ADVERTISEMENT

‘ಆಧುನಿಕ ಜೀವನ ಶೈಲಿ ಕಾಯಿಲೆ ಮೂಲ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:14 IST
Last Updated 14 ಡಿಸೆಂಬರ್ 2013, 5:14 IST

ಶಿರಸಿ: ತಾಲ್ಲೂಕಿನ ಅಗಸಾಲ ಬೊಮ್ಮನಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ, ಭಗವದ್ಗೀತಾ ನೃತ್ಯರೂಪಕ, ಯಕ್ಷಗಾನ, ಪರಿಸರ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ತೀಚೆಗೆ ಜರುಗಿದವು.

ಯೋಗ, ನಿಸರ್ಗ ಚಿಕಿತ್ಸೆ, ಭಗವದ್ಗೀತೆ ಕುರಿತು ಉಪನ್ಯಾಸ ನೀಡಿದ ನಿಸರ್ಗ ಟ್ರಸ್ಟ್‌ ಮುಖ್ಯಸ್ಥ ಡಾ.ವೆಂಕಟ್ರಮಣ ಹೆಗಡೆ, ‘ದೈಹಿಕ, ಶ್ರಮ, ಪ್ರಕೃತಿದತ್ತ ಆಹಾರಗಳನ್ನು ಸೇವಿಸಿದವರಿಗೆ ಕಾಯಿಲೆ ಬರುವುದಿಲ್ಲ. ಆಧುನಿಕ ಶೈಲಿಯ ಜೀವನವೇ ಹಲವಾರು ಕಾಯಿಲೆಗಳಿಗೆ ಮೂಲ ವಾಗಿದ್ದು, ಮನಸ್ಸು ಹಾಗೂ ದೇಹಕ್ಕೆ ಯೋಗ, ಪ್ರಾರ್ಥನೆ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು’ ಎಂದರು.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ‘ವಿವಿಧ ಸಾಮಾಜಿಕ ಚಟುವಟಿಕೆ ನಡೆಸುತ್ತಿರುವ ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ ಚಟುವಟಿಕೆ ಶ್ಲಾಘನೀಯ’ ಎಂದರು.

ಕ್ಯಾಂಪ್ಕೋ ಸಂಸ್ಥೆ ನಿರ್ದೇಶಕ ಸೀತಾರಾಮ ಭಟ್ಟ ಪರಿಸರ ವಾರ್ತಾಪತ್ರ ಬಿಡುಗಡೆಗೊಳಿಸಿದರು. ಗ್ರಾಮ ಪಂಚಾಯ್ತಿ ಸದಸ್ಯರಾದ ಸುಶೀಲಾ ಪೂಜಾರಿ, ಯೋಗೀಶ್‌ ಭಂಡಾರಿ, ವಿಎಫ್‌ಸಿ ಅಧ್ಯಕ್ಷ ವಿಶ್ವನಾಥ ಹೆಗಡೆ, ಸೀಮಾ ಮಾತೃ ಮಂಡಳಿ ಅಧ್ಯಕ್ಷೆ ಸವಿತಾ ಹೆಗಡೆ, ಸುಬ್ರಾಯ ಭಟ್ಟ ಗಡಿಗೆಹೊಳೆ, ಮಕ್ಕಳ ಪರಿಸರ ಯಕ್ಷಗಾನ ತರಬೇತುದಾರ ರಮಾನಂದ ಎಲೆಕೊಪ್ಪ ಉಪಸ್ಥಿತರಿದ್ದರು. ನಿರ್ಮಲಾ ಭಟ್ಟ ಸ್ವಾಗತಿಸಿದರು. ಸುಮಾ ಹೆಗಡೆ ವಂದಿಸಿದರು.

ಶ್ರೀಕಾಂತ ಅಗಸಾಲ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಶಿಬಿರದಲ್ಲಿ ಡಾ.ವಿನಾಯಕ ಹೆಬ್ಬಾರ್‌, ಡಾ.ಪ್ರವೀಣ ಜೇಕಬ್‌ ಪಾಲ್ಗೊಂಡರು.

ಐಶ್ವರ್ಯಾ ಗಡಿಗೆಹೊಳೆ, ನಯನಾ ಗೌಡ ಗೀತೋಪದೇಶದ ನೃತ್ಯರೂಪಕ, ಮಾತೃಮಂಡಳಿಯ ಗೀತಾ ಪಠಣ,  ಮಕ್ಕಳ ‘ಗಿರಿಪೂಜೆ’, ಕಶ್ಯಪ ಪ್ರತಿಷ್ಠಾನದ ಸುಧನ್ವಾರ್ಜುನ ಯಕ್ಷಗಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.