ADVERTISEMENT

‘ದೇಶದ ಎಲ್ಲ ಜನರ ಹಿತ ಕಾಯುವುದು ಸಂವಿಧಾನದ ಆಶಯ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 8:45 IST
Last Updated 29 ಜನವರಿ 2018, 8:45 IST

ಹೊನ್ನಾವರ: ಜಾತಿ–ಧರ್ಮ, ವರ್ಗ ಭೇದವಿಲ್ಲದೆ ದೇಶದ ಎಲ್ಲ ಜನರ ಸಂರಕ್ಷಣೆ ಹಾಗೂ ಅವರೆಲ್ಲರ ಹಿತ ಕಾಯುವ ಆಶಯ ಹೊತ್ತಿರುವ ಭಾರತದ ಸಂವಿಧಾನ ಜಾಗತಿಕ ಮನ್ನಣೆ ಗಳಿಸಿದೆ ಎಂದು ತಹಶೀಲ್ದಾರ್ ವಿ.ಆರ್.ಗೌಡ ಹೇಳಿದರು. ತಾಲ್ಲೂಕು ಆಡಳಿತದಿಂದ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು ಮಾತನಾಡಿದರು.

‘ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೆ ಹಕ್ಕನ್ನು ನೀಡಿರುವ ಜತೆಗೆ ಮಾಡಬೇಕಾದ ಕರ್ತವ್ಯಗಳನ್ನು ಸೂಚಿಸಿದ್ದು ಕರ್ತವ್ಯ ನಿರ್ವಹಣೆಯಿಂದ ಮಾತ್ರ ಹಕ್ಕಿಗೆ ಮನ್ನಣೆ ಸಿಗುತ್ತದೆ. ಪ್ರತಿಯೊಬ್ಬ ಪ್ರಜೆಯೂ ದೇಶದ ಆಸ್ತಿಯಾಗಬೇಕು. ತಾಲ್ಲೂಕಿನಲ್ಲಿರುವ ಅಪೂರ್ವ ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ದೇಶಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ’ ಎಂದು ಅವರು ಶ್ಲಾಘಿಸಿದರು.

ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್, ಸೇವಾ ದಳ ಮೊದಲಾದವುಗಳಿಂದ ನಡೆದ ಪಥಸಂಚಲನ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಆಕರ್ಷಣೀಯವಾಗಿತ್ತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ADVERTISEMENT

ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ನ್ಯಾಯಾಧೀಶರಾದ ಎಂ.ವಿ.ಚನ್ನಕೇಶವ ರೆಡ್ಡಿ, ಮಧುಕರ ಪಿ.ಭಾಗವತ, ಸನ್ಮತಿ ಎಸ್.ಆರ್., ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಜಶ್ರೀ ನಾಯ್ಕ ಇದ್ದರು. ರಾಜು ಹೆಬ್ಬಾರ, ಸುಧೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.