ಮುಂಡಗೋಡ (ಉತ್ತರ ಕನ್ನಡ):'ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅಪ್ಪ- ಮಕ್ಕಳ ಸರ್ಕಾರ ಇರುವುದಿಲ್ಲ. ಇಬ್ಬರು ಮಕ್ಕಳ ಬದಲು 28 ಮಕ್ಕಳಿದ್ದಿದ್ದರೆ ಎಲ್ಲ ಕ್ಷೇತ್ರಗಳಿಗೂ ಒಬ್ಬೊಬ್ಬರನ್ನು ನಿಲ್ಲಿಸುತ್ತಿದ್ದರು. 224 ಮೊಮ್ಮಕ್ಕಳು ಇದ್ದಿದ್ದರೆ ಇಡೀ ಕರ್ನಾಟಕದಲ್ಲಿಯೇ ಸ್ಪರ್ಧಿಸುತ್ತಿದ್ದರು'ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆಟೀಕಿಸಿದರು.
ತಾಲ್ಲೂಕಿನ ಮಳಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಲಾದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
'ಅವರು ಇಷ್ಟೆಲ್ಲ ರಾಜಕಾರಣ ಮಾಡಿಯೂ ಪಾಪ ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇವರೆಲ್ಲ ಯಾರು' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
'ರಾಜ್ಯದಲ್ಲಿ ಒಂದು ಕುಟುಂಬ, ದೆಹಲಿಯಲ್ಲಿ ಒಂದು ಕುಟುಂಬ ಲೂಟಿ ಹೊಡೆಯಲು ನಿಂತಿವೆ.ಕಾಂಗ್ರೆಸ್ ಮುಕ್ತ ರಾಜ್ಯ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. 22 ವರ್ಷಗಳ ಹಿಂದೆ ನಾನೊಂದು ಮಾತು ಹೇಳುತ್ತಿದ್ದೆ. ನಾವು ವೋಟ್ ಹಾಕುವ ಸ್ಟೈಲ್ ಹೇಗಿರಬೇಕೆಂದರೆ, ನಮ್ಮೆದುರು ಯಾರೂ ಇರಬಾರದು. ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ ಆಗಿದೆ. ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.