ಮುಂಡಗೋಡ: ವಿದ್ಯುತ್ ಸರಬರಾಜಿನಲ್ಲಿ ಉಂಟಾದ ಏರುಪೇರಿನಿಂದ ಸುಮಾರು 40ಕ್ಕೂ ಹೆಚ್ಚು ಟಿ.ವಿ. 10ರಷ್ಟು ಮಿಕ್ಸರ್ ಸೇರಿದಂತೆ ಗೃಹೋಪಯೋಗಿ ಸಾಮಗ್ರಿಗಳು ಹಾನಿಯಾದ ಘಟನೆ ಪಟ್ಟಣದ ಕಂಬಾರಗಟ್ಟಿ ಪ್ಲಾಟ್ನಲ್ಲಿ ಮಂಗಳವಾರ ಸಂಭವಿಸಿದೆ.
ಹಾನಿಯಾದ ವಸ್ತುಗಳನ್ನು ದುರಸ್ತಿ ಮಾಡಿಸಿಕೊಡುವಂತೆ ಒತ್ತಾಯಿಸಿದ ನಿವಾಸಿಗಳು, ಹಾನಿಯಾದ ವಸ್ತುಗಳನ್ನು ರಸ್ತೆ ಮೇಲಿಟ್ಟು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕಾಗಮಿಸಿದ ಹೆಸ್ಕಾಂ ಅಧಿಕಾರಿ ಹಾನಿಯಾದ ವಸ್ತುಗಳನ್ನು ನಾಳೆ ಪರಿಶೀಲಿಸಿ ದುರಸ್ತಿ ಮಾಡಿಸಲಾಗುವದು ಎಂದರು. ಆದರೆ ಇದಕ್ಕೆ ಒಪ್ಪದ ನಿವಾಸಿಗಳು ಹಾನಿಯಾದ ವಸ್ತುಗಳನ್ನು ಹೆಸ್ಕಾಂ ಕಚೇರಿಯಲ್ಲಿಯೇ ಇಟ್ಟುಕೊಂಡು ನಾಳೆ ದುರಸ್ತಿ ಮಾಡಿಸಿಕೊಡಬೇಕೆಂದು ಒತ್ತಾಯಿಸಿದರು.
ನಂತರ ಆಗಮಿಸಿದ ತಹಶೀಲ್ದಾರ್ ನಾರಾಯಣ ರಾವ್ ಮಾತನಾಡಿ ಸದ್ಯ ಹಾನಿಯಾದ ವಸ್ತುಗಳನ್ನು ಮರಳಿ ಮನೆಗೆ ತೆಗೆದುಕೊಂಡು ಹೋಗಿ, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಸವಾಗಲು ನೈಜ ಕಾರಣವನ್ನು ಪತ್ತೆ ಹಚ್ಚಿ ವರದಿ ನೀಡಲಿದ್ದು ನಂತರ ಹಾನಿಯಾದ ವಸ್ತುಗಳನ್ನು ದುರಸ್ತಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.