ಮುಂಡಗೋಡ: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗುಜರಾತ್, ಉತ್ತರಪ್ರದೇಶ, ಕಾಶ್ಮೀರ ಹಾಗೂ ಹರಿಯಾಣದಲ್ಲಿ ದಲಿತರು ಹಾಗೂ ಹೆಣ್ಣುಮಕ್ಕಳ ಮೇಲೆ ಹಲ್ಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಘಟನೆ ಖಂಡಿಸಬೇಕಾದ ಪ್ರಧಾನಿ ಮೋದಿ ಮಾತ್ರ ಬಾಯಿಬಿಡುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ತಾಲ್ಲೂಕಿನ ನ್ಯಾಸರ್ಗಿ ಪ್ಲಾಟ್ನಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಶಿವರಾಮ ಹೆಬ್ಬಾರ್ ಪರ ಮತಯಾಚನೆ ಮಾಡಿದರು. ‘ಮಹಿಳೆಯರು, ದಲಿತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ದೌರ್ಜನ್ಯವೆಸಗುವ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ವಿಶ್ವದಲ್ಲಿಯೇ ಕರ್ನಾಟಕ ಶಾಂತಿಪ್ರಿಯ ಹಾಗೂ ಅಭಿವೃದ್ದಿ ಹೊಂದಿದ ರಾಜ್ಯ ಎಂಬ ಹೆಸರು ಹೊಂದಿದೆ. ಅದನ್ನು ಮುಂದುವರೆಸಿಕೊಂಡು ಹೋಗಲು ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಲೇ ಪ್ರತಿಯೊಬ್ಬರಿಗೂ ಮಾತನಾಡುವ ಹಾಗೂ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಹೊಂದಿದ್ದಾರೆ. ಆದರೆ, ಈ ಜಿಲ್ಲೆಯ ಸಂಸದರು ಸಂವಿಧಾನ ಮುಗಿಸುವ ಮಾತು ಹೇಳುತ್ತಿದ್ದಾರೆ. ಇದರಿಂದ ಮತ್ತೆ ಸಮಾಜದಲ್ಲಿ ಭೇದಭಾವ, ದ್ವೇಷ ಹಾಗೂ ಅಸೂಯೆ ನೆಲೆಯೂರುತ್ತದೆ. ಬಡವರು ಹಾಗೂ ದುರ್ಬಲ ವರ್ಗದವರ ಅಳಿವು ಉಳಿವಿನ ಪ್ರಶ್ನೆ ಏಳುತ್ತದೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸಂವಿಧಾನ ರಕ್ಷಿಸಬೇಕಾಗಿದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ್, ಪ್ರಮುಖರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.