ಕಾರವಾರ:ಲಾಕ್ಡೌನ್ನಿಂದ ಜಿಲ್ಲೆಯವಿವಿಧೆಡೆ ಬಾಕಿಯಾಗಿದ್ದ 242 ಕಾರ್ಮಿಕರನ್ನು ಅವರ ಊರುಗಳಿಗೆ ಮಂಗಳವಾರ ಕಳುಹಿಸಿಕೊಡಲಾಯಿತು. ಕಾರವಾರ, ಮುರ್ಡೇಶ್ವರ ಮತ್ತು ಜೊಯಿಡಾದಿಂದ ಕೆ.ಎಸ್.ಆರ್.ಟಿ.ಸಿ.ಯ 12 ಬಸ್ಗಳಲ್ಲಿ ತಮ್ಮೂರಿಗೆ ಪ್ರಯಾಣಿಸಿದರು.
ಬಸ್ಗಳಲ್ಲಿ ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಲಾ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು.ಬೀದರ್, ರಾಯಚೂರು, ಚಿಕ್ಕಬಳ್ಳಾಪುರ, ಸುರಪುರ, ಸಿಂದಗಿ, ಕುಷ್ಟಗಿ ಮುಂತಾದ ಪ್ರದೇಶಗಳ ಕಾರ್ಮಿಕರು ಕೂಲಿ ಕೆಲಸಕ್ಕಾಗಿ ಜಿಲ್ಲೆಗೆ ಬಂದಿದ್ದರು. ಆದರೆ, ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಲುವಾಗಿ ಲಾಕ್ಡೌನ್ ಘೋಷಣೆಯಾದ ಬಳಿಕ ತಮ್ಮ ಊರಿಗೆ ಮರಳಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕೈಯಲ್ಲಿದ್ದ ಹಣವೂ ಖರ್ಚಾಗಿ ಅತಂತ್ರ ಸ್ಥಿತಿಯಲ್ಲಿದ್ದರು.
ಸರ್ಕಾರವು ಕಾರ್ಮಿಕರನ್ನು ಅವರು ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.ತಮ್ಮ ಸಾಮಾನು ಸರಂಜಾಮುಗಳನ್ನು ಗಂಟುಮೂಟೆ ಕಟ್ಟಿಕೊಂಡು, ಮಕ್ಕಳನ್ನು ಕಂಕುಳಲ್ಲಿಎತ್ತಿಕೊಂಡು ಬಸ್ಗಳ ಬಳಿ ಸೇರಿದ್ದರು. ಇಷ್ಟು ದಿನ ತಮಗೆಆಶ್ರಯ ನೀಡಿದ ಜಿಲ್ಲಾಡಳಿತಕ್ಕೆ ಇದೇವೇಳೆ ಕೃತಜ್ಞತೆ ಸಲ್ಲಿಸಿದರು.
ಕಾರ್ಮಿಕರನ್ನು ಅವರ ಊರುಗಳಿಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಬೇಕು ಎಂದುಸರ್ಕಾರದ ಆದೇಶದ ಮೇರೆಗೆ ಈ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕರಿಗೆ ಮುಖಗವಸು, ಕುಡಿಯುವ ನೀರಿನ ಬಾಟಲಿಗಳು ಹಾಗೂ ಬಿಸ್ಕತ್ತು ನೀಡಿ ಬೀಳ್ಕೊಡಲಾಯಿತು.
ಕಾರವಾರದಲ್ಲಿ ಉಪ ವಿಭಾಗಾಧಿಕಾರಿ ಪ್ರಿಯಾಂಗಾ, ತಹಶೀಲ್ದಾರ್ ಆರ್.ವಿ.ಕಟ್ಟಿ, ಕಾರ್ಮಿಕ ಅಧಿಕಾರಿ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಮುಂತಾದ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಉಸ್ತುವಾರಿ ನೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.