ಅಂಕೋಲಾ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆಗುತ್ತಿರುವ ಪದೇ ಪದೇ ವಿದ್ಯುತ್ ವ್ಯತ್ಯಯದಿಂದ ಆಕ್ರೋಶಗೊಂಡ ಜನರು ಸೋಮವಾರ ಹೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ದೀಪಾವಳಿಯನ್ನು ಜನರು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಸೋಮವಾರ ಸಂಜೆಯಿಂದಲೇ ನಗರದಲ್ಲಿ ಭಾಗದಲ್ಲಿ ವಿದ್ಯುತ್ ಪದೇ ಪದೇ ಕೈಕೊಟ್ಟು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.ಪೇಟೆಯಲ್ಲಿ ಜನರ ಖರೀದಿಗೆ, ಮತ್ತಿತರರ ಕೆಲಸಗಳಿಗೆ ಇದರಿಂದ ತೊಂದರೆಯಾಯಿತು.
ಹೆಸ್ಕಾಂಗೆ ದೂರು ನೀಡಲು ಹೋದರೆ ದೂರವಾಣಿಯನ್ನು ಎತ್ತಿಡಲಾಗಿತ್ತು, ವಿಚಾರಿಸಬೇಕೆಂದರೆ ಅಲ್ಲಿ ಅಧಿಕಾರಿಗಳು ಇರಲಿಲ್ಲ. ಇದರಿಂದ ಆಕ್ರೋಶಗೊಂಡ ನಾಗರಿಕರು ನಗರದಲ್ಲಿ ಲಾಟೀನು, ಮೇಣದ ಬತ್ತಿ ಹಿಡಿದು ಹೆಸ್ಕಾಂ ವಿರುದ್ಧ ಘೋಷಣೆ ಹಾಕುತ್ತ ಪೊಲೀಸ್ ನಿಲ್ದಾಣದ ವೃತ್ತಕ್ಕೆ ಬಂದರು.
ಅಧಿಕಾರಿಗಳು ಬಾರದ್ದರಿಂದ ರಸ್ತೆ ತಡೆಗೆ ಮುಂದಾದಾಗ ಪೊಲೀಸರು ತಕ್ಷಣ ಅಧಿಕಾರಿಗಳನ್ನು ಕರೆಯಿಸಿದರು. ಮಂಗಳವಾರದಿಂದ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಪ್ರತಿಭಟನಾಕಾರರು ಹೆಸ್ಕಾಂ ಸಿಬ್ಬಂದಿಗೆ ಲಾಟೀನು ನೀಡಿದರು.
ಪ್ರತಿಭಟನೆಯಲ್ಲಿ ವಕೀಲ ಉಮೇಶ ನಾಯ್ಕ. ಪ.ಪಂ. ಸದಸ್ಯ ರಾಜೇಂದ್ರ ನಾಯ್ಕ, ಸುರೇಶ ವೇರ್ಣೇಕರ, ದಯಾನಂದ ಪ್ರಭು, ಅಖಿಲ್ ಶೇಖ್, ರವೀಶ ಶೆಟ್ಟಿ, ವಿಠ್ಠಲದಾಸ ಕಾಮತ, ರಂಜನ್ ನಾಯಕ, ರಾಮಕೃಷ್ಣ ನಾಯ್ಕ, ಗಣೇಶ ಶೆಟ್ಟಿ, ಮಂಜುನಾಥ ಜಾಂಬಳೇಕರ, ವಿದ್ಯಾಧರ ಮೊರಬಾ, ವಿನಾಯಕ ಗುಡಿಗಾರ ಪ್ರಕಾಶ ನಾಯ್ಕ, ಮಂಜುನಾಥ ನಾಯ್ಕ ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.