇಕು ಎಂದು ಕಾಗೇರಿ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಅವರು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತ ಬಿ.ವಿ.ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅವರು ಮಾತನಾಡಿ, ಉತ್ತರ ಕನ್ನಡ ಪ್ರತಿಭಾವಂತರ ಜಿಲ್ಲೆಯಾಗಿದೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣಕ್ಕಾಗಿ ಹೊರ ಜಿಲ್ಲೆಗಳಿಗೆ ಹೋಗುತ್ತಾರೆ. ಇದರ ಹಿಂದಿನ ಕಾರಣ ಚರ್ಚೆಯಾಗಬೇಕು. ಐಐಟಿ ಮಹತ್ವದ ಕೋರ್ಸ್ ಆಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಕೋರ್ಸ್ ಲಭ್ಯವಿಲ್ಲ. ಶಿಕ್ಷಣ ಸಚಿವರು ಈ ಕುರಿತು ಗಮನ ಹರಿಸಬೇಕು ಎಂದರು.

ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ.15ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವ ಹಿಂದಿನ ಕೊರತೆ ಗಮನಿಸಬೇಕು. ಮೂರನೇ ದರ್ಜೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಅಂಕ ಗಳಿಸುವ ಕುರಿತು ಶಿಕ್ಷಕರು ಪರಿಶ್ರಮ ವಹಿಸಬೇಕು ಎಂದು ಹೇಳಿದರು.

ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಡಿ.ಕೆ.ಶಿವಕುಮಾರ, ಸಂಘಟನೆ ಅಧ್ಯಕ್ಷ ರವೀಂದ್ರ ಕೇಣಿ, ಕಾರ್ಯದರ್ಶಿ ವಾಸುದೇವ ನಾಯಕ, ಎಲ್ಲ ಆರು ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿ ರಿದ್ದರು. ವಿ.ಜಿ.ಹೆಗಡೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.