ಕುಮಟಾ: ಟೆಂಪೊ ಟ್ರ್ಯಾಕ್ಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟು ಟ್ರ್ಯಾಕ್ಸ್ನಲ್ಲಿದ್ದ ಒಂಬತ್ತು ಜನರು ಗಾಯಗೊಂಡ ಘಟನೆ ಭಾನುವಾರ ಬೆಳಗಿನ ಜಾವ ಸಮೀಪದ ಹೊನಮಾಂವ್ ಗುಜರಿ ಅಂಗಡಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.
ಕೂಲಿ ಕೆಲಸ ಮಾಡುವ ಕುಮಟಾದ ಉಪ್ಪಾರಕೇರಿ ನಿವಾಸಿ ಬೈಕ್ ಸವಾರ ಲಂಬೋದರ ಉಪ್ಪಾರ (27) ಮೃತ ವ್ಯಕ್ತಿ. ಇಳಕಲ್ನ ಸಂಗಪ್ಪ ಗುಗ್ಗರಿ, ಸ್ಪಂದನಾ ಗುಗ್ಗರಿ, ಸಂತೋಷ ಶಂಕರಗುಡಿ, ಸುಭಾಸ್ ದುರ್ಗಪ್ಪ, ಕುಷ್ಟಗಿಯ ಶರಣಮ್ಮ ಕಂಚೇರ, ಯಶ್ವಂತ ಕಂಚೇರ, ದುರ್ಗೇಶ ಕಂಚೇರ, ಗಜೇಂದ್ರಗಡದ ಶ್ರೀನಿವಾಸ ರಾಠೋಡ, ರೋಣದ ಶ್ರೀಕಾಂತ ಜಾಲಿಹಾಳ ಗಾಯಗೊಂಡವರು.
ಗಾಯಗೊಂಡವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಕುಮಟಾ ಕಡೆಯಿಂದ ಹೊನ್ನಾವರ ಕಡೆ ಹೊರಟಿದ್ದ ಟ್ರ್ಯಾಕ್ಸ್ ಹಾಗೂ ಎದುರು ಬಂದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕಳಿಸಲಾಗಿದೆ. ವಾಹನ ಚಾಲಕ ಗದಗದ ಶ್ರೀಕಾಂತ ಮೈಲಾರಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.