ADVERTISEMENT

ಹಿತೈಷಿಗಳೊಂದಿಗೆ ಚರ್ಚಿಸಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 9:10 IST
Last Updated 6 ಆಗಸ್ಟ್ 2012, 9:10 IST

ಕಾರವಾರ: `ಕ್ಷೇತ್ರದ ಮತದಾರರು, ಹಿತೈಷಿಗಳೊಂದಿಗೆ ಚರ್ಚೆ ನಡೆಸಿ, ವಿಮರ್ಶೆಗೊಳಪಡಿಸಿದ ಬಳಿಕ ಪಕ್ಷ ತ್ಯಜಿಸುವ ಅಥವಾ ಬೇರೆ ಪಕ್ಷ ಸೇರುವ ಬಗ್ಗೆ ವಿಚಾರ ಮಾಡುತ್ತೇನೆ~ ಎಂದು ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅಂಕೋಲಾ ತಾಲ್ಲೂಕಿನ ಬಾಸಗೋಡ ಗ್ರಾಮದ `ಸರಯೂಬನ~ ದಲ್ಲಿ ಪಹರೆ ವೇದಿಕೆ ಭಾನುವಾರ ಹಮ್ಮಿಕೊಂಡ ಕೃಷಿ ಉತ್ತೇಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭತ್ತದ ಸಸಿ ನಾಟಿಮಾಡಿದ ಬಳಿಕ ಸುದ್ದಿಗಾರರೊಂದಿಗೆ   ಮಾತನಾಡಿದರು.

`ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ನಾನು ರಾಜೀನಾಮೆ ನೀಡ ಲಿಲ್ಲ. ಮೊದಲು ವಚನಕೊಟ್ಟು ಆಮೇಲೆ ಮೋಸ ಮಾಡುವುದು ಪಕ್ಷ ದೊಳಗೆ ಪರಿಪಾಠವಾಗಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ~ ನೀಡಿದೆ ಎಂದರು.

`ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬಂದಾಗ ನನ್ನದೇ ಆದ ಪರಿಕಲ್ಪನೆಯಲ್ಲಿ ಜನ ಸೇವೆ ಮಾಡಬೇಕು ಎನ್ನುವ ದೃಷ್ಟಿ ಯಿಂದ ಅಂದು ಪಕ್ಷದ ಅಧ್ಯಕ್ಷರಾಗಿದ್ದ ಸದಾನಂದ ಗೌಡ ಮತ್ತು ಸಂಘದ ಹಿರಿಯರಾದ ಪ್ರಭಾಕರ ಭಟ್ ಅವರ ಬಳಿ ಕೇಳಿಕೊಂಡಿದ್ದೆ. ಆದರೆ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಸಂಪುಟದಲ್ಲಿ ಸಚಿವ ಸ್ಥಾನ ಬಯಸಿರಲಿಲ್ಲ~ ಎಂದರು.

ಹೋಲಿಕೆ ಬೇಡ: `ನನ್ನನ್ನು ಕುಂದಾಪುರದ ವಾಜಪೇಯಿ ಎಂದು ಕರೆಯುತ್ತಿದ್ದಾರೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ಹೀಗೆ ಕರೆಯುವುದರಿಂದ ನನಗಷ್ಟೇ ಅಲ್ಲ ವಾಜಪೇಯಿ ಅವರಿಗೂ ಅಗೌರವ ತೋರಿದಂತಾಗುತ್ತದೆ.

ನಾವು ಅವರ ಆದರ್ಶಗಳನ್ನು ಪಾಲಿಸಬಹುದೇ ಹೊರತು ಇನ್ನೊಬ್ಬ ಅಟಲ್ ಬಿಹಾರಿ ವಾಜಪೇಯಿ ಆಗಲೂ ಸಾಧ್ಯವಿಲ್ಲ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.